ಬಳ್ಳಾರಿ(ಕಂಪ್ಲಿ) ಜೂ.29: ತಾಲ್ಲೂಕಿನ ದೇವಸಮುದ್ರ ಗ್ರಾ.ಪಂ.ನ ನೂತನ ಉಪಾಧ್ಯಕ್ಷರಾಗಿ ಶಾರದಮ್ಮ ಜಡೆಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಗಳಾದ ತಾ.ಪಂ.ಇಒ ಮಹ್ಮದ್ ಖಿಜರ್ ಘೊಷಣೆ ಮಾಡಿದರು. ದೇವಸಮುದ್ರ ಗ್ರಾ.ಪಂ.ನ ಉಪಾಧ್ಯಕ್ಷರಾಗಿದ್ದ ಹೊನ್ನಮ್ಮ ಹರಿಜನ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಶಾರದಮ್ಮ ಜಡೆಪ್ಪ ಒಬ್ಬರೇ ನಾಮಪತ್ರವನ್ನು ಸಲ್ಲಿಸಿದ್ದರಿಂದ ಹಾಗೂ ಕ್ರಮಬದ್ಧವಾಗಿದ್ದರಿಂದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ನಾಗಮ್ಮ ಕರೇಗೌಡ್ರು, ತಾ.ಪಂ.ಸಿಬ್ಬಂದಿಗಳಾದ ಸುರೇಶ್, ನಾಗರಾಜ, ಸುರೇಶ್, ಪಿಡಿಒ ಸಾವಿತ್ರಿ ಗೌರೋಜಿ,ಕಾರ್ಯದರ್ಶಿ ಕುರಿ ಹೊನ್ನೂರಪ್ಪ, ಗ್ರಾ.ಪಂ.ಸದಸ್ಯರು, ಗ್ರಾ.ಪಂ.ಸಿಬ್ಬಂದಿಗಳು ಭಾಗವಹಿಸಿದ್ದರು. ಅಭಿನಂದನೆಃ- ಗ್ರಾ.ಪಂ.ನೂತನ ಉಪಾಧ್ಯಕ್ಷೆ ಶಾರದಮ್ಮ ಜಡೆಪ್ಪ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಾಜಪ ಕ್ಷೇತ್ರಾಧ್ಯಕ್ಷ ಅಳ್ಳಳ್ಳಿ ವೀರೇಶಗೌಡ, ಕಡೇಮನಿ ಪಂಪಾಪತಿ ಮಾತನಾಡಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ನೂತನ ಉಪಾಧ್ಯಕ್ಷರು ಶ್ರಮಿಸಲಿ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗೆ ಶ್ರಮಿಸಲಿ ಎಂದರಲ್ಲದೆ, ಮನರೇಗಾ ಯೋಜನೆಯಲ್ಲಿ ಗ್ರಾ.ಪಂ.ವ್ಯಾಪ್ತಿಯ ರೈತರ ಜಮೀನಿನಲ್ಲಿ ಬದು ನಿರ್ಮಾಣ ಸೇರಿದಂತೆ ಕಾಲುವೆಗಳ, ಉಪ ಕಾಲುವೆಗಳ ಹೂಳು ತೆಗೆಯಲು ಅವಕಾಶಗಳನ್ನು ಮಾಡಿಕೊಡಬೇಕೆಂದು ಗ್ರಾ.ಪಂ.ಪಿಡಿಒ ಹಾಗೂ ತಾಪಂ. ಇಒ ಅವರಿಗೆ ಒತ್ತಾಯಿಸಿದರು. ಗ್ರಾಮದ ಮನರೇಗಾ ಕೂಲಿ ಕಾರ್ಮಿಕರನ್ನು ದೂರದ ಕೆರೆಯಲ್ಲಿ ಹೂಳು ತೆಗೆಯಲು ಕರೆದುಕೊಂಡು ಹೋಗಿ ಸಮಯ ಹಾಗೂ ಹಣವನ್ನು ವ್ಯರ್ಥ ಮಾಡದೇ ಗ್ರಾ.ಪಂ.ವ್ಯಾಪ್ತಿಯಲ್ಲಿಯೇ ಅವರಿಗೆ ಕೆಲಸವನ್ನು ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ತಾ.ಪಂ.ಇಒ ಮಹ್ಮದ್ ಖಿಜರ್ ಗ್ರಾಮದ ಮುಖಂಡರ ಹಾಗೂ ರೈತರ ಮನವಿಯ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆಯನ್ನು ನೀಡಿದರು.

0 Comments