ಬಳ್ಳಾರಿ ಮೇ 14. ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಮೂರುವರೆ ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ಆಪರೇಷನ್ ಮಾಡಿದ್ದಾರೆ ಎನ್ನುವ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳ್ಳಾರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ನವರೇ ಒಳ ಜಗಳ ಮಾಡಿಕೊಂಡು ಅದನ್ನು ನಮ್ಮ ಮೇಲೆ ದೂರುತ್ತಿದ್ದಾರೆ ಎಂದು ಹೇಳಿದ ಅವರು, ಹಣ ಪಡೆದವರು ಕಾಂಗ್ರೆಸ್ನವರೇ, ಹಣ ಕೊಟ್ಟವರು ಕಾಂಗ್ರೆಸ್ನವರೇ, ಈ ವಿಚಾರ ನಮಗೆ ಗೊತ್ತಿಲ್ಲ, ಇದರಲ್ಲಿ ಶ್ರೀರಾಮುಲು ಅವರನ್ನು ಯಾಕೆ ಎಳೆದು ತರುತ್ತಿದ್ದಾರೆ? ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಶ್ರೀರಾಮುಲು ಮೇಲೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು. ನಾವು ಪಬ್ಲಿಕ್ನಲ್ಲಿರುತ್ತೇವೆ ರಿಪಬ್ಲಿಕ್ ಆಫ್ ಬಳ್ಳಾರಿ ಮಾಡೋದಿಲ್ಲ, ಶ್ರೀರಾಮುಲು ಹೆಸರು ಎತ್ತುವ ನೈತಿಕ ಹಕ್ಕು ಕಾಂಗ್ರೆಸ್ಗೆ ಇಲ್ಲ ಎಂದು ಹೇಳಿದ ಶಾಸಕ ರೆಡ್ಡಿ, ಮಟ್ಕಾ ಮತ್ತು ಜೂಜಾಟದ ಕ್ಲಬ್ಗಳನ್ನು ಹುಟ್ಟಿದಾಗಿನಿಂದಲೂ ಕಾಂಗ್ರೆಸ್ ನಡೆಸುತ್ತಿದ್ದಾರೆ, ಅದು ಶ್ರೀರಾಮುಲು ಬಂದ ಮೇಲೆ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದರು. ಕೆಎಂಆರ್ಸಿ ಹಣದಲ್ಲಿ ಬಳ್ಳಾರಿಯನ್ನು ಅತಿ ಹೆಚ್ಚು ಅಭಿವೃದ್ಧಿ ಮಾಡಿರುವ ಕೀರ್ತಿ ಶ್ರೀರಾಮುಲುಗೆ ಸಲ್ಲುತ್ತದೆ ಎಂದು ಹೇಳಿದ ಅವರು, ಶ್ರೀರಾಮುಲು ಗ್ರಾಮಾಂತರಕ್ಕೆ ಸ್ಪರ್ಧೆ ಮಾಡಬಹುದು ಎನ್ನುವ ಭಯದಿಂದ ಕಾಂಗ್ರೆಸ್ ಒಳಜಗಳಕ್ಕೆ ರಾಮುಲು ಹೆಸರು ಹೇಳುತ್ತಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಮುರಹರಿಗೌಡ, ಮಾಜಿ ಶಾಸಕ ಟಿ.ಹೆಚ್.ಸುರೇಶ್ಬಾಬು, ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹೆಚ್.ಹನುಮಂತಪ್ಪ, ವಿರುಪಾಕ್ಷಗೌಡ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲಣ್ಣ, ಕೆ.ಎಂ.ಎಫ್. ನಿರ್ದೇಶಕ ವೀರಶೇಖರರೆಡ್ಡಿ, ಪಾಲಿಕೆ ಸದಸ್ಯರಾದ ಇಬ್ರಾಹಿಂಬಾಬು, ಕೆ.ಎಸ್.ಅಶೋಕ್ಕುಮಾರ್, ಕೋನಂಕಿ ತಿಲಕ್, ಬಿ.ಗೋವಿಂದರಾಜುಲು, ಹನುಮಂತ, ಹನುಮಂತ ಗುಡಿಗಂಟಿ, ಬಿಜೆಪಿ ಮುಖಂಡರಾದ ಹೇಮಣ್ಣ, ವೆಂಕಟರಾಮಿರೆಡ್ಡಿ, ಸುರೇಂದ್ರ, ರಾಮಾಂಜಿನಿ, ಪ್ರಹ್ಲಾದ್, ರಾಮ್ಪ್ರಸಾದ್, ಬಸವರಾಜ್, ಬಳ್ಳಾರಿ ಜಿಲ್ಲಾ ಮಾಧ್ಯಮ ವಕ್ತಾರ ಡಾ. ಬಿ.ಕೆ.ಸುಂದರ್ ಹಾಗೂ ಬಳ್ಳಾರಿ ಜಿಲ್ಲಾ ಮಾಧ್ಯಮ ಸಹ ಸಂಚಾಲಕರಾದ ತೊಗರಿ ರಾಜೀವ್ ಅವರು ಹಾಜರಿದ್ದರು.

0 Comments