ವಿಜಯನಗರ ಜಿಲ್ಲೆಯನ್ನು ಆದರ್ಶಜಿಲ್ಲೆಯಾಗಿ ಅಭಿವೃದ್ದಿಗೊಳಿಸಲು ಒಗ್ಗಟ್ಟಿನ ಪ್ರಯತ್ನ: ಸಚಿವೆ ಶಶಿಕಲಾ ಜೊಲ್ಲೆ*
- ಉಸ್ತುವಾರಿವಹಿಸಿಕೊಂಡು ಪ್ರಪ್ರಥಮವಾಗಿ ಜಿಲ್ಲೆಗೆ ಆಗಮನ
- ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶ್ರೀ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮದ ಉದ್ಘಾಟನೆ
*ಹೊಸಪೇಟೆ, ಹಂಪಿ ಫೆಬ್ರವರಿ 01*: ವಿಶ್ವವಿಖ್ಯಾತ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ವಿಜಯನಗರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕವಾಗಿರುವುದು ನನ್ನ ಪೂರ್ವಜನ್ಮದ ಪುಣ್ಯ. ಈ ಜಿಲ್ಲೆಯ ಸ್ಥಾಪನೆಗೆ ಕಾರಣೀಭೂತರಾದ ಸಚಿವರಾದ ಆನಂದಸಿಂಗ್, ಜಿಲ್ಲೆಯ ಇತರೆ ಜನಪ್ರನಿಧಿಗಳು ಹಾಗೆಯೇ ಜಿಲ್ಲೆಯ ಅಧಿಕಾರಿಗಳ ಜೊತೆಗೂಡಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ತಿಳಿಸಿದರು.
ಇಂದು ವಿಜಯನಗರ ಜಿಲ್ಲೆಯ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಶ್ರೀ ಪುರಂದರದಾಸರ ಆರಾಧನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಜಯನಗರ ಸಾಮ್ರಾಜ್ಯ ಪ್ರಾಚೀನ ಕಾಲದಿಂದಲೂ ಕೂಡಾ ವಿಶ್ವವಿಖ್ಯಾತವಾಗಿದೆ. ಇಂತಹ ಐತಿಹಾಸಿಕ ನಗರವನ್ನು ಒಳಗೊಂಡಿರುವ ಹಾಗೂ ಅದರ ಹೆಸರನ್ನೇ ಪಡೆದುಕೊಂಡಿರುವ ವಿಜಯನಗರ ಜಿಲ್ಲೆಯ ಉಸ್ತುವಾರಿಯಾಗಿ ನೇಮಕವಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯವೇಂದೆ ಭಾವಿಸುತ್ತೇನೆ. ಈ ಜವಾಬ್ದಾರಿಯನ್ನು ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಆಭಾರಿಯಾಗಿದ್ದೇನೆ ಎಂದು ಹೇಳಿದರು.
ಸಚಿವ ಆನಂದಸಿಂಗ್ ಅವರನ್ನು ಶ್ಲಾಘನೆ:
ವಿಜಯನಗರ ಜಿಲ್ಲೆ ರಾಜ್ಯದ 31 ನೇ ಜಿಲ್ಲೆಯಾಗಿ ಹುಟ್ಟು ಪಡೆಯಲು ಸಚಿವರಾದ ಆನಂದ್ ಸಿಂಗ್ ಅವರ ಪ್ರಾಮಾಣಿಕ ಪ್ರಯತ್ನ ಕಾರಣ. ಅವರು ಬೆಂಗಳೂರಿನಲ್ಲಿ ಆಯವ್ಯಯಕ್ಕೆ ಸಂಬಂಧಿಸಿದ ಸಭೆಯಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಜಿಲ್ಲೆಯ ಹುಟ್ಟಿಗೆ ಅವರು ಪಟ್ಟಂತಹ ಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ತಿಳಿಸಿದರು.
ವಿಜಯನಗರ ಸಾಮ್ರಜ್ಯದ ಗತವೈಭವ ಮರಳಬೇಕು:
ದೇಶದ ಪ್ರಮುಖ ಪ್ರವಾಸಿ ತಾಣವಾಗಿರುವ ವಿಜಯನಗರ ಜಿಲ್ಲೆ ತನ್ನ ಗತವೈಭವ ಪಡೆದುಕೊಳ್ಳಬೇಕು. ನೂತನ ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ಅಭಿವೃದ್ದಿ ಸಾಧಿಸಬೇಕು ಎನ್ನುವುದು ನಮ್ಮ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
ತವರು ಮನೆಗೆ ಬಂದಂತಹ ಭಾವ
ಉಸ್ತುವಾರಿಯಾಗಿ ಪ್ರಪ್ರಥಮ ಬಾರಿಗೆ ಆಗಮಿಸಿದ ಸಂಧರ್ಭದಲ್ಲಿ ನನಗೆ ದೊರೆತಂತಹ ಆತ್ಮೀಯ ಸ್ವಾಗತಕ್ಕೆ ಬಹಳ ಆಭಾರಿಯಾಗಿದ್ದೇನೆ. ಇಂದು ನನಗೆ ಗಂಡನ ಮನೆಯಿಂದ ತವರು ಮನೆಗೆ ಬಂದಂತಹ ಆತ್ಮಿಯ ಸ್ವಾಗತ ದೊರೆಯಿತು ಎಂದು ಸಚಿವರು ಸಂತಸದಿಂದ ತಿಳಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಹಂಪಿಯ ಶ್ರೀ ವಿರುಪಾಕ್ಷೇಶ್ವರ ಸ್ವಾಮಿಯ ದರುಶನ ಪಡೆದುಕೊಂಡರು. ನಂತರ ವಿವಿಧ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ, ಜಿಲ್ಲಾಧಿಕಾರಿಯಾದ ಅನಿರುದ್ದ ಶ್ರವಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಹರ್ಷಲ್, ಪೊಲೀಸ್ ವರಿಷ್ಠಾಧಿಕಾರಿಯಾದ ಅರುಣ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
0 Comments