ಬೆಂಗಳೂರು, ಜ 24: ಕೆಲ ಶಾಸಕರು ಹಾಗು ಸಚಿವರು ಸೇರಿದಂತೆ ಬಿಜೆಪಿಯ ಇತರ ಮುಖಂಡರು ಡಿಕೆಶಿ ಅವರ ಸಂಪರ್ಕದಲ್ಲಿದ್ದಾರೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ನಮ್ಮ ಜತೆ ಮಾತನಾಡಿರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕೇವಲ ಬಿಜೆಪಿ ಅಲ್ಲದೆ ಇತರೆ ಪಕ್ಷಗಳ ಶಾಸಕರು, ನಾಯಕರು ಸಹ ನಮ್ಮ ಜತೆ ಸಂಪರ್ಕದಲ್ಲಿರುವ ವಿಚಾರವನ್ನು ನಾವು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂದು ಸದ್ದಿಗಾರರಿಗೆ ತಿಳಿಸಿದರು. ವಿಧಾನ ಪರಿಷತ್ ಸದ್ಯಸರ, ವಿಧಾನ ಸಭೆಯ ಶಾಸಕರ ಹಾಗು ಇತರೆ ಮುಖಂಡರ ವಿಚಾರ ಈ ಸಂದರ್ಭದಲ್ಲಿ ಬಹಿರಂಗ ಮಾಡಲು ಆಗುವುದಿಲ್ಲ. ಅವರ ಪಕ್ಷದಲ್ಲಿ ಏನಾಗುತ್ತಿದೆ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸಿದ್ದರಾಮಯ್ಯನವರ ಜತೆ ಯಾರೆಲ್ಲಾ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ಸಚಿವರುಗಳನ್ನೇ ಕೇಳಿ ಹೇಳುತ್ತಾರೆ. ಈ ಪ್ರಶ್ನೆಯನ್ನು ನನ್ನ ಬಳಿ ಕೇಳುವ ಬದಲು ಅವರನ್ನೇ ಕೇಳಿ. ನನ್ನ ಬಳಿ ಯಾರು ಯಾರು ಮಾತನಾಡುತ್ತಾರೆ ಎಂಬ ಮಾಹಿತಿಯನ್ನು ನಾನ್ಯಾಕೆ ಬಹಿರಂಗ ಪಡಿಸಲಿ? ಇದರಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಮುಖ್ಯ ಎಂದರು.
‘ಇದು ರಾಜಕಾರಣದ ಒಂದು ಭಾಗವಾಗಿದೆ. ಪ್ರತಿಯೊಬ್ಬ ನಾಯಕರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಾರೆ. ಜನ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಯಾವ ರೀತಿ ಸಂದೇಶ ನೀಡುತ್ತಾರೆ ಎಂಬುದರ ಮೇಲೆ ಅವರು ತೀರ್ಮಾನ ಮಾಡುತ್ತಾರೆ' ಎಂದರು.
‘ನಾವೇ ಮೇಕೆದಾಟು ಯೋಜನೆ ಮಾಡುತ್ತೇವೆ, ಕಾಂಗ್ರೆಸ್ ನವರಿಗೆ ಅವಕಾಶ ನೀಡುವುದಿಲ್ಲ ಎಂಬ ಸಚಿವ ಸೋಮಣ್ಣ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ನಾನು ಅಭಿನಂದಿಸುತ್ತೇನೆ. ಈ ವಿಚಾರದಲ್ಲಿ ತಡ ಮಾಡುವುದು ಬೇಡ. ಹೇಗಿದ್ದರೂ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಇದೆ. ಜತೆಗೆ ಬಿಜೆಪಿಯ ೨೫ ಸಂಸದರಿದ್ದಾರೆ. ಒಂದೇ ದಿನದಲ್ಲಿ ಅನುಮತಿ ಪಡೆಯುವ ಸಾಮರ್ಥ್ಯವಿರುವ ಬಲಿಷ್ಠ ಸರ್ಕಾರವಿದೆ. ಅವರು ಈ ಕೆಲಸ ಮಾಡಲಿ, ಯೋಜನೆಯ ಗುದ್ದಲಿ ಪೂಜೆಗೆ ನಾವು ಕೂಡ ಹೋಗುತ್ತೇವೆ. ಸೋಮಣ್ಣ ಅವರನ್ನು ನಾನೇ ಭವ್ಯವಾಗಿ ಸ್ವಾಗತ ಮಾಡುತ್ತೇನೆ' ಎಂದರು.
0 Comments