ಕಬ್ಬಿಣ ಮತ್ತಿತರ ಕಚ್ಚಾವಸ್ತುಗಳು ಗಗನಕ್ಕೆ: ಬೆಲೆ ನಿಯಂತ್ರಣ ಕ್ರಮ ಕೈಗೊಳ್ಳದ ಕೇಂದ್ರ, ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು.
ಬೆಂಗಳೂರು, ಡಿ,20; ಸಣ್ಣ ಕೈಗಾರಿಕೆಗಳಿಗೆ ತೀರಾ ಅಗತ್ಯವಾಗಿರುವ ಕಬ್ಬಿಣ ಮತ್ತಿತರ ಮೂಲ ಕಚ್ಚಾ ವಸ್ತುಗಳು ದಿನದಿಂದ ದಿನಕ್ಕೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪೀಣ್ಯಾ ಕೈಗಾರಿಕಾ ಸಂಘ, ಮತ್ತಿತರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾಗಿರುವ ಪೀಣ್ಯಾದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪೀಣ್ಯಾದ ಆಲ್ ಇಂಡಿಯಾ ಕೌನ್ಸಿಲ್ ಆಫ್ ಅಸೋಸಿಯೇಷನ್ ಆಫ್ ಎಂ.ಎಸ್.ಎಂ.ಇ ಎದುರು ಭಾರೀ ಪ್ರತಿಭಟನೆ ನಡೆಸಿದರು.
ವಿವಿಧ ಸಂಘಟನೆಗಳ ಮುಖಂಡರು ಜನ ವಿರೋಧಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿ ಭಾರೀ ಆಕ್ರೋಶ ಹೊರ ಹಾಕಿದರು. ಈ ಭಾಗದಲ್ಲಿ ಕೈಗಾರಿಕಾ ವಲಯ ಬಹುತೇಕ ಸ್ಥಬ್ದಗೊಂಡಿತ್ತು. ಪರಿಸ್ಥಿತಿ ಹೀಗೇ ಮುಂದುವರೆದರೆ ಮುಂದೆ ಕೈಗಾರಿಕೆಗಳ ಪರಿಸ್ಥಿತಿ ಹೇಗೆ?. ನಮ್ಮ ಕುಟುಂಬ, ನಮ್ಮನ್ನು ನಂಬಿಕೊಂಡಿರುವ ಕಾರ್ಮಿಕರ ಸ್ಥಿತಿಗತಿ ಏನು ಎನ್ನುವ ಆತಂಕ, ಸಿಟ್ಟನ್ನು ಪ್ರತಿಭಟನಾಕಾರರು ಹೊರ ಹಾಕಿದರು.
ಪೀಣ್ಯಾದ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಮುರಳಿ ಕೃಷ್ಣಾ ಮಾತನಾಡಿ, ಕಬ್ಬಿಣ ಮತ್ತಿತರ ಮೂಲ ಕಚ್ಚಾ ವಸ್ತುಗಳು ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿವೆ. ಬೆಲೆ ನಿಯಂತ್ರಣಕ್ಕೆ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕನಿಷ್ಠ ಪಕ್ಷ ಬೆಲೆಗಳ ನಿಯಂತ್ರಣ ಮಾಡಲು ಸಭೆಗಳನ್ನು ಸಹ ನಡೆಸುತ್ತಿಲ್ಲ. ಬೆಲೆ ನಿಯಂತ್ರಣಕ್ಕೆ ಯಾವುದೇ ಪ್ರತಿಬಂಧಕ ಕ್ರಮಗಳನ್ನೂ ಕೂಡ ಸರ್ಕಾರಗಳು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದಿನ ಸರ್ಕಾರಗಳು ಕಬ್ಬಿಣ, ಸಿಮೆಂಟ್ ಮತ್ತಿತರ ವಸ್ತುಗಳ ಬೆಲೆ ನಿಯಂತ್ರಿಸಲು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದವು. ಇದಕ್ಕಾಗಿ ಸಚಿವರು, ಅಧಿಕಾರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಗಳನ್ನು ರಚಿಸಿ ಬೆಲೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗಿನ ಸರ್ಕಾರಗಳು ಸಣ್ಣ ಕೈಗಾರಿಕೆಗಳು ಮತ್ತು ಜನ ಸಾಮಾನ್ಯರ ವಿಷಯದಲ್ಲಿ ಅತೀವ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸಣ್ಣ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನತೆ, ಸಣ್ಣ ಕೈಗಾರಿಕೆಗಳು ದಿಕ್ಕೇ ತೋಚದಂತಾಗಿವೆ. ನಾವು ಇದೀಗ ಕೈಗಾರಿಕೆಗಳನ್ನು ಬಂದ್ ಮಾಡದೇ ಬೇರೆ ದಾರಿಯೇ ಇಲ್ಲದಂತಾಗಿದೆ. ಒಂದು ವೇಳೆ ಕೈಗಾರಿಕೆಬಗಳು ಶಾಶ್ವತವಾಗಿ ಬಂದ್ ಆದರೆ ಊಹಿಸಲೂ ಸಾಧ್ಯವಾಗದಷ್ಟು ಸಮಸ್ಯೆಗಳು ಎದುರಾಗಲಿವೆ. ಕೋವಿಡ್ ನಿಂದ ಈಗಾಗಲೇ ಉದ್ಯೋಗವಿಲ್ಲದೇ ಪರಿತಪಿಸುತ್ತಿರುವ ಜನ ಕೋವಿಡ್ ನಿಂದ ಈಗಾಗಲೇ ಉದ್ಯೋಗವಿಲ್ಲದೇ ಪರಿತಪಿಸುತ್ತಿರುವ ಜನ ಸಾಮಾನ್ಯರು ಭಾರೀ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಬಿ. ಮುರಳಿ ಕೃಷ್ಣಾ ಆತಂಕ ವ್ಯಕ್ತಪಡಿಸಿದರು
0 Comments