ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಮಾದರಿಯಲ್ಲಿ ರಾಜ್ಯ ಸರ್ಕಾರ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಮೌಲ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕರಾದ ಪೃಥ್ವಿ ರೆಡ್ಡಿ ಹೇಳಿದರು.
ದೆಹಲಿಯಿಂದ ಆಗಮಿಸಿದ್ದ ಎಎಪಿಯ ರಾಜ್ಯ ಉಸ್ತುವಾರಿ ರೋಮಿ ಭಾಟಿಯವರ ನೇತೃತ್ವದಲ್ಲಿ ಎಎಪಿಯ ನಿಯೋಗವು ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಸೋಮವಾರ ಭೇಟಿಯಾಗಿ ಮಾತುಕತೆ ನಡೆಸಿತು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿಯವರು, “ಅನ್ನ, ಅಕ್ಷರ ಹಾಗೂ ಆಶ್ರಯವೆಂಬ ತ್ರಿವಿಧ ದಾಸೋಹದಲ್ಲಿ ಶ್ರೀ ಸಿದ್ದಗಂಗಾ ಮಠವು ನಿರತವಾಗಿದೆ. ಧಾರ್ಮಿಕ ಕೆಲಸದ ಜೊತೆಜೊತೆಗೆ ಮಕ್ಕಳಿಗೆ ಶಿಸ್ತು, ಶಿಕ್ಷಣ ಕಲಿಸುವ ಮೂಲಕ ದೇಶ ನಿರ್ಮಾಣದ ಕೆಲಸವನ್ನೂ ಮಠ ಮಾಡುತ್ತಿದೆ. ದೆಹಲಿಯ ಅರವಿಂದ್ ಕೇಜ್ರಿವಾಲ್ರವರ ಎಎಪಿ ಸರ್ಕಾರ ಕೂಡ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು, ಆಯವ್ಯಯದಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡುತ್ತಿದೆ. ಕರ್ನಾಟಕದ ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಆಮ್ ಆದ್ಮಿ ಪಾರ್ಟಿಯ ಸರ್ಕಾರವು ಇಲ್ಲೂ ಅಧಿಕಾರಕ್ಕೆ ಬರಬೇಕಿದೆ” ಎಂದು ಹೇಳಿದರು.
ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಮಾತನಾಡಿ, “ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಸರ್ಕಾರ ಅಧಿಕಾರಕ್ಕೆ ಬಂದ ದೆಹಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಜನರಿಗೆ ಹತ್ತಿರವಾದ ಆಡಳಿತವನ್ನು ಅವರು ನೀಡುತ್ತಿದ್ದಾರೆ. ದೆಹಲಿಯ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಅಭಿವೃದ್ಧಿಗೊಂಡಿವೆ. ಮಕ್ಕಳಿಗೆ ಎಂತಹ ಶಿಕ್ಷಣ ನೀಡುತ್ತೇವೆಯೋ, ಅಂತಹ ಸಮಾಜವು ಭವಿಷ್ಯದಲ್ಲಿ ನಿರ್ಮಾಣವಾಗುತ್ತದೆ. ಆದ್ದರಿಂದ ರಾಜ್ಯದ ಶಿಕ್ಷಣ ವ್ಯವಸ್ಥೆಯು ದೆಹಲಿ ಮಾದರಿಯಲ್ಲಿ ಅಭಿವೃದ್ಧಿಯಾಗಬೇಕು” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಮುಖಂಡರಾದ ರೋಮಿ ಭಾಟಿ, ಜಗದೀಶ್ ವಿ ಸದಂ, ಕುಶಲಸ್ವಾಮಿ, ಬಿಟಿ ನಾಗಣ್ಣ, ಸುರೇಶ್ ರಾಥೋಡ್, ವಿಜಯ್ ಶಾಸ್ತ್ರಿಮಠ್ ಮತ್ತಿತರರು ಭಾಗವಹಿಸಿದ್ದರು.
0 Comments