ಅಕ್ಟೋಬರ್ 4, ದಾವಣಗೆರೆ: ನನಗೆ ರಾಜಕೀಯದ ಸಹವಾಸವೇ ಬೇಡ. ಬದುಕಿರುವಷ್ಟು ದಿನ ಹಿಂದುತ್ವದ ಹೋರಾಟ ಮಾಡುತ್ತೇನೆ ಎಂದು ಶ್ರೀರಾಮ ಸೇನೆ ಮುಖಂಡರಾದ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಮೋದ್ ಮುತಾಲಿಕ್ರವರಿಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಮುತಾಲಿಕ್ ಬದಲಿಗೆ ದಿ.ಸಚಿವ ಸುರೇಶ್ ಅಂಗಡಿ ಪತ್ನಿ ಮಂಗಳಾ ಅಂಗಡಿರವರಿಗೆ ಟಿಕೆಟ್ ನೀಡಲಾಗಿತ್ತು. ಅಲ್ಲದೇ ಮಂಗಳಾ ಅಂಗಡಿಯವರು ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದರು. ಬಿಜೆಪಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಪ್ರಮೋದ್ ಮುತಾಲಿಕ್ ಕನಸು ಕನಸಾಗಿಯೆ ಉಳಿದಿದೆ.
ಇದೀಗ ಉಪಚುನಾವಣೆಗಳು ಘೋಷಣೆಯಾಗಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ಮುತಾಲಿಕ್, ಸದ್ಯಕ್ಕೆ ನನಗೆ ರಾಜಕೀಯ ಸಹವಾಸ ಬೇಡ. ಉಪಚುನಾವಣೆಯಲೂ ಸ್ಪರ್ಧಸಲ್ಲ. ಭ್ರಷ್ಟ ರಾಜಕಾರಣಕ್ಕೆ ನಾನು ಫಿಟ್ ಅಲ್ಲ. ಬದುಕಿರುವಷ್ಟು ದಿನ ಹಿಂದುತ್ವಕ್ಕಾಗಿ ಹೋರಾಡುತ್ತೇನೆ ಎಂದರು. ಪ್ರಾಮಾಣಿಕರು, ಹೋರಾಟಗಾರರು ರಾಜಕೀಯಕ್ಕೆ ಬೇಡವಾಗಿದ್ದಾರೆ. ಜಾತಿವಾದಿಗಳು, ಗೂಂಡಾಗಳು, ಲೂಟಿಕೋರರು, ಸುಳ್ಳುಕೋರರು ಬೇಕಾಗಿದ್ದಾರೆ. ಹಾಗಾಗಿ ನಾನು ರಾಜಕೀಯದಿಂದ ದೂರ ಉಳಿಯುತ್ತೇನೆ.

0 Comments