ಹೊಸ ಸಚಿವ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನಿಷ್ಠಾವಂತರನ್ನು ಸಂಪುಟಕ್ಕೆ ಸೇರಿಸುವ ಕುರಿತು ಕಳೆದ ಕೆಲವು ದಿನಗಳಿಂದ ತೆರೆಮರೆಯಲ್ಲಿ ಗಂಭೀರ ಚರ್ಚೆಗಳು ನಡೆದಿವೆ.
ಮಾಜಿ ಮುಖ್ಯಮಂತ್ರಿಗೆ ಮತ್ತು ಲಿಂಗಾಯತ ಲಾಬಿಗೆ ಪಕ್ಷವು ಮಣಿದು ಗೌರವ ತೋರುತ್ತಿದೆ, ಮಂಗಳವಾರ ತಡರಾತ್ರಿ ಕೆಲ ಸಚಿವರಿಗೆ ಕರೆ ಬಂದಿದೆ, ಕೆಲವೇ ಮಂದಿಗೆ ಸಚಿವ ಭಾಗ್ಯ ದೊರೆಯಲಿದ್ದು ಮತ್ತೊಂದು ಸುತ್ತಿನ ವಿಸ್ತರಣೆಗಾಗಿ ಕೆಲವು ಖಾತೆಗಳನ್ನು ಉಳಿಸಿಕೊಳ್ಳಲಿದ್ದಾರೆ.
ಮೊದಲ ಸುತ್ತಿನಲ್ಲಿ ಕೆಲವೇ ಕೆಲವು ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ, ಯಡಿಯೂರಪ್ಪ ಆಪ್ತರಿಗೆ ಮಹತ್ವದ ಖಾತೆಗಳು ದೊರೆಯಲಿದೆ ಎಂದು ತಿಳಿದು ಬಂದಿದೆ.
ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಯಡಿಯೂರಪ್ಪ ಪಕ್ಷ ಸಂಘಟನೆಗಾಗಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ, 2022ರ ಚುನಾವಣೆಯಲ್ಲಿ 130 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಭರವಸೆ ವ್ಯಕ್ತ ಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಜೊತೆ ನಿಷ್ಠುರವಾಗದಿರಲು ನಿರ್ಧರಿಸಿದೆ. ಕಳೆದ ಬಾರಿ ಬಿಜೆಪಿ ತೊರೆದು ಕೆಜೆಪಿ ಸ್ಥಾಪಿಸಿದ ಯಡಿಯೂರಪ್ಪ ಅವರಿಂದ ಪಕ್ಷಕ್ಕೆ ನಷ್ಟವಾಗಿತ್ತು. ರಾಜ್ಯದಲ್ಲಿ ಬಿಜೆಪಿ ಕನಿಷ್ಠ ಸ್ಥಾನಗಳನ್ನು ಗಳಿಸಿತ್ತು.
ಹೀಗಾಗಿ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಬೆಂಬಲಿಗರು ಮತ್ತು ಬಿಎಸ್ವೈ ಕಿರಿಯ ಪುತ್ರ ವಿಜಯೇಂದ್ರ ಅವರಿಗೆ ಸೂಕ್ತಸ್ಥಾನ ಮಾಡಲು ನಿರ್ಧರಿಸಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತು ಅವರ ಪುತ್ರ ಪೂರ್ಣ ಪ್ರಮಾಣದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬುದು ಹೈಕಮಾಂಡ್ ಇಚ್ಚೆಯಾಗಿದೆ.
ವಿಧಾನಸಭೆ ಚುನಾವಣೆ ಇನ್ನೂ ೨೦ ತಿಂಗಳು ಮಾತ್ರ ಬಾಕಿಯಿದೆ, ಇದರ ಜೊತೆಗೆ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆಗಳು ಬರಲಿವೆ. ಇದೆಲ್ಲವನ್ನು ಗಮನದಲ್ಲಿರಿಸಿಕೊಂಡು ಹೈಕಮಾಂಡ್ ಬಿಎಸ್ವೈ ಬೆಂಬಲಿಗರಿಗೆ ಮಣೆ ಹಾಕಲಿದೆ.

0 Comments