ಬೀದರ್ : ಜನರಿಗೆ ತೊಂದರೆ ಮಾಡಿ ಯಾವುದೇ ಕಾರ್ಖಾನೆಗಳನ್ನು ನಡೆಸುವಂತಿಲ್ಲ. ಆಗೆಯೇ ಅನಗತ್ಯವಾಗಿ ಕಾರ್ಖಾನೆಗಳಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಆದರೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಖಾನೆಗಳು ಕೆಲಸ ನಿರ್ವಹಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋಳಾರ (ಕೆ) ಗ್ರಾಮದಲ್ಲಿ ಸಾಯಿಲ್ ಸಂಸ್ಥೆ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕೋಳಾರ (ಕೆ) ಭಾಗದಲ್ಲಿ ಅನೇಕ ಕಾರ್ಖಾನೆಗಳು ಇದ್ದಾವೆ. ಕಾರ್ಖಾನೆಗಳಿಂದ ಜನರಿಗೆ ತೊಂದರೆಯಾಗಬಾರದು. ಸಾಧ್ಯವಾದಷ್ಟು ಜನರ ಒಳಿತಿಗಾಗಿ ಕಾರ್ಖಾನೆಗಳು ಶ್ರಮಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬೇಕು.
ಜನರಿಗೆ ತೊಂದರೆ ಉಂಟುಮಾಡುವ ಕಾರ್ಖಾನೆಗಳನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು, ಅಂತಹವುಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ.
ಕೋಳಾರ ಗ್ರಾಮದಲ್ಲಿನ ರಸ್ತೆ, ಕುಡಿಯುವ ನೀರು ಸೇರಿದಂತೆ ಅನೇಕ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವ ಕೆಲಸ ಮಾಡುತ್ತೇನೆ. ಕಳೆದ ವರ್ಷ ಬೋರ್ವೆಲ್ ಕೊರೆಯಲು ಬಹಳಷ್ಟು ಅನುದಾನ ನೀಡಿದ್ದಿನಿ. ಕೋಳಾರ ಭಾಗದ ಹತ್ತರಿಂದ ಹದಿನೈದು ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುತ್ತೇನೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ನೀಡಿದರು.
ಇದೇ ವೇಳೆ ಕೋಳಾರ ಗ್ರಾಮದ ಚರ್ಚ್ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ, ಚರ್ಚ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗ್ರಾಮದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿದ್ದಾರೂಡ ಮಂದಿರ, ಬೀರಲಿಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿದರು. ಗ್ರಾಮದ ವಿವಿಧೆಡೆಯ ಸಂಗೊಳ್ಳಿ ರಾಯಣ್ಣ ಸರ್ಕಲ್ ಗಳಿಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ್ ರೆಡ್ಡಿ, ಶಿವಾನಂದ ಕುಂಬಾರ್, ಮಲ್ಲಿಕಾರ್ಜುನ, ಗುರುದಾಸ್ ಸೇರಿದಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಇತರೆ ಇಲಾಖೆಯ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.


0 Comments