ಮಧುಗಿರಿ : ತಾಲೂಕಿನಲ್ಲಿ ಕೊರೋನಾ 2ನೇ ಅಲೆಯ ಲಾಕ್ಡೌನ್ ನಿಂದಾಗಿ ಮುಜರಾಯಿ ಇಲಾಖೆಗೆ ಸೇರಿದ ಅರ್ಚಕರ ಸ್ಥಿತಿ ಗಂಭೀರವಾಗಿದ್ದು ಸರಕಾರ ನೆರವಿಗೆ ಧಾವಿಸಬೇಕಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಶ್ರೀ ದಂಡಿನ ಮಾರಮ್ಮನ ದೇಗುಲದ ಮುಂಭಾಗ ಏರ್ಪಡಿಸಿದ್ದ 50 ಮುಜರಾಯಿ ಅರ್ಚಕರಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಅರ್ಚಕರು ಕ್ಷೇತ್ರದ ಒಳಿತನ್ನು ಬಯಸುವವರು. ಇವರಿಗೆ ದೇವಸ್ಥಾನದ ಮೂಲದಿಂದಲೇ ಆದಾಯವಿದ್ದು, ಲಾಕ್ಡೌನ್ನಿಂದಾಗಿ ದೇಗುಲದ ಬಾಗಿಲು ಮುಚ್ಚಿದೆ. ಇದರಿಂದ ಆದಾಯವಿಲ್ಲದೆ ಕುಟುಂಬ ನಿರ್ವಹಣೆ ಸಂಕಷ್ಟದಲ್ಲಿದೆ. ಅದಕ್ಕಾಗಿ ಈ ಕಿಟ್ ವಿತರಣೆ ಮಾಡುತ್ತಿದ್ದು, ಅಲ್ಪ ಸಹಾಯವಾಗಲಿದೆ. ಮುಂದೆ ತಾಯಿ ದಂಡಿನ ಮಾರಮ್ಮನ ಕೃಪೆಯಿಂದ ಕೊರೋನಾ ನಶಿಸಲಿದ್ದು, ಎಲ್ಲರ ಬದುಕು ಮೊದಲಿನಂತಾಗಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಉಪವಿಭಾಗಾಧಿಕಾರಿ ಸೋಮಪ್ಪ ಕಡಕೋಳ, ತಹಶೀಲ್ದಾರ್ ವೈ.ವಿ.ರವಿ, ಗ್ರೇಡ್2 ತಹಶೀಲ್ದಾರ್ ವರದರಾಜು, ಜೆಡಿಎಸ್ ಮುಖಂಡ ತುಂಗೋಟಿ ರಾಮಣ್ಣ, ಪುರಸಭೆ ಸದಸ್ಯ ಗಂಗರಾಜು, ಕೆ. ನಾರಾಯಣ್, ಅರ್ಚಕರಾದ ಲಕ್ಷ್ಮೀಕಾಂತಾಚಾರ್, ಹರೀಶ್ ಆಚಾರ್, ಅನಂತಭಟ್, ನಟರಾಜ ದಿಕ್ಷೀತ್, ಮಿಡಿಗೇಶಿಯ ಶಾನುಭೋಗ ನಾಗರಾಜ ಶಾಸ್ತ್ರೀ, ಹಾಗೂ ಇತರೆ ಅರ್ಚಕರು ಇದ್ದರು.

0 Comments