ಕನ್ನಡ ನಟ ಅರ್ಜುನ್ ಸರ್ಜಾ ಕುಟುಂಬ ಆಂಜನೇಯ ಸ್ವಾಮಿಯ ಅಪಾರ ಭಕ್ತರು. ಸರ್ಜಾ ಕುಟುಂಬ ಮತ್ತೊಂದು ಮಹತ್ತರ ಕಾರ್ಯ ಮಾಡಿದೆ. ಅರ್ಜುನ್ ಸರ್ಜಾ ಚೆನ್ನೈನಲ್ಲಿ ಆಂಜನೇಯ ದೇವಸ್ಥಾನ ಕಟ್ಟಿಸಿದ್ದಾರೆ. ಅವರ ಕನಸಿನ ದೇವಸ್ಥಾನದ ಉದ್ಘಾಟನಾ ಕಾರ್ಯಕ್ಕೆ ಈಗ ದಿನಾಂಕ ಫಿಕ್ಸ್ ಆಗಿದೆ.
ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಿಸುವುದು ಅರ್ಜುನ್ ಸರ್ಜಾ ಅವರ ಅನೇಕ ವರ್ಷದ ಕನಸು. ಇದೀಗ ನನಸಾಗುವ ಸಮಯ ಹತ್ತಿರಬಂದಿದೆ. ಬೃಹತ್ ಆಂಜನೇಯ ವಿಗ್ರಹ ಸ್ಥಾಪಿಸಿದ್ದು, ದೇವಸ್ಥಾನದ ಕೆಲಸ ಸಂಪೂರ್ಣವಾಗಿದೆ. ಇದೀಗ ಉದ್ಘಾಟನೆಗೆ ಸಿದ್ಧವಾಗಿದ್ದು ಅದ್ದೂರಿಯಾಗಿ ಕುಂಭಾಭಿಷೇಕ ನಡೆಯಲಿದೆ.
ದೇವಸ್ಥಾನದ ಕುಂಭಾಭಿಷೇಕ ಕಾರ್ಯಕ್ಕೆ ಎಲ್ಲರನ್ನೂ ಆಹ್ವಾನ ಮಾಡಬೇಕು ಎನ್ನುವ ಆಸೆ ಇತ್ತು ಆದರೆ ಈಗಿನ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಕುಂಭಾಭಿಷೇಕ ಕಾರ್ಯಕ್ರಮವನ್ನು ಲೈವ್ ಮೂಲಕ ಎಲ್ಲರಿಗೂ ತಲುಪಿಸುವ ವ್ಯವಸ್ಥೆ ಮಾಡಿರುವುದಾಗಿ ಅರ್ಜುನ್ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.
"ನನ್ನ ಬಹುದಿನಗಳ ಆಸೆ, ನನ್ನ ಕುಟುಂಬದಿಂದ ನಿರ್ಮಾಣವಾಗುತ್ತಿರುವ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯ ಪರಿಪೂರ್ಣವಾಗಿದೆ. ಈ ದೇವಸ್ಥಾನದ ಕುಂಭಾಭಿಷೇಕ ಸಮಾರಂಭ ಜುಲೈ ೧ ಮತ್ತು ೨ರಂದು ಚೆನ್ನೈನಲ್ಲಿ ನಡೆಯುತ್ತಿದೆ. ಎಷ್ಟೋ ಜನ ನನ್ನ ಫ್ರೆಂಡ್ಸ್, ಕುಟುಂಬ, ಭಕ್ತಾದಿಗಳು ಎಲ್ಲರನ್ನು ಕರೆದು ಅದ್ದೂರಿಯಾಗಿ ಸಮಾರಂಭ ಮಾಡಬೇಕು ಎನ್ನುವ ಆಸೆ ಇತ್ತು" ಎಂದಿದ್ದಾರೆ.
"ಆದರೆ ಈಗ ಇರುವ ಪರಿಸ್ಥಿತಿ ಎಲ್ಲರಿಗೂ ಗೊತ್ತು. ಕೊರೊನಾ ಕಾರಣದಿಂದ ಯಾರನ್ನೂ ಆಹ್ವಾನ ಮಾಡಲು ಆಗುತ್ತಿಲ್ಲ. ಆದರೂ ಜನರಿಗೆ ಮಿಸ್ ಆಗಬಾರದು ಎನ್ನುವ ಕಾರಣಕ್ಕೆ ಯೂಟ್ಯೂಬ್ನಲ್ಲಿ ಲೈವ್ ಸ್ಟ್ರೀಮ್ ಮಾಡುತ್ತಿದ್ದೇವೆ." ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

0 Comments