ಟ್ವಿಟ್ಟರ್ನಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಅನ್ನು ಪ್ರತ್ಯೇಕ ದೇಶವೆಂದು ತೋರಿಸುವ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ್ದ ಹಿನ್ನೆಲೆ ಉತ್ತರ ಪ್ರದೇಶದಲ್ಲಿ ದಾಖಲಾದ ಎಫ್ಐಆರ್ನಲ್ಲಿ ಟ್ವಿಟ್ಟರ್ನ ಭಾರತದ ಮುಖ್ಯಸ್ಥ ಮನೀಶ್ ಮಹೇಶ್ವರಿ ಹೆಸರು ಉಲ್ಲೇಖಿಸಲಾಗಿದೆ. ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡ ಬಳಿಕ ಈ ತಿಂಗಳಿನಲ್ಲಿ ದಾಖಲಾದ ಎರಡನೇ ಪ್ರಕರಣ ಇದಾಗಿದೆ.
ಟ್ವಿಟ್ಟರ್ ತಪ್ಪಾದ ಭಾರತದ ಭೂಪಟವನ್ನು ಪ್ರಕಟಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡ ಟ್ವಿಟ್ಟರ್, ಈ ನಕ್ಷೆಯನ್ನು ಟ್ವಿಟ್ಟರ್ನಿಂದ ತೆಗೆದುಹಾಕಿತ್ತು.
ಈ ತಪ್ಪಾದ ಭೂಪಟ ಪ್ರಕಟ ಮಾಡಿದ ಹಿನ್ನೆಲೆ ಉತ್ತರಪ್ರದೇಶದಲ್ಲಿ ಬಲಪಂಥೀಯ ಗುಂಪು ಭಜರಂಗದಳದ ನಾಯಕ ಪ್ರವೀಣ್ ಭತಿ ಸಲ್ಲಿಸಿರುವ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಈ ದೂರಿನಲ್ಲಿ, "ದೇಶದ್ರೋಹದ ಈ ಕೃತ್ಯವು ಉದ್ದೇಶಪೂರ್ವಕವಾಗಿ ನಡೆದಿದೆ. ಈ ಹಿನ್ನೆಲೆ ಕ್ರಮ ತೆಗೆದುಕೊಳ್ಳಬೇಕು," ಎಂದು ಮನವಿ ಮಾಡಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (2) (ವರ್ಗಗಳ ನಡುವೆ ದ್ವೇಷ ಅಥವಾ ಕೆಟ್ಟ ಅಭಿಪ್ರಾಯ ಸೃಷ್ಟಿಸುವುದು ಅಥವಾ ಉತ್ತೇಜಿಸುವುದು) ಮತ್ತು ಐಟಿ (ತಿದ್ದುಪಡಿ) ಕಾಯ್ದೆ 2008 ರ ಸೆಕ್ಷನ್ 74 ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.

0 Comments