ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ್ ತಮ್ಮ ಅವಧಿಯ ಸಂಪೂರ್ಣ ಗೌರವಧನವನ್ನು ಪಡೆಯದೇ (ರೂ. 12,20,000/-; ಹನ್ನೆರಡು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ) ಪರಿಷತ್ತಿನಲ್ಲೇ ನಿಶ್ಚಿತ ಠೇವಣಿಯಾಗಿರಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಇಬ್ಬರು ಹಿರಿಯ ಸಾಹಿತಿಗಳಿಗೆ `ಕ.ಸಾ.ಪ. ಗೌರವ ಪ್ರಶಸ್ತಿ' ನೀಡಬೇಕೆಂದು ಇದೀಗ ನಡೆದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. 60 ವರ್ಷ ಪೂರೈಸಿದ, ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ತಲಾ ರೂ.30,000/- (ಮೂವತ್ತು ಸಾವಿರ ರೂಪಾಯಿ) ನಗದು, ಸ್ಮರಣಿಕೆ, ಶಾಲು, ಫಲತಾಂಬೂಲ ನೀಡಬೇಕೆಂದು ತೀರ್ಮಾನಿಸಲಾಯಿತು. ಈ ಸಮಾರಂಭವನ್ನು ಪ್ರತಿವರ್ಷ ಮೇ ತಿಂಗಳಿನಲ್ಲಿ (ಕೇಂದ್ರ) ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಳ್ಳಬೇಕೆಂದೂ ನಿರ್ಣಯಿಸಲಾಯಿತು. ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೊಂದು ಹೊಸಹೆಜ್ಜೆ ಎನಿಸಿದೆ.
ನಾಡೋಜ ಡಾ. ಮನು ಬಳಿಗಾರ್ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಹಿರಿಯ ಸಾಹಿತಿಗಳಾದ ಡಾ. ಬಿ.ಟಿ. ಲಲಿತಾ ನಾಯಕ್, ಡಾ. ವಸುಂಧರಾ ಭೂಪತಿ, ಗೌರವ ಕಾರ್ಯದರ್ಶಿಗಳಾದ ಡಾ. ಪದ್ಮರಾಜ ದಂಡಾವತಿ, ಕೆ. ರಾಜಕುಮಾರ್, ಗೌರವ ಕೋಶಾಧ್ಯಕ್ಷರಾದ ಪಿ. ಮಲ್ಲಿಕಾರ್ಜುನಪ್ಪ ಭಾಗವಹಿಸಿದ್ದರು. ಇಂತಹದೊಂದು ಹೊಸ ಮತ್ತು ಅಪೂರ್ವ ಪ್ರಶಸ್ತಿಯನ್ನು ಸ್ಥಾಪಿಸಿದ್ದಕ್ಕಾಗಿ ನಾಡೋಜ ಡಾ. ಮನು ಬಳಿಗಾರ್ ಅವರನ್ನು ಅಭಿನಂದಿಸಲಾಯಿತು.

0 Comments