ಬೆಂಗಳೂರು: ಮಂಗಳವಾರ ವಿಧಾನಸಭೆಯಲ್ಲಿ ಜೈಶ್ರೀರಾಮ್ ಘೋಷಣೆ ಜೋರಾಗಿಯೇ ನಡೆದಿತ್ತು. ಆದರೆ ಅಚ್ಚರಿ ಎಂದರೇ ರಾಮನಾಮ ಜಪ ಮಾಡುತ್ತಿದ್ದವರು ಬಿಜೆಪಿಯವರಲ್ಲ, ಬದಲಿಗೆ ಕಾಂಗ್ರೆಸ್ ಶಾಸಕರು.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಚರ್ಚೆ ವೇಳೆ ಜೈಶ್ರೀರಾಮ್ ಚರ್ಚೆ ನಡೆದಿತ್ತು.. ಇಂಧನ ಬೆಲೆ ಏರಿಕೆ ಬಗ್ಗೆ ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಉಲ್ಲೇಖಿಸಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಪೆಟ್ರೋಲ್ ದರ ರಾಮನ ಭಾರತದಲ್ಲಿ 93 ರೂಪಾಯಿ ಇದೆ. ರಾವಣನ ಶ್ರೀಲಂಕಾದಲ್ಲಿ 53 ರೂ. ಸೀತೆಯ ನೇಪಾಳದಲ್ಲಿ ಲೀಟರ್ ಪೆಟ್ರೋಲ್ ದರ 51 ರೂ, ಎಂದು ಹೇಳುತ್ತಿದ್ದರು. ಈ ವೇಳೆ ಕೈ ಶಾಸಕರು ಜೈ ಶ್ರೀ ರಾಮ್ ಎಂದು ಪದೇ ಪದೇ ಘೋಷಣೆ ಕೂಗಿದರು.
ಕಾಂಗ್ರೆಸ್ ನಾಯಕರ ಘೋಷಣೆಯಿಂದಾ ಕಿರಿಕಿರಿಗೊಂಡ ಬಸವರಾಜ ಬೊಮ್ಮಾಯಿ, ಈಗಲಾದರೂ ಕಾಂಗ್ರೆಸ್ಸಿನವರು ರಾಮ ನಾಮ ಜಪ ಮಾಡುತ್ತಿರುವುದು ಸಂತೋಷ ತಂದಿದೆ ಎಂದರು. ಈ ವೇಳೆ ಗಲಾಟೆ ಎಬ್ಬಿಸಿದ ಕಾಂಗ್ರೆಸ್ ಶಾಸಕರು ರಾಮ ಮಂದಿರ ಕೇವಲ ಬಿಜೆಪಿಯ ಆಸ್ತಿಯಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ ನೀವು ರಾಮನನ್ನು ಗುತ್ತಿಗೆ ಪಡೆದಿಲ್ಲ, ನಾನು ಕೂಡ ರಾಮಭಕ್ತ. ನನ್ನ ಹೆಸರಲ್ಲೇ ರಾಮ ಇದಾನೆ ಎಂದು ಬಿಜೆಪಿಗೆ ಸಿದ್ದು ತಿರುಗೇಟು ನೀಡಿದ್ರು. ಸಿದ್ದರಾಮಯ್ಯಗೆ ಪ್ರಶ್ನಿಸಿದ ಸ್ಪೀಕರ್ ಕಾಗೇರಿ, ನೀವು ರಾಮ ಮಂದಿರಕ್ಕೆ ದೇಣಿಗೆ ಕೊಟ್ಟಿದ್ದೀರಾ ಎಂದು ಕಿಚಾಯಿಸಲು ಮುಂದಾದರು. ಅದಕ್ಕೆ ನಮ್ಮೂರಿನ ರಾಮನ ಗುಡಿಗೆ ಹಣವನ್ನ ಕೊಟ್ಟಿದ್ದೇನೆ . ಆದರೆ , ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ಕೊಟ್ಟಿಲ್ಲ . ಎಲ್ಲಿ ಕೊಟ್ಟರೇನು ರಾಮನಿಗೆ ಕೊಟ್ಟೆ ಎಂದು ಸಿದ್ದರಾಮಯ್ಯ ಸ್ಪೀಕರ್ ಕಾಗೇರಿಗೆ ಟಾಂಗ್ ನೀಡಿದರು.
ಪೆಟ್ರೋಲ್ , ಡೀಸೆಲ್ , ಗ್ಯಾಸ್ , ಆಹಾರ ಉತ್ಪನ್ನಗಳು ಹಾಗೂ ಅಗತ್ಯ ವತ್ತುಗಳ ಬೆಲೆ ಏರಿಕೆ ಸಂಬಂಧ ನಿಲುವಳಿ ಪ್ರಸ್ತಾಪ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಆರಂಭಿಸಿದರು. ಅಚ್ಛೇದಿನ್ ಬರುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈ ದೇಶದಲ್ಲಿ ಇನ್ನೂ ಅಚ್ಛೇದಿನ್ ಬರಲೇ ಇಲ್ಲ. ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಬಡವರು ಕಂಗೆಟ್ಟಿದ್ದಾರೆ. ಬಡವರು ಈಗ ದಿನ ದೂಡುವುದು ಕೂಡ ಕಷ್ಟವಾಗುತ್ತಿದೆ. ಸಾಮಾನ್ಯ ಜನರು ಗೋಳಾಡುತ್ತಿದ್ದಾರೆ. ಬೆಲೆ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.

0 Comments