'ರಾಜಕಾರಣದಲ್ಲಿ ಷಡ್ಯಂತ್ರ ಸಹಜ. ಇವರಿಗೆ ಶರ್ಟು, ಪ್ಯಾಂಟ್ ಬಿಚ್ಚಲು ಯಾರಾದರೂ ಹೇಳಿ ಕೊಟ್ಟಿದ್ರಾ? ಅವರು ಆಡಿರುವ ಮಾತುಗಳಿಗೆ ಸ್ಕ್ರಿಪ್ಟ್ ನಾವು ಬರೆದು ಕೊಟ್ಟಿದ್ವಾ?' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಸಲೀಲೆ ಪ್ರಕರಣದ ಆಡಿಯೋ ಮತ್ತು ವಿಡಿಯೋ ವಿಚಾರವಾಗಿ ಸದಾಶಿವನಗರ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಿಷ್ಟು:
ಅವರ ಜೊತೆಯಲ್ಲಿ ಇರುವವರು ಎಲ್ಲರೂ ಸೇರಿಕೊಂಡು ಒಂದು ಸುದ್ದಿಗೋಷ್ಠಿ ಮಾಡಿ ಎಲ್ಲವನ್ನೂ ಬಿಚ್ಚಡಲಿ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ೨೦ ವರ್ಷ ಅವರು ಏನೇನು ಮಾಡಿದ್ದಾರೋ ಅದನ್ನ ಹೇಳಲಿ.
ಇಂತಹ ಕೆಲಸಾನೇ ಮಾಡಿದ್ದಾರೆ ಎಂದು ಹೇಳಲಿ. ಎಲ್ಲವೂ ಜನರಿಗೆ ತಿಳಿಯಲಿ. ಇವರೇ ನಮ್ಮ ಮುಖಂಡರು, ಸ್ನೇಹಿತರು, ವಕ್ತಾರರು.
ಇದನ್ನು ಅವರೇ ಹೇಳಿದ್ದಾರೋ, ಬೇರೆಯವತು ಹೇಳಿಸಿದ್ದಾರೋ, ಅಂತೂ ಬಿಜೆಪಿ ಪಕ್ಷದ ಪರವಾಗಿ ಹೇಳಿದ್ದಾರೆ. ಅವರು ನಮ್ಮ ಪಕ್ಷದಲ್ಲಿದ್ದಾಗ ಏನು ಮಾಡಿದ್ದಾರೆ ಅಂತಾ ಸಾಕ್ಷಿ ಸಮೇತ ಹೇಳಲಿ.
ಈ ಪ್ರಕರಣವನ್ನು ನಾವೂ ಗಮನಿಸುತ್ತಿದ್ದೇವೆ. ಸುಮ್ಮನೆ ಏನೂ ಕುಳಿತಿಲ್ಲ.
ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದ ಶಾಸಕರು, ಸಿಡಿ ಬಿಡುಗಡೆ ಅಂತಾ ವಿಶ್ವನಾಥ್ ಅವರು ಹೇಳಿದ್ದಾರೆ. ಮುಖ್ಯಮಂತ್ರಿಗೆ ಸಿಡಿ ಗುಮ್ಮಾ ಅಂತಾ ಹೇಳಿದ್ದಾರೆ. ಬ್ಲ್ಯಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ ಅಂತಾ ಯತ್ನಾಳ್ ಅವರು ಹೇಳಿದ್ದಾರೆ.
ಎಲ್ಲರನ್ನು ಒಗ್ಗೂಡಿಸಲು ಯೋಗೇಶ್ವರ್ ಅವರು 9 ಕೋಟಿ ಸಾಲ ಮಾಡಿಕೊಂಡಿದ್ದರು ಎಂದು ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಹಿಂದೆ ಶ್ರೀನಿವಾಸ ಗೌಡರು ಭ್ರಷ್ಟಾಚಾರ ಕುರಿತು ಸದನದಲ್ಲೇ ಕೊಟ್ಟ ಹೇಳಿಕೆ ಬಗ್ಗೆ ತನಿಖೆ ಮಾಡಲು ಆಗಲಿಲ್ಲ. ಭ್ರಷ್ಟಾಚಾರದ ಬಗ್ಗೆ ಕೊಟ್ಟ ಹೇಳಿಕೆ ವಿರುದ್ಧದ ತನಿಖೆ ಏನಾದವು?
ಸಿ.ಡಿ.ಯಲ್ಲಿ ಯಡಿಯೂರಪ್ಪ ಭ್ರಷ್ಟಾಚಾರಿ ಅಂತ ಹೇಳಿದ್ದಾರೆ, ಮಾಧ್ಯಮಗಳ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಕನ್ನಡಿಗರನ್ನು ಅವಹೇಳನ ಮಾಡಿದ್ದಾರೆ. ಕನ್ನಡಿಗನಾಗಿ ನಾನು ಆ ಮಾತು ಹೇಳಬಾರದು. ಬೆಳಗಾವಿಯನ್ನು ಪ್ರತ್ಯೇಕ ರಾಜ್ಯ ಎಂದಿದ್ದಾರೆ. ಕನ್ನಡ ಹೋರಾಟಗಾರರು ಯಾಕೆ ಇನ್ನೂ ಸುಮ್ನೆ ಇದ್ದಾರೋ ಗೊತ್ತಿಲ್ಲ.
ಈ ಎಲ್ಲ ವಿಚಾರವಾಗಿ ಸರ್ಕಾರವೇ ಸುಮೋಟೋ ಕೇಸ್ ದಾಖಲಿಸಬೇಕಿತ್ತು. ಯಾಕೆ ಇನ್ನೂ ಕೇಸು ಹಾಕಿಲ್ಲ, ಕೇಸು ತೆಗೆದುಕೊಂಡಿಲ್ಲ.
ಈ ವಿಚಾರವಾಗಿ ಕೆಲವರು ಕೋರ್ಟ್ ಗೆ ಹೋಗಿ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಯಾವುದೇ ಸಿ.ಡಿ. ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿದ್ದಾರೆ. ಯಾಕೆ ಕೋರ್ಟ್ ಗೆ ಹೋಗಿದ್ದಾರೋ ಆ ಬಗ್ಗೆ ಅವರಿಗೇ ಗೊತ್ತಿದೆ. ನಮಗೇನು ಗೊತ್ತು?
ಈ ಸಿ.ಡಿ. ಪ್ರಸಂಗ ಬಾಂಬೆಯಲ್ಲಿ ನಡೆಯಿತೋ? ಬೆಂಗಳೂರಿನಲ್ಲಿ ನಡೆಯಿತೋ? ಪೂನಾದಲ್ಲಿ ನಡಿತೋ? ಬಿಜೆಪಿ ಸರ್ಕಾರ ಇತ್ತೋ? ಶಿವಸೇನೆ ಸರ್ಕಾರ ಇತ್ತೋ? ಯಾರು, ಏನು, ಎತ್ತಾ ಅಂತಾ ಅವರೇ ಹೇಳಬೇಕು? ಇದರಲ್ಲಿ ತಿರುಚುವುದು ಏನಿದೆ? ಒಂದೋ ಎರಡೋ ತಿರುಚಬಹುದು. 19 ಸಿ.ಡಿ.ಗಳನ್ನೂ ತಿರುಚಲು ಆಗುತ್ತಾ?
ಕಾಂಗ್ರೆಸ್ ನವರು ಮಾಡಿದ್ದಾರೆ ಅಂದ್ರೆ, ಕಾಂಗ್ರೆಸ್ ಅವರು ಬಂದು ನಿಮ್ಮ ಶರ್ಟು, ಪ್ಯಾಂಟ್ ಬಿಚ್ಚಿ ಅಂತಾ ಹೇಳಿ ಕೊಟ್ಟಿದ್ರಾ? ಸಿಎಂ ಭ್ರಷ್ಟ ಎಂದು ಹೇಳಲು ಸ್ಕ್ರಿಪ್ಟ್ ಬರೆದು ಕೊಟ್ಟಿದ್ರಾ? ಕನ್ನಡಿಗರ ವಿರುದ್ಧ ಮಾತಾಡಿ ಎಂದು ಹೇಳಿಕೊಟ್ವಾ? ನಾವೇನು ಸ್ಕ್ರಿಪ್ಟ್ ಕೊಟ್ವಾ? ಇದೇನು ಸಿನಿಮಾನಾ? ಇವೆಲ್ಲಾ ಅವರ ಬಾಯಿಲ್ಲಿ ಬಂದಂತಹ ನುಡಿಮುತ್ತುಗಳು..!
ನಾವು ಸುಮ್ಮನೆ ಕೂರಲ್ಲ. ನಮಗೂ ಗೊತ್ತಿದೆ. 24 ಗಂಟೆಯೊಳಗೇ ಐವರು ಹಿರಿಯ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದಾಗ ಯಡಿಯೂರಪ್ಪ ಅವರು ಯಾಕೆ ಮಾತನಾಡಲಿಲ್ಲ. ಕಟೀಲ್ ಅವರು 15 ಜನರ ರಾಜೀನಾಮೆ ಅಂತಾರೆ. ರಾಜಕೀಯ ಪಕ್ಷವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತೀರಾ?
ಇದನ್ನೆಲ್ಲಾ ನೋಡಿಕೊಂಡು ಸುಮ್ಮನೆ ಕೂರಬೇಕಾ? ನಮ್ಮ ಪಕ್ಷದ ರಕ್ಷಣೆ ನಾವು ಮಾಡಬಾರದಾ? ಇಂತಹ ವಿಚಾರ ಬಂದಾಗ ನಾವು ತಿಳಿದುಕೊಳ್ಳಬಾರದಾ?
ನಮ್ಮ ಪಕ್ಷದವರು ಹೋಗ್ತಾರೋ, ಬಿಡ್ತಾರೋ. ಬೇರೆ ಪಕ್ಷದ ಅಧ್ಯಕ್ಷರು ಇಂತಹ ಹೇಳಿಕೆ ಕೊಟ್ಟಾಗ ಅದರ ಬಗ್ಗೆ ವಿಚಾರ ಮಾಡುವುದು ನಮ್ಮ ಕರ್ತವ್ಯ ಅಲ್ಲವೇ? ಮಾಧ್ಯಮದಲ್ಲಿ ಹೆಚ್ಚು ಕಮ್ಮಿ ಆಗುತ್ತಿದೆ ಎಂಬ ಮಾಹಿತಿ ಬಂದಾಗ ನೀವು ಅದರ ಬಗ್ಗೆ ವಿಚಾರ ಮಾಡುತ್ತೀರಿ ಅಲ್ಲವೇ?
ನಮ್ಮ ಬಗ್ಗೆ ಯಾರು, ಯಾವಾಗ, ಯಾವ ಡೈಲಾಗ್ ಹೊಡೆದರು ಎಂಬುದನ್ನು ಮರೆತಿದ್ದೇವಾ? ಹಿಂದೆ ಯಾರ್ಯಾರ ಸರ್ಕಾರದಲ್ಲಿ ಏನೇನು ನಡೆದಿದೆ. ಅವರು ಕೊಟ್ಟ ಹೇಳಿಕೆಗಳೆಲ್ಲ ನಿಜವಾಯಿತೇ?
ಇದನ್ನು ಮುಖ್ಯಮಂತ್ರಿಗಳು ಹೇಗೆ ಸಹಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ.
ಅವರಿಗೆ ಹಾಲು ಕುಡಿಸಿ, ಇಂತಹ ಮಾತು ಹೇಳಿಸಲು ಅವರೇನು ಚಿಕ್ಕ ಮಕ್ಕಳಾ? ಇದನ್ನೆಲ್ಲಾ ಹೇಗೆ ನಿಭಾಯಿಸಬೇಕು ಅಂತಾ ಕಾಂಗ್ರೆಸ್ ಗೆ ಗೊತ್ತಿದೆ. ನಾವು ನಿಭಾಯಿಸುತ್ತೇವೆ.
ಮಾಧ್ಯಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವಾಗ ನಿಮಗೆ ಸ್ವಾಭಿಮಾನ ಬೇಡವೇ? ಕನ್ನಡಿಗರ ನಿಂದನೆಯಲ್ಲಿ ಸ್ವಾಭಿಮಾನ ಬೇಡವೇ? ನೀವು ನಿಮ್ಮ ಸ್ವಾಭಿಮಾನ ಮಾರಿಕೊಳ್ಳುವುದಿಲ್ಲ. ಅದನ್ನು ಸುಲಭವಾಗಿ ಬಿಟ್ಟುಕೊಡಬೇಡಿ.
ಸಿ.ಡಿ. ಫೇಕ್ ಆಗಿದ್ದರೆ ತನಿಖೆ ಯಾಕೆ ಬೇಕು? ಜನರಿಗೆ ಸಾಮಾನ್ಯ ಜ್ಞಾನ ಇಲ್ಲವೇ? ಯಾವುದು ಫೇಕ್, ಯಾವುದು ನಿಜ ಗೊತ್ತಿಲ್ಲವೇ?
ರಮೇಶ್ ಜಾರಕಿಹೊಳಿ ನೊಂದಿದ್ದಾನೆ. I feel sorry for him. ನಾನು ಅವನೂ ಒಂದು ಕಾಲದಲ್ಲಿ ಚೆನ್ನಾಗಿದ್ದೆವು. ಅವನಿಗೆ ಒಳ್ಳೆಯದಾಗಲಿ ಎಂದು ಬಯಸಿದ್ದೆ. ನಂತರ ಹುಚ್ಚುಚ್ಚಾಗಿ ಹೇಳಿಕೆ ಕೊಡಲುಶುರು ಮಾಡಿದ. ಆಮೇಲೆ ನಾನು ಅವನಿಂದ ದೂರ ಉಳಿದೆ.
ಅವರು ನಮ್ಮ ಪಕ್ಷ ಬಿಟ್ಟ ನಂತರ ನಾನು ಒಂದು ದಿನವೂ ಅವರ ಜತೆ ಮಾತನಾಡಿಲ್ಲ. ಮದುವೆಗೆ ಬಂದಿದ್ದಾಗ ಮಾತನಾಡಿಸಿದ್ದೆ.
ರಾಜಕಾರಣ ಅಂದ್ರೆ ಷಡ್ರಂತ್ಯ ಮಾಡೋದು ಸಾಮಾನ್ಯ. ನೀವು ಸರಿ ಇದ್ರೆ ನಿಮ್ಮನ್ನ ಯಾಕೆ ಸಿಕ್ಕಿಸಿ ಹಾಕಿಸುತ್ತಾರೆ? ನಮ್ಮ ಜ್ಞಾನ ನಮ್ಮ ಕೈಯಲ್ಲಿರಬೇಕು. ನಿಮ್ಮ ಬಟನ್ ನೀವೇ ಹಾಕೋಬೇಕು.
ಅವರು ನನ್ನ ಮೇಲೆ ಆರೋಪ ಮಾಡಲಿ. ಇದು ರಾಜಕೀಯ ಚೆಸ್ ಗೇಮ್. ಅವರೆಲ್ಲಾ ದೇವರ ಮಕ್ಕಳು ಅವರಿಗೆ ಒಳ್ಳೆಯದಾಗಲಿ.'

0 Comments