ಬೆಂಗಳೂರು: ಕೇಂದ್ರದ ನಗರಾಭಿವೃದ್ದಿ ಇಲಾಖೆ ಪ್ರಕಟಿಸಿರುವ ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕದಲ್ಲಿ ಅಗ್ರಸ್ಥಾನ ಪಡೆದಿರುವ ಬೆಂಗಳೂರು ನಗರದ ಪ್ರತಿಷ್ಠೆಗೆ ಧಕ್ಕೆ ಆಗದಂತೆ ಹಾಗೂ ವ್ಯವಸ್ಥಿತವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕಾದ ಅಗತ್ಯ ಇವತ್ತು ಇನ್ನಷ್ಟು ಹೆಚ್ಚಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ನಗರದಲ್ಲಿ ಶನಿವಾರ ಇನ್ಸಿಟ್ಯೂಟ್ ಆಫ್ ಅರ್ಬನ್ ಡಿಸೈನರ್ಸ್ ಸಂಸ್ಥೆ ಆಯೋಜಿಸಿದ್ದ ಸಿಟಿ ಫ್ಯೂಚರ್ಸ್ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, "ಬೆಂಗಳೂರು ಜಾಗತಿಕ ಮಟ್ಟದಲ್ಲಿ ವೇಗವಾಗಿ ಮತ್ತು ವ್ಯವಸ್ಥಿತವಾಗಿ ಬೆಳೆಯುತ್ತಿರುವ ನಗರ. ಹೀಗಾಗಿ ಬೆಂಗಳೂರಿನ ಬಗ್ಗೆ ಪ್ರತಿಯೊಬ್ಬರೂ ಆಸಕ್ತಿಯಿಂದ ವೈಜ್ಞಾನಿಕವಾಗಿ ಕೆಲಸ ಮಾಡಬೇಕು" ಎಂದರು.
ನಗರವೆಂದಾಕ್ಷಣ ಅಥವಾ ಕಟ್ಟಡ ಎಂದಾಕ್ಷಣ ಯಾವುದೇ ಪೂರ್ವಸಿದ್ಧತೆ ಇಲ್ಲ ಎಂದರೆ ನಿರುಪಯುಕ್ತ. ಈ ಆಧುನಿಕ ಕಾಲದಲ್ಲಿ ಸರಕಾರ ಇರಲಿ ಅಥವಾ ಖಾಸಗಿ ಕ್ಷೇತ್ರ ಇರಲಿ, ಎಲ್ಲೇ ಆದರೂ ವಿನ್ಯಾಸಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸರಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಯೋಜಿತವಾದ ವಿನ್ಯಾಸ, ಪರಿಕಲ್ಪನೆ ಅತ್ಯಂತ ಅಗತ್ಯ ಎಂದರು ಡಿಸಿಎಂ ತಿಳಿಸಿದರು
ಮಲ್ಲೇಶ್ವರ ಕ್ಷೇತ್ರದಲ್ಲಿ ಕೈಗೊಂಡಿರುವ ಯಾವುದೇ ನಿರ್ಮಾಣ ಕಾಮಗಾರಿ ಇದ್ದರೂ ಆದಕ್ಕೆ ನಿರ್ದಿಷ್ಟ ವಿನ್ಯಾಸವನ್ನು ರೂಪಿಸುವ ಪರಿಪಾಠವಿದೆ. ಗುಣಮಟ್ಟದ ಜತೆಗೆ, ನೋಡುಗರಿಗೆ ಚೆನ್ನಾಗಿಯೂ ಕಾಣಬೇಕು. ಈ ನಿಟ್ಟಿನಲ್ಲಿ ವಿನ್ಯಾಸಕ್ಕೆ ಉತ್ತೇಜನ ನೀಡಬೇಕಾಗಿದೆ. ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ (ಬಿಐಸಿ) ದಲ್ಲಿ ಈ ಪ್ರದರ್ಶನವು ಭಾನುವಾರವೂ ಇರಲಿದೆ.

0 Comments