ಇತ್ತೀಚೆಗೆ ನೃತ್ಯ ಕುಟೀರದ ಗುರು ಶ್ರೀಮತಿ ದೀಪಾ ಭಟ್ ಅವರ ಶಿಷ್ಯೇ ಕುಮಾರಿ ಚಂದನಪ್ರಿಯರವರ ರಂಗಪ್ರವೇಶ ಯಶಸ್ವಿಯಾಗಿ ಜೆಎಸ್ಎಸ್ ಪುರಭವನದಲ್ಲಿ ನಡೆಯಿತು. ಗಣೇಶನಿಗೆ ಪುಷ್ಪಾಂಜಲಿ ಅರ್ಪಿಸುವ ಮೂಲಕ ಪ್ರಾರಂಭವಾದ ಭರತನಾಟ್ಯ ಮಾರ್ಗಂನಲ್ಲಿ ಅಲರಿಪು ನಂತರ ಕನ್ನಡದಲ್ಲಿ ಶ್ರೀ ವಿಷ್ಣುದಾಸ್ ರಚಿತ ಕೃಷ್ಣ ಹಾಗೂ ಗೋಪಿಕೆರೊಡಗಿನ ರಾಸಲೀಲೆಗಳನ್ನು ಮನೋಜ್ಞವಾಗಿ ಅಭಿನಯಿಸಿದರು. ರಂಗ ಪ್ರವೇಶದ ಕೇಂದ್ರ ಬಿಂದು ಶ್ರೀರಂಜಿನಿ ರಾಗದ ಶ್ರೀಮತಿ ರುಕ್ಮಿಣಿ ದೇವಿ ಅರುಂಡೆಲ್ ನೃತ್ಯಸಂಯೋಜನೆಯ “ಸ್ವಾಮಿ ಮನ ಮಿರಂಗಿ” ವರ್ಣದಲ್ಲಿ ಕಾರ್ತಿಕೇಯನಿಗಾಗಿ ಹಂಬಲಿಸಿ ಹಾತೊರೆಯುತ್ತಿರುವ ನಾಯಿಕೆಗಾಗಿ ಕರುಣೆ ತೋರಲು ಬೇಗ ನವಿಲೇರಿ ಬಾರೆಂದು ಸಖಿ ಕೋರುತ್ತಿರುವ ದೃಶ್ಯವನ್ನು ಅಚ್ಚುಕಟ್ಟಾಗಿ ವಿಧವಿಧ ಜತಿಗಳಿಂದ ಭಾವಪೂರ್ಣವಾಗಿ ಅಭಿನಯಿಸಿದರು.
ವೇದಿಕೆಯಲ್ಲಿ ಡಾಕ್ಟರ್ ಆರ್ ಕೆ ಪದ್ಮನಾಭ, ಡಾಕ್ಟರ್ ಸೂರ್ಯ ಪ್ರಸಾದ್ ಹಾಗೂ ನೃತ್ಯ ಗುರು ಗಾಯತ್ರಿ ಕೇಶವನ್ ಅವರು ಉಪಸ್ಥಿತರಿದ್ದರು. ಉತ್ತರಾರ್ಧದಲ್ಲಿ ರಾಮಾಯಣದ ಅಪರೂಪದ ವಿರಹಿನಾಯಿಕೆ ಊರ್ಮಿಳ ಅವರ ಕುರಿತ ಒಂದು ಸುಂದರ, ವಿಭಿನ್ನ ಅಭಿನಯ ಪ್ರಧಾನವಾದ ನೃತ್ಯ ಬಂದ ಹಾಗೂ ಪುರಂದರದಾಸರ ದೇವನಾಮ ನೀನೇ ಅನಾಥ ಬಂದು ಹಾಗೂ ಅಮೃತವರ್ಷಿಣಿ ರಾಗದ ತಿಲ್ಲಾನ ದೊಂದಿಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ತಾನು ಒಬ್ಬ ಪರಿಣಿತ ನೃತ್ಯ ಕಲಾವಿದೆ ಎಂಬುದನ್ನು ಸಮರ್ಥವಾಗಿ ಕಿಕ್ಕರಿದ ಕಲಾರಸಿಕರಿಗೆ ಪರಿಚಯಿಸಿ ಸ್ಮರಣೀಯ ನೃತ್ಯವನ್ನು ಪೂರ್ಣಗೊಳಿಸಿದ ಹೆಗ್ಗಳಿಕೆ ಕುಮಾರಿ ಚಂದನ ಪ್ರಿಯಳದಾಗಿತ್ತು.



0 Comments