ವಾರ್ತಾಜಾಲ,ಶಿಡ್ಲಘಟ್ಟ : ನೀರನ್ನು ಯಾವರೀತಿ ತಯಾರು ಮಾಡುವುದಕ್ಕೆ ಆಗುವುದಿಲ್ಲವೋ ಅದೇ ರೀತಿ ರಕ್ತವನ್ನು ತಯಾರಿಸುವುದಕ್ಕೆ ಆಗುವುದಿಲ್ಲ. ಇದು ಮಾನವನ ರಕ್ತ, ಮಾನವನಿಂದ ಮಾತ್ರ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ರಕ್ತದಾನ ಶಿಬಿರದ ಆಯೋಜನೆಯನ್ನು ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧೀನದಲ್ಲಿ ಬರುವ
ಸಂಜೀವಿನಿ ಎನ್.ಆರ್.ಎಲ್.ಎಂ ಮತ್ತು ಇಂಡಿಯನ್ ರೇಡ್ ಕ್ರಾಸ್ ಸಂಸ್ಥೆವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ,ರಕ್ತದಾನವೇ ಎಲ್ಲಕ್ಕಿಂತ ಶೇಷ್ಠವಾದ ದಾನ ಎಂದು ಭಾವಿಸಿ ದಿಬ್ಬೂರಹಳ್ಳಿ ಗ್ರಾಮದಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದ್ದು, ರಕ್ತ ಸಂಗ್ರಹಿಸಿ ಅದನ್ನು ಅಗತ್ಯವಿರುವ ಜನರಿಗೆ ನೀಡಿ ಅವರ ಜೀವ ಉಳಿಸುವ ಕೆಲಸ ಮಾಡಬೇಕು. ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬಹುದು.
ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳು, ಶಸ್ತ್ರ ಚಿಕಿತ್ಸೆ ಮತ್ತಿತರ ಸಂದರ್ಭಗಳಲ್ಲಿ ವೈದ್ಯರು ರೋಗಿಗೆ ರಕ್ತದ ಅಗತ್ಯವಿದೆ. ತಕ್ಷಣ ರಕ್ತ ತನ್ನಿ ಎಂದು ರೋಗಿಯ ಸಂಬಂಧಿಗಳಿಗೆ ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಕಾಲದಲ್ಲಿ ರಕ್ತ ಸಿಕ್ಕರೆ ರೋಗಿಯ ಪ್ರಾಣ ಉಳಿಯುತ್ತದೆ ಎಂದರು.
ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ ಮಾತನಾಡಿ,ರಕ್ತವನ್ನು ರಕ್ತದಿಂದಲೇ ಪರಿಹರಿಸಿಕೊಳ್ಳಬೇಕು, ಬೇರೆ ಯಾವುದೇ ರೀತಿಯಲ್ಲೂ ಕೃತಕವಾಗಿ ತಯಾರಸಲು ಆಗುವುದಿಲ್ಲ. ಎಷ್ಟು ರಕ್ತದಾನ ಶಿಭಿರಗಳನ್ನು ಮಾಡ್ತಿರೋ ಅಷ್ಟು ಒಳ್ಳೆಯದು.ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬ್ಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು, ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಆದ್ದರಿಂದ ಸಹೃದಯದಿಂದ ರಕ್ತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ದಿಬ್ಬೂರಹಳ್ಳಿ ಪಂಚಾಯಿತಿಯ ಪ್ರಾಥಮಿಕ ಆರೋಗ್ಯ ಅಧಿಕಾರಿ ಯಶ್ವಂತ್, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ದೇವರಾಜ್ ಮತ್ತು ಲೋಕೇಶ್, ಮೇಲ್ವಿಚಾರಕ ಬಾಲರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.

0 Comments