ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ : ರೈತರು ಬೆಳೆಗಳನ್ನು ಬೆಳೆಯಲು ವಿದ್ಯುತ್ ಅತ್ಯವಶ್ಯಕವಾಗಿದೆ. ಬೆಳೆ ಫಸಲು ಬರುವ ಸಮಯದಲ್ಲಿ ಟ್ರಾನ್ಸ್ ಫಾರ್ಮರ್ ಸುಟ್ಟು ಹೋದಾಗ ಅದನ್ನ ಪುನಃ ಹಾಕುವುದಕ್ಕೆ ವಾರಗಟ್ಟಲೆ ಸಮಯವಾಗುತ್ತದೆ ಮತ್ತು ಲೈನ್ ಮ್ಯಾನ್ ಗಳು 3-4 ಸಾವಿರ ಲಂಚವಿಲ್ಲದೆ ಟ್ರಾನ್ಸ್ ಫಾರ್ಮರ್ ಹಾಕುವುದಿಲ್ಲ ಎಂದು ರೈತ ಮುಖಂಡ ರವಿಪ್ರಕಾಶ್ ಆರೋಪಿಸಿದರು.
ನಗರದ ಬೆಸ್ಕಾಂ ಕಛೇರಿಯಲ್ಲಿ ಗ್ರಾಹಕರ ಕುಂದು ಕೊರತೆ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರದಿಂದ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಬಂದರೂ ಅದನ್ನ ರೈತರಿಗೆ ಉಚಿತವಾಗಿ ನೀಡದೇ ರೈತರ ಬಳಿ ಹಣ ವಸೂಲಿ ಮಾಡಿ ಒಂದು ವಾರಕ್ಕೆ ಟ್ರಾನ್ಸ್ ಫಾರ್ಮರ್ ಹಾಕ್ತೀರಿ.
ರೈತರ ಬಳಿ ಕೆಲವು ಲೈನ್ ಮ್ಯಾನ್ ಗಳು ಹಣ ವಸೂಲಿಗೆ ಇಳಿದಿದ್ದಾರೆ. ಈ ವಿಚಾರ ಅಧಿಕಾರಿಗಳ ಗಮನಕ್ಕೂ ಬಂದಿರುತ್ತದೆ ಆದರೂ ಸಹ ಯಾವುದೇ ಕ್ರಮ ಕೈಗೊಳದೇ ಇರುವುದು ಖಂಡನೀಯ ಎಂದರು. ರೈತ ದೂರು ನೀಡಿದ ಎರಡೂ ಮೂರು ದಿನಗಳಲ್ಲಿ ಯಾಕೆ ನೀವು ಟ್ರಾನ್ಸ್ ಫಾರ್ಮರ್ ಹಾಕುವುದಿಲ್ಲ. ರೈತರ ಬೆಳೆಗಳು ಒಂದು ವಾರ ನೀರಿಲ್ಲದಿದ್ದರೆ ಬೆಳೆಗಳ ಪರಿಸ್ಥಿತಿ ಏನಾಗಬಹುದು ಎಂಬುದು ನಿಮ್ಮ ಊಹೆಗಾದರೂ ಬಂದಿರುತ್ತದೆಯೇ ಎಂದರು.
ತಾಲೂಕಿನಲ್ಲಿ 473 ರೈತರಿಂದ ಹೊಂತಿಕೆಯಾಗಿ 29,970 ರೂಗಳನ್ನ ಪಡೆದಿದ್ದು ಇದುವರೆಗೂ ವಿದ್ಯುತ್ ಪರಿವರ್ತಕಗಳನ್ನು ನೀಡಿರುವುದಿಲ್ಲ ಎಂದು ಆರೋಪಿಸಿದರು.
ರೈತರೊಂದಿಗೆ ಚರ್ಚಿಸಿದ ಕಾರ್ಯನಿರ್ವಾಹಕ ಅಭಿಯಂತರ ವೆಂಕಟೇಶಪ್ಪ ಇನ್ಮುಂದೆ ಈ ರೀತಿ ಯಾವುದು ಆಗುವುದಿಲ್ಲ.
ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದಾಗ ಲೈನ್ ಮ್ಯಾನ್ ಗಳು ರೈತರಿಂದ ಲಂಚವನ್ನ ಕೇಳುತ್ತಿದ್ದಾರೆ ಎಂದಾಗ ನಮ್ಮ ಸಿಬ್ಬಂದಿಯವರು ಹಣ ಸ್ವೀಕರಿಸುತ್ತಿರುವ ಬಗ್ಗೆ ಸಾಕ್ಷಿಗಳನ್ನ ಒದಗಿಸಿದಲ್ಲಿ ಅಂತವರನ್ನ ಸ್ಥಳದಲ್ಲಿಯೇ ಅಮಾನತ್ತು ಮಾಡಲಾಗುವುದು ಎಂದರು. ಮಾರ್ಚ್ ವರೆಗೂ ಬಂದಿರುವ ಎಲ್ಲಾ ವಿದ್ಯುತ್ ಪರಿವರ್ತಕಗಳನ್ನ ಯಾವುದೇ ಬಾಕಿ ಇಲ್ಲದೆ ನೀಡಿದ್ದೇವೆ ಈಗ ತಾಲೂಕಿನಲ್ಲಿ ಬಾಕಿ ಇರುವ ಎಲ್ಲಾ ಟ್ರಾನ್ಸ್ಫಾರ್ಮರ್ಗಳನ್ನ ಆದಷ್ಟು ಬೇಗ ನೀಡುವುದಾಗಿ ಭರವಸೆ ನೀಡಿದರು.
ಒರಿಸ್ಸಾದ ತಾಲ್ಸೇರ್ ರಿಂದ ಎರಡು ಲೈನ್ ಮೂಲಕ 400 ಕೆಬಿ ವ್ಯಾಟ್ಸ್ ಸಾಮರ್ಥ್ಯವುಳ್ಳ ಲೈನ್ ಕೋಲಾರದ ಹರಹಳ್ಳಿ ಪವರ್ ಗ್ರಿಡ್ ಬರುತ್ತದೆ. ನಂತರ ಹರಹಳ್ಳಿಯಲ್ಲಿ 220 ವ್ಯಾಟ್ಸ್ ಪರಿವರ್ತನೆ ಮಾಡಿ ಚಿಂತಾಮಣಿ ಪವರ್ ಸ್ಟೇಷನ್ ನಿಂದ ಶಿಡ್ಲಘಟ್ಟಕ್ಕೆ 66 ವ್ಯಾಟ್ಸ್ ಗೆ ಸಾಮರ್ಥ್ಯಕ್ಕೆ ಪರಿವರ್ತನೆ ಮಾಡಿ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ.ಪ್ರಭು, ರೈತ ಮುಖಂಡ ಸಿ ಎಂ ಮಾರುತಿ, ಮುನಿರಾಜ್, ಚೌಡಸಂದ್ರ ಶ್ರೀನಿವಾಸ್ ,ಮನೋಜ್,
ರೈತರು ಮತ್ತು ಗ್ರಾಹಕರು ಹಾಗೂ ಬೆಸ್ಕಾಂ ಸಿಬ್ಬಂದಿ ಹಾಜರಿದ್ದರು


0 Comments