ಅಪ್ರತಿಮ ಕನ್ನಡ ಪ್ರೇಮಿ ಸಿದ್ದರಾಮಯ್ಯನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಕನ್ನಡಾಭಿಮಾನಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಪ್ರಮಾಣ ವಚನ ಸಮಾರಂಭದಲ್ಲಿ ಸಚಿವರಾಗಿ ಜಮೀರ್ ಅಹ್ಮದ್ ಖಾನ್ ಇಂಗ್ಲಿಷ್ ನಲ್ಲಿ ಪ್ರಮಾಣ ವಚನವನ್ನ ಸ್ವೀಕರಿಸಿದ್ದು ಭಾಷಾವಾರು ರಾಜ್ಯಗಳಿಗೆ ಮಾಡಿದ ಅಪಮಾನವಾಗಿದೆ. ಸುಂದರ ಸಮಾರಂಭಕ್ಕೆ ಕಪ್ಪು ಚುಕ್ಕೆಯಾಗಿದೆ. ಜಮೀರ್ ಅಹ್ಮದ್ ಖಾನ್ ಅವರ ಈ ಕನ್ನಡ ವಿರೋಧಿ ನಡೆಯನ್ನು ಕನ್ನಡ ಗೆಳೆಯರ ಬಳಗವು ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತವಾಗಿ ಅಡಳಿತ ಭಾಷೆ ಎಂದು ಒಪ್ಪಿದೆ. ಕನ್ನಡವನ್ನು ಅನುಷ್ಠಾನಗೊಳಿಸಬೇಕಾದ ಸಚಿವರೇ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವುದು ತೀರ ಅನುಚಿತ ನಡೆಯಾಗಿದೆ. ಸಚಿವರ ಈ ಕನ್ನಡ ವಿರೋಧಿ ನಡೆಯನ್ನು ಕನ್ನಡ ಚಳವಳಿಯ ಹಿನ್ನೆಲೆಯಿಂದ ಬಂದ, ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗಂಭಿರವಾಗಿ ಪರಿಗಣಸಿ ತಮ್ಮ ಸಚಿವ ಸಂಪುಟದ ಸಚಿವರು ಕನ್ನಡದಲ್ಲೇ ಆಡಳಿತ ನಡೆಸುವುದರ ಜೊತೆಗೆ ಸಾರ್ವಜನಿಕವಾಗಿ ಮತ್ತು ವೈಯಕ್ತಿಕವಾಗಿ ಕನ್ನಡದಲ್ಲೇ ವ್ಯವಹರಿಸುವಂತೆ ಸೂಚಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳವರಲ್ಲಿ ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ.

0 Comments