ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ನೆಲಮಂಗಲ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ಅವರ ಪರ ರೋಡ್ ಶೊ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಚಿವ ಸುಧಾಕರ್, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ನೆಲಮಂಗಲ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ಹಾಜರಿದ್ದರು.
*ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು - ಸಿಎಂ ಬೊಮ್ಮಾಯಿ
*ಯಲಹಂಕ ಬಿಜೆಪಿ ಅಭ್ಯರ್ಥಿ ಎಸ್. ಆರ್. ವಿಶ್ವನಾಥ್ ಪರ ರೋಡ್ ಶೋ ನಡೆಸಿದ ಸಿಎಂ ಬೊಮ್ಮಾಯಿ*
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ದುರಾಡಳಿತ, ಪಕ್ಷಪಾತ, ಒಡೆದು ಆಳುವ ನೀತಿ, ಅನ್ಯಾಯ, ಅನೀತಿ, ಅಧರ್ಮ. ಆದ್ದರಿಂದ ಈ ನೆಲದಿಂದ ಕಾಂಗ್ರೆಸ್ ನ್ನು ಶಾಶ್ವತವಾಗಿ ಕಿತ್ತುಹಾಕಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಯಲಹಂಕ ಮತ್ತು ರಾಜಾನುಕುಂಟೆಯಲ್ಲಿ ಜಯವಾಹಿನಿ ಯಾತ್ರೆಯಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ಆರ್ ವಿಶ್ವನಾಥ್ ಪರ ಚುನಾವಣಾ ಪ್ರಚಾರ ಮಾಡುತ್ತಾ ಮಾತನಾಡಿದರು
ಭಾರತೀಯ ಜನತಾ ಪಕ್ಷದ ಜಯವಾಹಿನಿ ಯಾತ್ರೆಯನ್ನು ಯಲಹಂಕದಿಂದ ಶುಭಾರಂಭ ಮಾಡಿದ್ದೇವೆ. ಯಲಹಂಕ ಕ್ಷೇತ್ರ ಅತಿ ಹೆಚ್ಚು ಮತಗಳಿಂದ ಆರಿಸಿ ಬರುವ ಬೆಂಗಳೂರಿನ ನಂಬರ್ ಒನ್ ಕ್ಷೇತ್ರ. ಅದಕ್ಕೆ ಕಾರಣ ಕಳೆದ ಹದಿನೈದು ವರ್ಷದಿಂದ ನಿಮ್ಮ ಸೇವೆ ಮಾಡುತ್ತಿರುವ ಎಸ್ ಆರ್ ವಿಶ್ವನಾಥ ಅವರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ಸಿದ್ದರಾಮಯ್ಯ ಅವರದ್ದು ಹಗರಣಗಳ ಸರ್ಕಾರ*
2013-18 ರ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲಿಸ್ ನೇಮಕಾತಿ ಹಗರಣ, ಪ್ರಶ್ನೆ ಪತ್ರಿಕೆ ಲೀಕ್ ಹಗರಣ, ಶಿಕ್ಷಕ ನೇಮಕಾತಿ ಹಗರಣ, 8000 ಕೋಟಿ ಮೌಲ್ಯದ 843 ಎಕರೆ ರಿಡೂ ಹಗರಣ ಮಾಡಿ ಸಿದ್ದರಾಮಯ್ಯ ಬೆಂಗಳೂರನ್ನು ಲೂಟಿ ಮಾಡಿದ್ದಾರೆ. ರಾಜ್ಯಾದ್ಯಂತ ಲೂಟಿ ಮಾಡಿದ್ದಾರೆ. ಇಂತ ಕಾಂಗ್ರೆಸ್ ಅನ್ನು ಕಿತ್ತೊಗೆದರೆ ಭ್ರಷ್ಟಾಚಾರ ಕಿತ್ತೊಗೆದಂತೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*ಗ್ಯಾರಂಟಿ ಕಾರ್ಡ್ ಗಳಗಂಟಿ:*
ಜಾತಿ ಜಾತಿ ನಡುವೆ ವಿಷ ಬೀಜ ಬಿತ್ತಿ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅವರು ಕೊಟ್ಟಿರುವ ಗ್ಯಾರೆಂಟಿ ಕಾರ್ಡ್ ಜೀವ ಇಲ್ಲದ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅದರಲ್ಲಿ ಉಪ್ಪಿನಕಾಯಿ ಹಾಕೋದು ಬಿಟ್ರೆ ಬೇರೇನೂ ಮಾಡೋಕೆ ಆಗಲ್ಲ. ಚುನಾವಣೆವರೆಗೂ ಅದು ಗ್ಯಾರಂಟಿ. ಚುನಾವಣೆ ನಂತರ ಅದು ಗಳಗಂಟಿ. ಆದ್ದರಿಂದ ಕಾಂಗ್ರೆಸ್ ಕಿತ್ತೊಗೆಯಲು ಕೆಂಪೇಗೌಡರು ಮೆಟ್ಟಿದ ಗಂಡು ಭೂಮಿಯಿಂದ ನನ್ನ ಪ್ರಚಾರ ಮಾಡುತ್ತಿದ್ದೇನೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
*ಉತ್ತಮ ಆಡಳಿತ ಬಿಜೆಪಿ ಧ್ಯೇಯ:*
ಎಲ್ಲ ವರ್ಗಗಳನ್ನೂ ಸಮಾನವಾಗಿ ನೋಡಿಕೊಂಡಿರುವ ನಾಡಪ್ರಭು ಕೆಂಪೇಗೌಡರ ದಿಟ್ಟ ಆಡಳಿತ, ಕಾಯಕವೇ ಕೈಲಾಸ ಎಂದಿರುವ ಬಸವ ಪಥದ ಆಡಳಿತ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೀನ ದಲಿತರ ರಕ್ಷಣೆ ಮತ್ತು ಉದ್ಧಾರ ಮಾಡುವ ಆಡಳಿತ, ಕನಕದಾಸರ ದಾಸವಾಣಿ ಅನುಷ್ಠಾನ ಮಾಡುವ ಆಡಳಿತ ಕೊಡುವುದು ನಮ್ಮ ಬಿಜೆಪಿಯ ಧ್ಯೇಯ. ಬಿಜೆಪಿ ಪಕ್ಷ ಆಂತರಿಕ ಮೀಸಲಾತಿ ಕೊಟ್ಟು, ಹಿಂದುಳಿದ ವರ್ಗದ ಮೀಸಲಾತಿ ಹೆಚ್ಚಳ ಮಾಡಿದೆ. ಆದ್ದರಿಂದ ಡಬಲ್ ಎಂಜಿನ್ ಸರ್ಕಾರದ ಕೆಲಸಗಳನ್ನು ಮನೆಮನೆಗೆ ತಲುಪಿಸಬೇಕು. ಯಲಹಂಕದಲ್ಲಿ ಎಲ್ಲ ಸಮುದಾಯಗಳ ಜನರು ರಾಜ್ಯ ಅಥವಾ ಕೇಂದ್ರದ ಒಂದಿಲ್ಲೊಂದು ಯೋಜನೆಯ ಅನುಕೂಲ ಪಡೆದಿದ್ದಾರೆ. ವಿಶ್ವನಾಥ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬನ್ನಿ. ಅವರು ಕೇವಲ ಯಲಹಂಕ ಮಾತ್ರವಲ್ಲ, ಸುತ್ತಲೂ ಇರುವ 8 ಕ್ಷೇತ್ರಗಳನ್ನು ಗೆಲ್ಲಿಸುತ್ತಾರೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
*ಪರಿವಾರದ ಪಕ್ಷಕ್ಕೆ ಅವಕಾಶ ಕೊಡಬೇಡಿ:*
ಬೆಂಗಳೂರು ಮಹಾನಗರದಲ್ಲಿ ಸಿಗುವ ಎಲ್ಲ ಸೌಲಭ್ಯಗಳು ರಾಜಾನುಕುಂಟೆಯಲ್ಲಿ ಸಿಗುವಷ್ಟು ಅಭಿವೃದ್ಧಿ ಕೆಲಸ ಆಗಿದೆ. ವಿಶ್ವನಾಥ್ ಮಾಡಿರುವ 10% ಅಭಿವೃದ್ಧಿ ಕೆಲಸ ಮಾಡಿ ತೋರಿಸಲಿ ಎಂದು ಕಾಂಗ್ರೆಸ್ಗೆ ಸವಾಲು ಹಾಕುತ್ತೇನೆ. ರಾಜ್ಯದಲ್ಲಿ ಮತ್ತೊಂದು ಪಕ್ಷ ಇದೆ. ಬಹುಮತ ಬರದಿದ್ದರೆ, ಜೆಡಿಎಸ್ ನವರು ತಾವು ಮೇಲೆ ಹತ್ತಿ ಕೂಡಲು ಅವಕಾಶಕ್ಕಾಗಿ ಕಾಯುತ್ತಿರುತ್ತಾರೆ. ಸ್ವಜನ ಪಕ್ಷ ಮತ್ತು ಪರಿವಾರದ ಪಕ್ಷಕ್ಕೆ ಈ ಬಾರಿ ಅವರಿಗೆ ಅವಕಾಶ ಕೊಡಬಾರದು. ಬಿಜೆಪಿ ಮಾತ್ರ ಕರ್ನಾಟಕದ ಕಲ್ಯಾಣ ಮಾಡಲು ಸಾಧ್ಯ. ಆದ್ದರಿಂದ ಬಿಜೆಪಿಯನ್ನು ಸ್ಪಷ್ಟ ಬಹುಮತದಿಂದ ಗೆಲ್ಲಿಸಬೇಕು. ನಾನು ರಾಜ್ಯದ ಮೂಲೆಮೂಲೆಯಲ್ಲಿ ಸುತ್ತಿದ್ದೇನೆ. ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ಯಾವುದೇ ಶಕ್ತಿಗೆ ಸಾಧ್ಯ ಇಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ದಿಟ್ಟ ಧೀರ ಧೀಮಂತ ಎಸ್ ಆರ್ ವಿಶ್ವನಾಥ್:*
ಯಲಹಂಕದಲ್ಲಿ ರಸ್ತೆ, ನೀರು ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯ ನೀಡಿರುವ ದಿಟ್ಟ ಧೀರ ವಿಶ್ವನಾಥ ಅವರು. ಮಳೆ, ಬಿಸಿಲು, ಪ್ರವಾಹ ಬಂದರೂ ರಾತ್ರಿ 12 ಗಂಟೆಗೆ ಹೋಗಿ ಪ್ರವಾಹ ದಿಂದ ಜನರನ್ನು ರಕ್ಷಣೆ ಮಾಡಿದವರು ದಿಟ್ಟ ಧೀಮಂತ ವಿಶ್ವನಾಥ್ ಅವರು. ಬಿಡಿಎ ಅಧ್ಯಕ್ಷರಾಗಿ ಹತ್ತು ಜನ ಮಂತ್ರಿಗಳು ಮಾಡದಷ್ಟು ಕೆಲಸವನ್ನು ಮಾಡಿ ಹೊಸ ಲೇಔಟ್ ಗಳನ್ನು ಮಾಡಿ, ಹಳೇ ಲೇಔಟ್ ಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಟ್ಟು ಆಧುನಿಕ ಬೆಂಗಳೂರು ನಿರ್ಮಾಣದಲ್ಲಿ ಎಸ್ ಆರ್ ವಿಶ್ವನಾಥ್ ಪಾತ್ರ ವಹಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
*ಅಸಾಧ್ಯದ ಕೆಲಸ ಸಾಧ್ಯ ಮಾಡಿದ್ದಾರೆ:*
ಎಸ್ ಆರ್ ವಿಶ್ವನಾಥ್ ಅವರು ಬೆಂಗಳೂರಿನ ಮುತ್ತು. ಅವರು ಅಸಾಧ್ಯ ಎನ್ನುವ ಕೆಲಸವನ್ನು ಸಾಧ್ಯ ಮಾಡಿ ತೋರಿಸಿದ್ದಾರೆ. ಇವರ ಕ್ಷೇತ್ರದ ಎಲ್ಲ ಗ್ರಾಮ ಪಂಚಾಯತಿಗಳನ್ನೂ ನಗರದ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಅಂಬೇಡ್ಕರ್ ಭವನ ನಿರ್ಮಾಣ ಮಾಡಿದ್ದಾರೆ. ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಿದ್ದಾರೆ. ಸಮಾನತೆ ಸಾರಿದ ಬಸವಣ್ಣನ ತತ್ವದಡಿ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡುವ ಕೆಲಸ ಮಾಡಿದ್ದಾರೆ ವಿಶ್ವನಾಥ್ ಎಂದು ಸಿಎಂ ಬೊಮ್ಮಾಯಿ ಹೇಳಿದರು.
*1 ಲಕ್ಷ ಮತಗಳ ಲೀಡ್ ನಿಂದ ಗೆಲ್ಲಿಸಿ:*
ನನಗೆ ಈಗ ಅತ್ಯಂತ ಆತ್ಮೀಯ ನೆಚ್ಚಿನ ಬಲಭೀಮ ಸ್ನೇಹಿತ. ಯಾಕೆಂದರೆ ನನ್ನ ತಂದೆಯ ಹೆಸರು ಎಸ್ ಆರ್ ಬೊಮ್ಮಾಯಿ, ನನ್ನ ಸ್ಮೇಹಿತನ ಹೆಸರು ಎಸ್ ಆರ್ ವಿಶ್ವನಾಥ್. ಇವರು ಯಾವಾಗ ಎದುರಿಗೆ ಬಂದಾಗ ನಮ್ಮ ತಂದೆ ನೆನಪಿಗೆ ಬರುತ್ತಾರೆ. ಬೆಂಗಳೂರಿನ ಭವ್ಯ ಭವಿಷ್ಯ ಬರೆಯಲು, ಜತೆಗೆ ಯಲಹಂಕ ಗೆ ಹೊಸ ಚಿಂತನೆ ಕೊಡಲು ಎಸ್ ಆರ್ ವಿಶ್ವನಾಥ ಅವರು 1 ಲಕ್ಷ ಮತಗಳಿಂದ ಲೀಡ್ ನಿಂದ ಗೆಲ್ಲಿಸಿದರೆ ರಾಜ್ಯದಲ್ಲಿ ಬಿಜೆಪಿ 130 ಸ್ಥಾನ ಪಡೆದು ಮತ್ತೆ ಸರ್ಕಾರ ಸ್ಥಾಪನೆ ಮಾಡಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
*ನೆಲಮಂಗಲ ಮಾದರಿ ಕ್ಷೇತ್ರ ಮಾಡಲು ಬದ್ಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ನೆಲಮಂಗಲ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹಣದ ಹೊಳೆ ಹರಿಸುತ್ತಿದ್ದಾರೆ. ಆದರೆ, ಇಲ್ಲಿನ ಸ್ವಾಭಿಮಾನಿ ಮತದಾರರು ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ರನ್ನು ಗೆಲ್ಲಿಸುವ ಭರವಸೆ ಇದೆ. ನೆಲಮಂಗಲ ಮಾದರಿ ಕ್ಷೇತ್ರವನ್ನಾಗಿ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ನೆಲಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಸಪ್ತಗಿರಿ ನಾಯಕ್ ಅವರ ಪರವಾಗಿ ರೋಡ್ ಶೋ ನಡೆಸಿ ಅವರು ಮಾತನಾಡಿದರು.
ಕಾಂಗ್ರೆಸ್ ನವರು ಹತಾಶರಾಗಿ ರಾಜ್ಯದಲ್ಲಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಷರು ಬಿಟ್ಟು ಹೋದ ಬೀಜ ಕಾಂಗ್ರೆಸ್. ಕಾಂಗ್ರೆಸ್ ಅವಧಿಯಲ್ಲಿ ದೇಶವನ್ನು ಲೂಟಿ ಮಾಡಿದ್ದರು. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದರು ಎಂದರು.
ಕ್ಷೇತ್ರದ ಅಭ್ಯರ್ಥಿ ಸಪ್ತಗಿರಿ ವೆಂಕಟೇಶ್ವರ ಆಶೀರ್ವಾದ ಪಡೆದು ನಿಮ್ಮ ಮುಂದೆ ಬಂದು ನಿಂತಿದ್ದಾರೆ. ಅವರನ್ನು 25 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡು ಬರಬೇಕು ಎಂದು ಮತದಾರರಲ್ಲಿ ಸಿಎಂ ಬೊಮ್ಮಾಯಿ ಮನವಿ ಮಾಡಿದರು.
0 Comments