ಕಲಬುರಗಿ, ಏಪ್ರಿಲ್ 20: ಕಾಂಗ್ರೆಸ್ ಪಕ್ಷ ಜನರಿಗೆ ಸುಳ್ಳು ಬರವಸೆಗಳನ್ನು ನೀಡಿ ಮತದಾರರನ್ನು ವಂಚಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅಫಜಲಪುರದಲ್ಲಿ ಬಿಜೆಪಿ ಅಭರ್ಥಿ ಮಾಲಿಕಯ್ಯ ಗುತ್ತೆದಾರ ಪರವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಬಾರಿಯ ಚುನಾವಣೆ ಅತ್ಯಂತ ಮಹತ್ವದ ಚುನಾವಣೆ, ಈ ಚುನಾವಣೆಯಲ್ಲಿ ಹಲವಾರು ವಿಷಯಗಳು ಚರ್ಚೆಗೆ ಬಂದಿವೆ. ನಾವು ನಮ್ಮ ರಿಪೋರ್ಟ್ ಕಾರ್ಡ್ ಮುಂದಿಟ್ಟು ಮತ ಕೇಳುತ್ತಿದ್ದೇವೆ. ಈ ಬಾರಿ ಅಫ್ಜಲಪುರದಲ್ಲಿ ಬಿಜೆಪಿಯ ಗಾಳಿ ಬೀಸುತ್ತಿದೆ ಎಂದರು.
ದಾಖಲೆ ಮತಗಳನ್ನು ಪಡೆದು ಗೆಲ್ಲಲಿದ್ದಾರೆ
ಮಾಲೀಕಯ್ಯ ಗುತ್ತೇದಾರ್ ಅವರು ಐದು ವರ್ಷ ಜನರ ಜೊತೆ ಇದ್ದು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ಅವರು ದಾಖಲೆ ಮಟ್ಟದಲ್ಲಿ ಮತಗಳಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು,
ಈ ಭಾಗದಲ್ಲಿ ಅನೇಕ ಕಾಂಗ್ರೆಸ್ ನಾಯಕರಿದ್ದರು, ಅವರು ಐದು ವರ್ಷ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಮಾಲಿಕಯ್ಯ ಗುತ್ತೆದಾರ ಇದ್ದಾಗ ಅಫ್ಜಲಪುರ ಏತ ನೀರಾವರಿ ಯೋಜನೆಯನ್ನು ನೀರಾವರಿ ಸಚಿವನಾಗಿಡಿಸ ಸಂದರ್ಭದಲ್ಲಿ ಜಾರಿ ಮಾಡಿದ್ದೇವೆ ಎಂದರು.
ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ದ್ರೋಹ ಬಗೆದಿದೆ
ಕಲ್ಯಾಣ ಕರ್ನಾಟಕ ಭಾಗಕ್ಕೆ ಕಾಂಗ್ರೆಸ್ ದ್ರೋಹ ಮಾಡಿದೆ ಈ ಭಾಗದಲ್ಲಿ ಒಂದೇ ಒಂದು ನೇಮಕಾತಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಕಲ್ಯಾಣ ಕರ್ನಾಟಕಕ್ಕೆ 1000 ಕೋಟಿ ರೂ. ಮೀಸಲಿಟ್ಟಿದ್ದರು. ಆದರೆ ಅದನ್ನು ಖರ್ಚು ಮಾಡಲಿಲ್ಲ. ಮುಂದಿನ ವರ್ಷ ಚರ್ಚು ಮಾಡುವುದಾಗಿ ಹೇಳುತ್ತಾರೆ. ಇಲ್ಲಿ 371 ಜೆ ಪರಿಚ್ಛೇಧ ಜಾರಿ ಮಾಡಿದರು. ಅದು ಜಾರಿಯಾಗಬೇಕು. ಕಾನೂನು ಹಾಳೆಯ ಮೇಲೆ ಇದ್ದರೆ ಪ್ರಯೋಜನ ಇಲ್ಲ. 371 ಜೆ ಬಂದ ಮೇಲೆ ಯಾವ ಅಭಿವೃದ್ಧಿ ಮಾಡಿದ್ದೀರಿ. ಈ ಭಾಗದ ಶಾಲಾ ಕೊಠಡಿ, ರಸ್ತೆಗಳ ಅಭಿವೃದ್ದಿ ಮಾಡಿಲ್ಲ. ನಾವು ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ರೂ. ಗಳ ಅಭಿವೃದ್ದಿ ಮಾಡಿದ್ದೇವೆ. ಈ ವರ್ಷ 5000 ಕೋಟಿ ಮಿಸಲಿಟ್ಟಿದ್ದೇವೆ. ಪ್ರತಿ ಕ್ಷೇತ್ರದಲ್ಲಿ 100 ಕೋಟಿ ಅನುದಾನ ನೀಡಲಾಗುತ್ತಿದೆ. ಈ ಭಾಗದಲ್ಲಿ 24 ಪಿಎಚ್ ಸಿ ಸೆಂಟರ್ ಆರಂಭಿಸುತ್ತಿದ್ದೇವೆ. ನಾವು ದೇಶದ ಪ್ರತಿಯೊಂದು ಮನೆಗೆ ನೀರು ಕೊಡುವುದಾಗಿ ಪ್ರಧಾನಿ ಮೊದಿಯವರು ಹೇಳಿದ್ದರು. ನಾವು ರಾಜ್ಯದಲ್ಲಿ 40 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುತ್ತೇವೆ. 72 ವರ್ಷದಲ್ಲಿ ಕಾಂಗ್ರೆಸ್ 25 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದ್ದರು. ನಾವು ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿದ್ದೇವೆ ಎಂದರು.
ದಲಿತರ ಅಭಿವೃದ್ಧಿ ಮಾಡಲಿಲ್ಲ
ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಅವರು ನಾವೇ ದೀನ ದಲಿತರ ರಕ್ಷಣೆ ಮಾಡುವುದಾಗಿ ಹೇಳುತ್ತಾರೆ. ಅವರು ದಲಿತರ ಹೆಸರಿನಲ್ಲಿ ಅವರೇ ಅಭಿವೃದ್ಧಿಯಾದರು. ಆದರೆ, ದಲಿತರ ಅಭಿವೃದ್ಧಿ ಮಾಡಲಿಲ್ಲ.
ನಾನು ಮೀಸಲಾತಿ ಹೆಚ್ಚಳ ಮಾಡಲು ಮುಂದಾದರೆ ಜೇನು ಗೂಡಿಗೆ ಕೈ ಹಾಕಬೇಡಿ ಎಂದರು. ನಾನು ಜೇನು ಕಡಿದರೂ ಆ ಸಮುದಾಯಕ್ಕೆ ಜೇನು ಸಿಹಿ ಕೊಡುತ್ತೇನೆ ಎಂದು ಮೀಸಲಾತಿ ಹೆಚ್ಚಳ ಮಾಡಿದೆ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಪಡಿಸುವುದಾಗಿ ಹೇಳುತ್ತಾರೆ. ಮೀಸಲಾತಿ ಪರವೋ, ವಿರೋಧವೋ ಎಂದು ಅವರು ಬಹಿರಂಗವಾಗಿ ಹೇಳಬೇಕು ಎಂದರು.
ಕಾಂಗ್ರೆಸ್ ಗೆ ಮತ ಹಾಕಿದರೆ, ಮೀಸಲಾತಿ ರದ್ದು
ಖರ್ಗೆಯವರು ಯಾಕೆ ಮೌನವಾಗಿದ್ದಾರೆ. ಕಾಂಗ್ರೆಸ್ ಗೆ ಮತ ಹಾಕಿದರೆ, ಮೀಸಲಾತಿ ರದ್ದಾಗುತ್ತದೆ. ಹೀಗಾಗಿ ಕಾಂಗ್ರೆಸ್ ಗೆ ಮತ ಹಾಕಬೇಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾಂಗ್ರೆಸ್ ಅಂಬೇಡ್ಕರ್ , ಬಸವಣ್ಣ ಅವರನ್ನು ಮರೆತಿದೆ
ನಾನು ಮೀನುಗಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿದ್ದೇನೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದೇವೆ.
ಕಾಂಗ್ರೆಸ್ ನವರು ಬಸವಣ್ಣ ಅಂಬೇಡ್ಕರ್ ಅವರನ್ನು ಮರೆತಿದ್ದಾರೆ. ಮಾಲಿಕಯ್ಯ ಗುತ್ತೆದಾರ ಅವರನ್ನು ಗೆಲ್ಲಿಸಿ ಅಪ್ಜಲಪುರದಲ್ಲಿ ಕಮಲ ಅರಳಿಸಬೇಕು. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಜನಪರ ಸರ್ಕಾರ ಬರುತ್ತದೆ ಎಂದು ಕರೆ ನೀಡಿದರು.


0 Comments