ಹಳೆ ಪಿಂಚಣಿ ವ್ಯವಸ್ತೆಯಿಂದ ಮುಂದಿನ ಪೀಳಿಗೆಯ ಭವಿಷ್ಯ ನಾಶವಾಗುತ್ತದೆ' ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರಿ ನೌಕರರ ವಿರೋಧಿ ಧೋರಣೆಯನ್ನು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ. ಕೃಷ್ಣ ಮೂರ್ತಿ ಖಂಡಿಸಿದ್ದಾರೆ.
ದೇಶದ ಮುಂದಿನ ಪೀಳಿಗೆ ನಿಜಕ್ಕೂ ಅಪಾಯ ಎದುರಿಸುತ್ತಿರುವುದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ದೊಡ್ಡ ಬೆರಳೆಣಿಕೆಯ ಉದ್ಯಮಿಗಳ 10 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಹೆಸರಿನಲ್ಲಿ ಮನ್ನಾ ಮಾಡಿರುವುದರಿಂದ ಎಂದು ಅವರು ಟೀಕಿಸಿದ್ದಾರೆ.
ದೇಶದ ಬಹುತೇಕ ಕೆಳಹಂತದ ಸರಕಾರಿ ನೌಕರರು ಯಾವುದೇ ಜೀವನ ಭದ್ರತೆ ಇಲ್ಲದೆ ನಿವೃತ್ತರಾಗಿ ಅತಂತ್ರರಾಗುವ ಅಪಾಯ ಎದುರಿಸುತ್ತಿದ್ದಾರೆ.
ಇಂಥ ಸಂದರ್ಭದಲ್ಲಿ ನಿವೃತ್ತ ನೌಕರರ ಸಮಸ್ಯೆಯನ್ನು ಮಾನವೀಯ ದೃಷ್ಟಿಯಿಂದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗ ಬೇಕಿತ್ತು. ಆದರೆ ನೌಕರರ ಹಳೆ ಪಿಂಚಣಿ ವ್ಯವಸ್ಥೆಗೆ ಸಂಪೂರ್ಣ ವಿರೋಧ ವ್ಯಕ್ತ ಪಡಿಸಿರುವುದು ಅತ್ಯಂತ ಅಮಾನವೀಯ ಮತ್ತು ಖಂಡನೀಯ ಎಂದಿದ್ದಾರೆ .
ದೇಶದ ಮುಂದಿನ ಪೀಳಿಗೆ ನಿಜಕ್ಕೂ ಅಪಾಯ ಎದುರಿಸುತ್ತಿರವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ನೋಟ್ ಬ್ಯಾನ್, ಅವೈಜ್ಞಾನಿಕ ಜೀ ಎಸ್ ಟಿ, ಅವೈಜ್ಞಾನಿಕ ಲಾಕ್ ಡೌನ್, ಮಿತಿ ಮೀರಿದ 40% ಭ್ರಷ್ಟಾಚಾರ ಹಾಗೂ ದೇಶದ ಸರಕಾರಿ ಆಸ್ತಿ ಮತ್ತು ಸಂಪತ್ತನ್ನು ನಗಧೀಕರಣದ (monitisation) ಹೆಸರಿನಲ್ಲಿ ಶ್ರೀಮಂತ ಉದ್ಯಮಿಗಳಿಗೆ ಮಾರಾಟ ಮಾಡುತ್ತಿರುವುದು ಹಾಗೂ ಮಿತಿ ಮೀರಿದ ಖಾಸಗೀಕರಣದಿಂದ ಎಂದು ಕಿಡಿ ಕಾರಿದ್ದಾರೆ.
ದೇಶದ ಮುಂದಿನ ಪೀಳಿಗೆ ಬಗ್ಗೆ ನಿಜಕ್ಕೂ ಕಳಕಳಿ ಇದ್ದರೆ ಖಾಸಗೀಕರಣ ನಿಲ್ಲಿಸಿ, ಜೀವನ ಭದ್ರತೆ ಇರುವ ಖಾಯಂ ಉದ್ಯೋಗಗಳನ್ನು ಸೃಷ್ಟಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದ್ದಾರೆ.
ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ದೇಶ ಬಿಟ್ಟಿರುವ ಉದ್ಯಮಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡು , ಅವರಿಂದ ಲೂಟಿಯಾಗಿರುವ ಹಣ ವಸೂಲಿ ಮಾಡಲಿ.
ಹಾಗೆಯೇ ಸ್ವಿಸ್ ಬ್ಯಾಂಕಿನಲ್ಲಿ ಇರುವ ಕಪ್ಪು ಹಣ ವಾಪಸ್ ತಂದು ದೇಶದಲ್ಲಿ ಹೊಸ ಉದ್ಯಮ ಸ್ಥಾಪಿಸಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷಿ ಮಾಡಲಿ ಎಂದು ಬಿಎಸ್ಪಿ ಆಗ್ರಹಿಸುತ್ತದೆ ಎಂದಿದ್ದಾರೆ.
ಹಾಗೆಯೇ ತಮ್ಮ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಕ್ಷಮೆ ಕೇಳಬೇಕು ಹಾಗೂ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ವ್ಯವಸ್ತೆಯನ್ನು ಮರು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಬಹುಜನ ಸಮಾಜ ಪಾರ್ಟಿ ಆಗ್ರಹಿಸುತ್ತದೆ ಎಂದಿದ್ದಾರೆ

0 Comments