ಬೆಂಗಳೂರು : ನಗರದ ವಿದ್ಯಾರಣ್ಯಪುರ ಅಂಚೆಯ ತಿಂಡ್ಲು ಗ್ರಾಮದಲ್ಲಿ ಅಭಿಮಾನಿಗಳ ಆರಾಧ್ಯ ಧೈವ 'ಅಪ್ಪು' ರವರ ಮೊದಲನೇ ವರ್ಷದ ಪುಣ್ಯ ಸ್ಮರಣೆಯ ಈ ಸಂದರ್ಭದಲ್ಲಿ ಅಕ್ಟೋಬರ್ 29 ರಿಂದ ನಾಲ್ಕು ದಿನಗಳ ವಿವಿಧ ರೀತಿಯ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ತಿಂಡ್ಲು ಬಾಯ್ಸ್ ಫೌಂಡೇಶನ್ (ರಿ) ಶನಿವಾರದಂದು ಡಾ. ಪುನೀತ್ ರಾಜಕುಮಾರ್ ರವರ ಹೆಸರಿನಲ್ಲಿ ಸುಮಾರು ಮೂರು ಸಾವಿರ ಜನರಿಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಿದ್ದರು. ಭಾನುವಾರದಂದು ಇಡೀ ದಿನ ಡಾ. ಪುನೀತ್ ರವರ ಸ್ಮರಣಾರ್ಥವಾಗಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು.
ಶಿಬಿರದಲ್ಲಿ ಹೃದ್ರೋಗ, ಕಣ್ಣು, ದಂತ ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆಯ ಜೊತೆಗೆ ಸ್ವಯಂಪ್ರೇರಿತ ಸಾರ್ವಜನಿಕ ನೇತ್ರದಾನ ಅಭಿಯಾನ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸಿ.ಆನಂದ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಕಾರ್ಯದರ್ಶಿ ಕೆ.ದಿಲೀಪ್, ಖಜಾಂಚಿ ಪ್ರಕಾಶ್ ವಿ., ಪದಾಧಿಕಾರಿಗಳಾದ ಮೂರ್ತಿ, ವಿನಯ್ ರೋಟರಿ ಕ್ಲಬ್ ಸಹಕಾರನಗರದ ಅಧ್ಯಕ್ಷ ಇ.ಎಲ್.ನಾರಾಯಣ ರೆಡ್ಡಿ ಹಾಗೂ ತಂಡದ ಸದಸ್ಯರುಗಳ ಸಹಕಾರದೊಂದಿಗೆ, ಹೆಬ್ಬಾಳ ಮಣಿಪಾಲ ಆಸ್ಪತ್ರೆ, ನಾರಾಯಣ ನೇತ್ರಾಲಯ, ಸಮೃದ್ಧಿ ಕಣ್ಣಿನ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಲಾಭ ಪಡೆಯುವ ಮೂಲಕ ಆರೋಗ್ಯ ಶಿಬಿರವನ್ನು ನಿರೀಕ್ಷೆಗೂ ಮೀರಿ ಯಶಸ್ವಿಗೊಳಿಸಿದರು.



0 Comments