ಬೆಂಗಳೂರು: ವಿದೇಶದಲ್ಲಿರುವ ಕನ್ನಡಿಗರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರನ್ನಾಗಿಸಲು ಹಾಗೂ ಪರಿಷತ್ತಿನ ಚಟುವಟಿಕೆಗಳನ್ನು ವಿದೇಶಗಳಲ್ಲಿ ಸ್ಥಾಪಿಸುವ ಹಿನ್ನೆಲೆಯಲ್ಲಿ ಇಂದು ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶ ಘಟಕಗಳ ಸಲಹಾ ಸಮಿತಿ ರಚಿಸುವ ಮೂಲಕ ಪರಿಷತ್ತು ಹೊಸ ಶಕೆಗೆ ನಾಂದಿ ಹಾಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹೊರದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸಲು ಪೂರ್ವಭಾವಿ ಸಭೆ ನಡೆಸಲಾಗಿತ್ತು. ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ೨೦ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಹೊಂದಿರುವ ಗಣ್ಯರು ಭಾಗವಹಿಸಿದ್ದರು.
೧೯೧೫ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಂದ ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ಪರಿಷತ್ತುನ್ನು ಜನ ಸಾಮಾನ್ಯರ ಪರಿಷತ್ತನ್ನಾಗಿಸುವ ಹಿನ್ನೆಲೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಧ್ಯೇಯೋದ್ದೇಶದೊಂದಿಗೆ ಮುನ್ನಡೆಯುತ್ತಿದೆ. ಪ್ರತಿಯೊಬ್ಬ ಕನ್ನಡಿಗನೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು ಜೊತೆಗೆ ಕೋಟಿ ಸದಸ್ಯರನ್ನೊಳಗೊಂಡ ಪರಿಷತ್ತು ಆಗಬೇಕೆಂಬ ಗುರಿಯೊಂದಿಗೆ ಪರಿಷತ್ತನ್ನು ನಾಡೋಜ ಮಹೇಶ ಜೋಶಿ ಮುನ್ನಡೆಸುತ್ತಿದ್ದಾರೆ.
ಸಭೆಯಲ್ಲಿ ವಿದೇಶದಲ್ಲಿ ಇರುವ ಕನ್ನಡಿಗರನ್ನು ಸೇರಿಸಿ ಕನಿಷ್ಠ ನೂರು ಸದಸ್ಯರನ್ನು ಇರುವಲ್ಲಿ ಒಂದು ಘಟಕವನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕಗಳ ಸಲಹಾ ಸಮಿತಿಯನ್ನು ರಚಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕಗಳ ಸಂಯೋಜನಾಧಿಕಾರಿಯಾಗಿ ಬೆಲ್ಜಿಯಂ ದೇಶದ ವ್ಯಾಪಾರ ಮತ್ತು ವಾಣಿಜ್ಯ ಆಯುಕ್ತರಾದ ಶ್ರೀ ಜಯಂತ್ ನಾಡಿಗೇರ್ ಅವರನ್ನು ನೇಮಿಸಲಾಗಿದೆ.
ಪರಿಷತ್ತಿನ ವಿದೇಶಿ ಘಟಕಗಳ ಸಂಯೋಜನಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ವಿವಿಧ ದೇಶಗಳ ರಾಯಭಾರಿಯಾಗಿ ನಿವೃತ್ತರಾದ ಶ್ರೀ ಪಾರ್ಥಸಾರಥಿಯವರು ಮಾತನಾಡಿ, ಹೊರದೇಶಗಳಲ್ಲಿ ಕನ್ನಡವನ್ನು ಅಭಿವೃದ್ಧಿ ಪಡಿಸಲು ಕನ್ನಡ ಸಾಹಿತ್ಯ ಪರಿಷತ್ತು ಮುಂದೆ ಬಂದಿರುವುದು ತುಂಬಾ ಸಂತೋಷ. ಹೊರದೇಶದಲ್ಲಿರುವ ಕನ್ನಡಿಗರು ಪರಿಷತ್ತಿನಿಂದ ಏನು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು ತಿಳಿದುಕೊಂಡು ಮುಂದಿನ ಯೋಜನೆ ರೂಪಿಸಬೇಕು ಎಂದರು.
ಅನಿವಾಸಿ ಭಾರತೀಯರ ಸಮೀತಿಯ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಆರತಿ ಕೃಷ್ಣ ಮಾತನಾಡಿ, ಪ್ರಪಂಚದಲ್ಲಿ ಇರುವ ಎಲ್ಲಾ ಕನ್ನಡಿಗರು ಒಂದಾಗಿ ಪರಿಷತ್ತಿನ ವ್ಯಾಪ್ತಿಯಲ್ಲಿ ಬರುವುದಕ್ಕೆ ವಿಶೇಷ ಎನ್ ಆರ್ ಐ ಪಾಲಿಸಿಯನ್ನು ಜಾರಿಗೆ ತರಬೇಕು ಎಂದರು.
ರಿಲೆವೆನ್ಸ್ ಲ್ಯಾಬ್ನ ಉಪಾಧ್ಯಕ್ಷ ಶ್ರೀ ರವೀಂದ್ರ ವರ್ಣ ಮಾತನಾಡಿ, ಫ್ರಾಂಕ್ಫರ್ಟ್, ಮಲೇಶಿಯಾ, ಇಂಡೋನೇಶಿಯಾ ಸೇರಿದಂತೆ ಕೆಲವು ದೇಶಗಳಲ್ಲಿ ಹೆಚ್ಚು ಕನ್ನಡಿಗರಿದ್ದಾರೆ. ಅಲ್ಲಿಯ ಕೆಲವರು ಕನ್ನಡ ಕಲಿತು ನಿರರ್ಗಳವಾಗಿ ಕನ್ನಡ ಮಾತನಾಡುತ್ತಾರೆ. ಒಂದು ವರ್ಷದಿಂದ ಎಷ್ಟು ಜನ ಕನ್ನಡಿಗರು ಹೊರ ದೇಶಗಳಿಗೆ ಹೋಗಿರುತ್ತಾರೆಂದು ಅರಿತುಕೊಳ್ಳುವ ಪ್ರಯತ್ನವೂ ಆಗಕಿದೆ ಎಂದು ಸಲಹೆ ನೀಡಿದರು.
ಇಂಡೊ-ಪೋರ್ಚುಗಲ್ ಸಾಹಿತ್ಯ ಪ್ರತಿಷ್ಠಾನದ ನಿರ್ದೇಶಕ ಡಾ. ಅರವಿಂದ ಯಾಳಗಿ ಮಾತನಾಡಿ, ವಿಶ್ವದಲ್ಲಿರುವ ಎಲ್ಲಾ ಕನ್ನಡಿಗರನ್ನು ಒಂದಾಗಿಸಬೇಕು. ಕನ್ನಡದ ಸಂಸ್ಕೃತಿಯನ್ನು ಎಲ್ಲೆಡೆ ಹರಡಬೇಕಿದೆ. ಕನ್ನಡ ಭಾಷೆ ನಮ್ಮ ಸಂಸ್ಕೃತಿಯ ಕುರಿತು ಅನೇಕ ದಾಖಲೆಗಳು ವಿದೇಶಗಳಲ್ಲಿ ಇವೆ. ಅವುಗಳ ಮಹತ್ವ ನಮ್ಮ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಭಾರತ ದೇಶದ ಮಾಜಿ ರಾಯಭಾರಿ ಶ್ರೀ ಬಿ.ವಿ. ಕುಮಾರ್ ಮಾತನಾಡಿ, ವಿದೇಶಿಗಳಲ್ಲಿ ಕನ್ನಡಿಗರು ತಾವಿರುವ ಭಾಗದಲ್ಲಿ ಜಾತಿವಾರು ಸಂಘಟನೆಯನ್ನು ಮಾಡಿಕೊಂಡಿದ್ದಾರೆ. ಪ್ರತಿಯೊಬ್ಬ ವಿದೇಶಿ ಕನ್ನಡಿಗನನ್ನು ಒಂದು ಸೂರಿನಡಿಯಲ್ಲಿ ತರುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕು ಎಂದರು.
ಸಭೆಯಲ್ಲಿ ಇಕ್ಯೂಬ್ ಅಡ್ವೈಸರ್ ಶ್ರೀ ಹಾ.ವಿ.ಹರೀಶ್, ಸೋಹಮ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸಂಜೀತ್ ಶೆಟ್ಟಿ, ಅನಿವಾಸಿ ಭಾರತೀಯರ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಲಕ್ಮ್ಮಮ್ಮ ಪಿ., ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಶ್ರೀ ಬಿ.ಎಂ. ಪಟೇಲ್ಪಾಂಡು, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಸೇರಿದಂತೆ ಇತರ ಗಣ್ಯರು ಸಭೆಯಲ್ಲಿ ಭಾಗವಹಿಸಿದ್ದರು.
0 Comments