ಬಳ್ಳಾರಿ(ಕಂಪ್ಲಿ) ಜು.05 : ನೂತನ ತಾಲ್ಲೂಕು ಕೇಂದ್ರವಾಗಿ ನಾಲ್ಕು ವರ್ಷಗಳು ಗತಿಸಿದರೂ ಸಹಿತ ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿರುವುದು ಒಂದೆಡೆಯಾದರೆ ರೈತ ಸಂಪರ್ಕ ಕೇಂದ್ರಕ್ಕಾಗಿ ಸುಸಜ್ಜಿತ ಕಟ್ಟಡವಿದ್ದರೂ ಉದ್ಘಾಟನಾ ಭಾಗ್ಯವಿಲ್ಲದೆ ಬಾಡಿಗೆ ಕಟ್ಟಡದಲ್ಲಿಯೇ ರೈತ ಸಂಪರ್ಕ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಪಟ್ಟಣದ ಎಪಿಎಂಸಿ ಆವರಣದಲ್ಲಿ ಸುಮಾರು 50 ಲಕ್ಷರೂ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರವನ್ನು ನಿರ್ಮಿಸಲಾಗಿದೆ.ಕಟ್ಟಡ ನಿರ್ಮಿಸಿ ವರ್ಷಗಳೇ ಕಳೆದಿದ್ದರೂ ಸಹಿತ ಉದ್ಘಾಟನೆ ಭಾಗ್ಯವಿಲ್ಲದೆ ಇದೇ ಎಪಿಎಂಸಿ ಆವರಣದಲ್ಲಿನ ಖಾಸಗಿಯವರ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಇಬ್ಬರು ಕೃಷಿ ಅಧಿಕಾರಿಗಳಿರಬೇಕು, ಒಬ್ಬರಿದ್ದಾರೆ,ಸಹಾಯಕ ಕೃಷಿ ಅಧಿಕಾರಿಗಳ ಮೂರು ಹುದ್ದೆಗಳು ಖಾಲಿ ಇವೆ.
ದಾಸ್ತಾನು ನಿರ್ವಾಹಕ ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ತಲಾ ಒಂದೊಂದು ಹುದ್ದೆಗಳಿಗೆ ಹೊರ ಗುತ್ತಿಗೆ ಪಡೆಯಲಾಗಿದೆ. ಈ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿ ಸುಮಾರು 26 ಗ್ರಾಮಗಳನ್ನು ಒಳಗೊಂಡಿದ್ದು, 35,235 ಸಾವಿರ ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಮತ್ತು 26,918 ಹೆಕ್ಟೇರ್ ಸಾಗುವಳಿ ಕ್ಷೇತ್ರವನ್ನು ಹೊಂದಿದೆ,ಇತ್ತೀಚೆಗೆ ನೂತನ ತಾಲ್ಲೂಕು ಕೇಂದ್ರವಾದ ಮೇಲೆ ಬಳ್ಳಾರಿ ತಾಲ್ಲೂಕಿನ ಎಮ್ಮಿಗನೂರು ಮತ್ತು ನೆಲ್ಲುಡಿ ಗ್ರಾಮಗಳು ಈ ವ್ಯಾಪ್ತಿಗೆ ಬರುವುದರಿಂದ ಇವುಗಳು ಸೇರಿದಂತೆ ಭೌಗೋಳಿಕ ಮತ್ತು ಸಾಗುವಳಿ ವಿಸ್ತೀರ್ಣ ಅಧಿಕವಾಗಿದ್ದು, ಇಷ್ಟೆಲ್ಲಾ ವಿಸ್ತೀರ್ಣ ಹೊಂದಿರುವ ಪ್ರದೇಶಕ್ಕೆ ಇರುವುದು ಮಾತ್ರ ಒಬ್ಬರೇ ಕೃಷಿ ಅಧಿಕಾರಿ. ಇವರೊಬ್ಬರೇ ತಾಲ್ಲೂಕಿನ ಕೃಷಿ ಚಟುವಟಿಕೆಗಳನ್ನು ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲದಂತಾಗಿದೆ. ಜೊತೆಗೆ ಕೇಂದ್ರಕ್ಕಾಗಿ ಸುಸಜ್ಜಿತ ಕಟ್ಟಡ ಸಿದ್ಧವಾಗಿದ್ದರೂ ಸಹಿತ ಸಣ್ಣ ಪ್ರಮಾಣದ ಖಾಸಗಿ ಗೋದಾಮಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಕಟ್ಟಡ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಉದ್ಘಾಟನೆಯಾಗುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ.

0 Comments