ಬಳ್ಳಾರಿ ಜುಲೈ 02. ಗೋವಾ ಚೇಂಬರ್ ಆಫ್ ಕಾಮರ್ಸ್ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಜಂಟಿ ಸಭೆಯು ದಿನಾಂಕ:29-06-2022 ಬುಧವಾರದಂದು ಪಣಜಿಯಲ್ಲಿನ ಗೋವಾ ಚೇಂಬರ್ ಆಫ್ ಕಾಮರ್ಸ್ನ ಸಭಾ ಭವನದಲ್ಲಿ ನಡೆಯಿತು. ಈ ಸಭೆಯ ವೇದಿಕೆಯ ಮೇಲೆ ಗೋವೆಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಡಾ. ಪ್ರಮೋದ ಸಾವಂತ, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿ. ಶ್ರೀನಿವಾಸ್ ರಾವ್, ಗೌರವ ಕಾರ್ಯದರ್ಶಿಗಳಾದ ಯಶ್ವಂತ್ರಾಜ್ ನಾಗಿರೆಡ್ಡಿ, ಗೋವೆಯ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರಾದ ರಾಲ್ಫ್ ಡಿಸೋಜ, ಡೈರೆಕ್ಟರ್ ಜನರಲ್ ಆದ ಸಂಜಯ ಅಮನ್ಕರ್ ಉಪಸ್ಥಿತರಿದ್ದರು. ಜಂಟಿ ಸಭೆಯು ಸಂಜಯ್ ಅಮನ್ಕರ್, ಡೈರೆಕ್ಟರ್ ಜನರಲ್ ಇವರ ಪ್ರಸ್ತಾವಿಕ ನುಡಿ ಮತ್ತು ಸ್ವಾಗತ ಭಾಷಣದೊಂದಿಗೆ ಆರಂಭವಾಯಿತು. ಡಾ. ಪ್ರಮೋದ್ ಸಾವಂತ್, ಗೋವೆಯ ಮಾನ್ಯ ಮುಖ್ಯಮಂತ್ರಿಗಳನ್ನು ಎರಡು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹೂಗುಚ್ಚ ನೀಡುವುದರ ಜೊತೆಗೆ ಸ್ವಾಗತಿಸಿದರು.
ಡಾ. ಪ್ರಮೋದ್ ಸಾವಂತ್, ಗೋವೆಯ ಮಾನ್ಯ ಮುಖ್ಯಮಂತ್ರಿಗಳು ಸಭೆಯನ್ನು ಉದ್ಘಾಟಿಸಿ ಮಾತನಾಡಿ “ಗೋವೆ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವ್ಯಾಪಾರ ವ್ಯವಹಾರ ಅಭಿವೃದ್ದಿಗಾಗಿ ನಡೆಸುತ್ತಿರುವ ಜಂಟಿ ಸಭೆ ನಿಜವಾಗಲು ಸಂತಸ ತಂದಿದೆ. ಎರಡೂ ಸಂಸ್ಥೆಗಳು ಇಂದು ತೆಗೆದುಕೊಳ್ಳುವ ನಿರ್ಧಾರಗಳನ್ನು ನನ್ನ ಗಮನಕ್ಕೆ ತಂದರೆ ನಮ್ಮ ಸರಕಾರದಿಂದ ಸಾಧ್ಯವಾಗುವ ಎಲ್ಲಾ ಸಹಕಾರವನ್ನು ನೀಡುತ್ತೇನೆ ಎಂದು ನುಡಿಯುತ್ತಾ, ಸೆಪ್ಟೆಂಬರ್ 30ನೇ ತಾರೀಕು ಪಣಜಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದು ಇದರ ಮುಖ್ಯ ರೂವಾರಿಗಳಾಗಿ ಗೋವಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರು ನಿರ್ವಹಿಸುತ್ತಾರೆ ಈ ಹೂಡಿಕೆ ಸಮಾವೇಶದಲ್ಲಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗೂ ಕೂಡ ಆಹ್ವಾನವಿರುತ್ತದೆ ತಾವೆಲ್ಲರೂ ಬಂದು ಎರಡು ಸಂಸ್ಥೆಗಳ ನಡುವೆ ಹೂಡಿಕೆಗಳ ಲಭ್ಯತೆಯನ್ನು ತಿಳಿದುಕೊಂಡು ವ್ಯಾಪಾರ ವ್ಯವಹಾರ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾಗಿ ಸೂಚಿಸುತ್ತಾ ಸಭೆಗೆ ಶುಭ ಹಾರೈಸಿದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವತಿಯಿಂದ ಮಾನ್ಯ ಗೋವೆಯ ಮುಖ್ಯಮಂತ್ರಿಗಳನ್ನು ಅಧ್ಯಕ್ಷರಾದ ಸಿ. ಶ್ರೀನಿವಾಸ ರಾವ್ ಮತ್ತು ಯಶ್ವಂತ್ರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿಗಳು ಶಾಲು ಹೊದಿಸಿ, ಮಾಲೆ ಹಾಕಿ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು. ಗೋವಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ರಾಲ್ಫ ಡಿಸೋಜರವರು ಮಾತನಾಡಿ, ಬಳ್ಳಾರಿ ಮತ್ತು ಗೋವಾ ಮಧ್ಯೆ ಗಣಿ, ಟೆಕ್ಸ್ ಟೈಲ್ಸ್, ಪ್ರವಾಸೋದ್ಯಮ ಹೀಗೆ ಹತ್ತು ಹಲವು ವ್ಯಾಪಾರದ ಮಜಲುಗಳಲ್ಲಿ ವ್ಯಾಪಾರಗಳಿಗೆ ಸಂಬಂಧವನ್ನು ಹೊಂದಿದೆ. ಕೇವಲ ಇಂದಿನ ಈ ಸಭೆಗೆ ಮಾತ್ರ ನಮ್ಮ ಮಾತುಕತೆ ಸೀಮಿತವಾಗದೆ ಮುಂಬರುವ ದಿನಗಳಲ್ಲಿ ಎರಡೂ ಸಂಸ್ಥೆಗಳ ನಿರಂತರ ಮಾತುಕತೆ ಮತ್ತು ಭೇಟಿಗಳ ಮೂಲಕ ವ್ಯಾಪಾರ ವ್ಯವಹಾರ ವೃದ್ದಿಯಾಗಬೇಕೆಂಬುದು ನಮ್ಮ ಆಶಯ. ಎಂದು ತಿಳಿಸಿ ಶುಭ ಕೋರುತ್ತಾ ತಮ್ಮ ಮಾತುಗಳಿಗೆ ಮುಕ್ತಾಯ ಹಾಡಿದರು.
ನಂತರ ಮಾತನಾಡಿದ ಬಳ್ಳಾರಿ ಜಿಲ್ಲಾ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಿ ಶ್ರೀನಿವಾಸ ರಾವ್ ಅವರು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಡೆದ ಬಂದ ದಾರಿಯ ಬಗ್ಗೆ ಸುಧೀರ್ಘ ಪರಿಚಯವನ್ನು ನೀಡಿದರು. ಮುಂದು ವರೆದು ಮಾತನಾಡಿದ ಶ್ರೀ. ಶ್ರೀನಿವಾಸ್ ರಾವ್ ಅವರು ಇತ್ತೀಚಿನ ಸುಪ್ರೀಂ ಕೋರ್ಟ್ ಆದೇಶದಂತೆ ಗಣಿ ಉದ್ಯಮವನ್ನು ಆರಂಭಿಸಲು ಅನುಮತಿ ನೀಡಿರುವುದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಹೈಗ್ರೇಡ್ ಕಬ್ಬಿಣದ ಅದಿರು ಹೇರಳವಾಗಿ ದೊರೆಯುವುದರಿಂದ ಸ್ಥಳೀಯವಾಗಿ ನಮ್ಮ ಕಾರ್ಖಾನೆಗಳಿಗೆ ಅವಶ್ಯಕವಿರುವ ಕಬ್ಬಿಣದ ಅದಿರನ್ನು ಬಳಿಸಿಕೊಂಡು ಲೋಗ್ರೇಡ್ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗುತ್ತದೆ, ಅಲ್ಲದೇ ನಮ್ಮಲ್ಲಿ ಅತ್ಯಂತ ಅವಶ್ಯಕವಿರುವ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಆವಕ ಸಮೃದ್ದಿಯಾಗಿದ್ದು ಒಂದು ಬಾರಿ ಗೋವಾ ಚೇಂಬರ್ ಆಫ್ ಕಾಮರ್ಸ್ನ ಸದಸ್ಯರು ಬಳ್ಳಾರಿಗೆ ಆಗಮಿಸಿ ನಮ್ಮಲ್ಲಿ ಲಭ್ಯ ವಿರುವ ಉತ್ಪನ್ನಗಳು ತಮಗೆ ಸರಿ ಅನಿಸಿದಲ್ಲಿ ಮುಂದಿನ ವ್ಯಾಪಾರ ವಹಿವಾಟಿಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನಮ್ಮ ಸಂಸ್ಥೆ ನಮ್ಮ ಸದಸ್ಯರೊಂದಿಗೆ ಸೇರಿಕೊಂಡು ಈಡೇರಿಸುತ್ತದೆ ಎಂದು ತಿಳಿಸಿದರು. ಈ ಕಾರಣಗಳಿಂದ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮತ್ತು ಗೋವಾ ಕಾಮರ್ಸ್ ಇಬ್ಬರೂ ಸೇರಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲೆ ಎಕ್ಸ್ಪೋರ್ಟ್ ಡ್ಯೂಟಿಯನ್ನು ಕಡಿಮೆ ಮಾಡುವ ಕಡೆಗೆ ಒತ್ತನ್ನು ನೀಡಿ ರಫ್ತಿಗೆ ಹೆಚ್ಚಿನ ಒಲವನ್ನು ತೋರಿಸುವ ಕಡೆ ಗಮನ ಹರಿಸಬೇಕಾಗಿದೆ ಎಂದು ನುಡಿದರು.
ನಂತರ ಡಾಕ್ಟರ್ ಡಿ ಎಲ್ ರಮೇಶ್ ಗೋಪಾಲ್ , ಮಾಜಿ ಅಧ್ಯಕ್ಷರು, ಇವರು ಪೋರ್ಟ್ಗಳ ಲಭ್ಯತೆ ಮತ್ತು ಅವುಗಳ ಸಮಸ್ಯೆಗಳ ನಿವಾರಣೆ ಕುರಿತು ಮಾತನಾಡಿದರು. ಪ್ರವಾಸೋದ್ಯಮದ ಕುರಿತಾಗಿ ಪೂಲಾ ವಿಕ್ರಂ ಅವರು ಮಾತನಾಡಿದರೆ ಟಿ ಶ್ರೀನಿವಾಸ ರಾವ್ ಸ್ಪಾಂಜ್ ಐರನ್ ಕುರಿತಾಗಿ ಮಾತನಾಡಿದರು. ಡಾಕ್ಟರ್ ಮರ್ಚೆಡ್ ಮಲ್ಲಿಕಾರ್ಜುನಗೌಡ ಅವರು ಹೋಟೆಲ್ ಮ್ಯಾನೇಜ್ಮೆಂಟ್ ಬಗ್ಗೆ ಸಂಕ್ಷಿಪ್ತ ವರದಿಯನ್ನು ಪ್ರಸ್ತಾಪಿಸಿದರು. ಇದೇ ವೇಳೆ ಬಳ್ಳಾರಿಯ ಜೀನ್ಸ್ ಮತ್ತು ಟೆಕ್ಸ್ಟೈಲ್ಸ್ ವಿಷಯವಾಗಿ ಲಕ್ಕಿ ಎಂ ಶಾ ಅವರು ಮಾತನಾಡಿದರು. ನಂತರ ಗೋವೆ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸದಸ್ಯರ ನಡುವೆ ಸೌಹಾರ್ದಯುತ ಸಂವಾದಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಗೋವೆ ಚೇಂಬರ್ ಆಫ್ ಕಾಮಸ್ರ್ನ ಡಾಕ್ಟರ್ ಜನಿಫರ್ ಲೂಯಿಸ್ ಸ್ಕಿಲ್ ದೆವಲಪ್ಮೆಂಟ್ ಗೆ ಸಹಕರಿಸುವುದಾಗಿ ತಮ್ಮ ಅಭಿಲಾμÉಯನ್ನು ವ್ಯಕ್ತಪಡಿಸಿದರು. ಇಂತಹ ಕೌಶಲ್ಯ ಅಭಿವೃದ್ದಿಗಾಗಿ ಎರಡು ಸಂಸ್ಥೆಗಳ ಸದಸ್ಯರು ಸಂಪನ್ಮೂಲ ವ್ಯಕ್ತಿಗಳ ಪರಿಚಯಿಸಿಕೊಂಡು ಜಂಟಿಯಾಗಿ ವ್ಯವಹರಿಸುವ ಒಪ್ಪಂದಕ್ಕೆ ಬಂದರು. ಅಲ್ಲದೇ ಇಂಟರ್ಸಿಪ್ಟ್ ಪೆÇ್ರೀಗ್ರಾಂ ಕುರಿತಾಗಿಯೂ ಎರಡು ಸಂಸ್ಥೆಗಳು ಕಾರ್ಯನಿರ್ವಹಣೆ ಮಾಡುವುದಾಗಿ ಗೋವೆ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ರಾಲ್ಫ್ ಡಿಸೋಜಾ ಅವರು ನುಡಿದರಲ್ಲದೇ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಕೌಶಲ್ಯಾಭಿವೃದ್ದಿ ಕೇಂದ್ರದಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ನೀಡಿದರು.
ಕರ್ನಾಟಕದ ರಸ್ತೆಯ ಬಗ್ಗೆ ಗೋವೆ ಸದಸ್ಯರು ಮಾತನಾಡಿ ಅನಮೋಲ್ ಮತ್ತು ರಾಮನಗರ ಮಧ್ಯದ ಕೇವಲ ಆರು ಕಿಲೋಮೀಟರ್ ರಸ್ತೆ ಹಾಳಾಗಿದ್ದು, ಈ ರಸ್ತೆಯನ್ನು ಸರಿಪಡಿಸುವ ಕಡೆ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಪ್ರಯತ್ನಿಸಬೇಕಾಗಿ ಕೋರಿದರು. ಸಿ. ಶ್ರೀನಿವಾಸ್ ರಾವ್ ಅಧ್ಯಕ್ಷರು ಮಾತನಾಡಿ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳು ಇದ್ದಲ್ಲಿ ಪತ್ರ ಮುಖೇನ ತಿಳಿಸಿದರೆ ನಾವು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ವೇದಿಕೆ ಮೇಲೆ ಉಪಸ್ಥಿತರಿದ್ದ ಯಶ್ವಂತ್ರಾಜ್ ನಾಗಿರೆಡ್ಡಿ, ಗೌರವ ಕಾರ್ಯದರ್ಶಿಗಳು ಮಾತನಾಡಿ, ಇಂದು ಎರಡೂ ಸಂಸ್ಥೆಗಳ ನಡುವೆ ಸಾಕಷ್ಟು ಫಲಪ್ರದ ಮಾತುಕತೆಗಳು ನಡೆದಿವೆ, ಈ ನಮ್ಮ ಚರ್ಚೆಯನ್ನು ಇಲ್ಲಗೆ ನಿಲ್ಲಿಸದೇ ಗೋವಾ ಚೇಂಬರ್ ಆಫ್ ಕಾಮರ್ಸ್ನ ಸದಸ್ಯರು ಬಳ್ಳಾರಿಗೆ ಆಗಮಿಸಿ ವಾಸ್ತವಾಂಶದ ಅಧ್ಯಯನ ಮಾಡಿ ವ್ಯಾವಹಾರಿಕ ಸಂಬಂಧಗಳಿಗೆ ನಾಂದಿ ಹಾಡಬೇಕೆಂದು ಕೋರಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಗೋವಾ ರಾಜ್ಯದ ಮುಖ್ಯಮಂತ್ರಿಗಳನ್ನು ಬಳ್ಳಾರಿಗೆ ಆಹ್ವಾನಿಸಿ ಈ ಶುಭ ಸಂದರ್ಭವನ್ನು ಡಾಕ್ಟರ್ ಪ್ರಮೋದ್ ಸಾವಂತ್ ಅವರು ಸಾಕ್ಷೀಕರಿಸಬೇಕಾಗಿ ಕೋರಿದರು. ಇದಕ್ಕೆ ಡಾಕ್ಟರ್ ಪ್ರಮೋದ ಸಾವಂತ್ ಅವರು ತಮ್ಮ ನಗುವಿನಿಂದಲೇ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಎರಡು ಸಂಸ್ಥೆಗಳ ಅಧ್ಯಕ್ಷರು ವ್ಯಾಪಾರ-ವ್ಯವಹಾರದ ವೃದ್ಧಿಗಾಗಿ ಒಡಂಬಡಿಕೆಗೆ ಸಹಿ ಹಾಕಿದರು. ನಂತರದಲ್ಲಿ ಗೋವಾ ಚೇಂಬರ್ ಆಫ್ ಕಾಮರ್ಸ್ ನ ಮಹಾನಿರ್ದೇಶಕರು ವಂದನೆಗಳನ್ನು ಸೂಚಿಸಿದರೊಂದಿಗೆ ಮುಖ್ಯಮಂತ್ರಿಗಳೊಂದಿಗಿನ ಸಭೆಗೆ ಮುಕ್ತಾಯ ಮಾಡಲಾಯಿತು.
ಒಟ್ಟಾರೆಯಾಗಿ ಈ ಸಭೆಯಲ್ಲಿ ಗೋವೆ ಮತ್ತು ಬಳ್ಳಾರಿ ಮಧ್ಯದಲ್ಲಿ ವ್ಯಾಪಾರಕ್ಕಾಗಿ ಸಹಮತ ಮೂಡಿ ಒಡಂಬಡಿಕೆಗೆ ಎರಡು ಸಂಸ್ಥೆಯ ಅಧ್ಯಕ್ಷರು ಸಹಿ ಹಾಕುವುದರೊಂದಿಗೆ ಜಂಟಿ ಸಭೆಯು ಮುಕ್ತಾಯವಾಯಿತು.
0 Comments