ಬಳ್ಳಾರಿ ಜೂ.30: ಮುಂಬೈ ಕೇಂದ್ರ ರೈಲ್ವೆ ವಲಯದ ಸೊಲ್ಲಾಪುರ ರೈಲ್ವೆ ಡಿವಿಜನ್ ವತಿಯಿಂದ ಸೊಲ್ಲಾಪುರ – ಗದಗ - ಸೊಲ್ಲಾಪುರ ಎಕ್ಸಪ್ರೆಸ್ ದಿನನಿತ್ಯದ ನೂತನ ರೈಲುನ್ನು ದಿನಾಂಕ: 15-07-2022 ರಿಂದ ಸೊಲ್ಲಾಪುರ ದಿಂದ ರೈಲ್ವೆ ಸಂಚಾರದ ಸೇವೆಯನ್ನು ಆರಂಭಿಸಲಿದೆ ಹಾಗೂ ದಿನಾಂಕ : 16-07-2022 ರಿಂದ ಗದಗ್ ನಿಂದ ಸೊಲ್ಲಾಪುರಕ್ಕೆ ರೈಲಿನ ಸೇವೆಯನ್ನು ನೀಡಲಿದೆ. ಈ ರೈಲಿನಲ್ಲಿ ಒಟ್ಟು 12 ಬೊಗಿಗಳಿದ್ದು 10 ಸಾಮಾನ್ಯದರ್ಜೆ ಬೋಗಿಗಳು ಹಾಗೂ 2 ಸ್ಲೀಪರ್ ಬೋಗಿಗಳು ಆಗಿರುತ್ತವೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೈಲು ಸಂಖ್ಯೆ 11305 ಪ್ರತಿನಿತ್ಯ ಉದಯ 11-50 ಕ್ಕೆ ಸೊಲ್ಲಾಪುರದಿಂದ ಹೊರಟು ಬಿಜಾಪುರ - ಬಾಗಲಕೋಟೆ - ಬಾದಮಿ ಮಾರ್ಗವಾಗಿ ಸಂಚರಿಸಿ ಸಂಜೆ 4.55 ಕ್ಕೆ ಗದಗ್ ತಲುಪಿ, ಅಂದು ರಾತ್ರಿ (ಮರುದಿನ ನಸುಕಿನಲ್ಲಿ) 1.30 ಕ್ಕೆ ಗದಗ್ ನಿಂದ ಪ್ರಯಾಣ ಆರಂಂಭಿಸಿ ಉದಯ 7.34 ಕ್ಕೆ ಬಿಜಾಪುರ ತಲುಪಿ, 10.15 ಕ್ಕೆ ಸೋಲ್ಲಾಪುರ ತಲುಪಲಿದೆ. ಎಂದು ರೈಲ್ವೆ ಇಲಾಖೆಯ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ. ಸೊಲ್ಲಾಪುರದಿಂದ ಗದಗ್ ಗೆ ಆಗಮಿಸುವ ಈ ರೈಲು ಸಂಜೆ 5 ಗಂಟೆಯಿಂದ ರಾತ್ರಿ 1.30ರ ವರೆಗೆ ಒಟ್ಟು 8 ಗಂಟೆ 30 ನಿಮಿಷಗಳ ಕಾಲ ಗದಗ್ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಅಗಲಿದೆ. ಗದಗ್ ನಿಂದ ಈ ರೈಲಿನ ಸಂಚಾರವನ್ನು ಬಳ್ಳಾರಿಯವರೆಗೆ ವಿಸ್ತರಿಸಲು ಸಾಕಷ್ಟು ಸಮಯವಿದೆ. ಗದಗ್ ನಿಂದ ಬಳ್ಳಾರಿಗೆ ಕೇವಲ 3 ಗಂಟೆಯ ಪ್ರಯಾಣದ ಅವಧಿಯಾಗಿರುತ್ತದೆ. ಸಂಜೆ 5 ಗಂಟೆಗೆ ಗದಗ್ ನಿಂದ ಹೊರಡುವ ಈ ರೈಲು ರಾತ್ರಿ 8 ಗಂಟೆಗೆ ಬಳ್ಳಾರಿ ತಲುಪುತ್ತದೆ. 8 ರಿಂದ 10 ಗಂಟೆಯ ಅವಧಿಯಲ್ಲಿ ಈ ರೈಲು ಬಳ್ಳಾರಿ ರೈಲ್ವೆ ನಿಲ್ದಾಣದ 3 ನೇ ಪ್ಲಾಟ್ಫಾರಂ ಅಥವಾ 1 ಎ ನಿಲ್ದಾಣದಲ್ಲಿ ನಿಲುಗಡೆಯಾಗಿ ಹೊರಗುತ್ತಿಗೆಯ ಆದಾರದಲ್ಲಿ ರೈಲಿನ ಬೋಗಿಗಳನ್ನು ಸ್ವಚ್ಛಗೊಳಿಸಿ ರಾತ್ರಿ 10 ಗಂಟೆಗೆ ಬಳ್ಳಾರಿಯಿಂದ ಈ ರೈಲನ್ನು ಆರಂಭಿಸಬಹುದಾಗಿದೆ. ಇದರಿಂದಾಗಿ ಬಳ್ಳಾರಿ - ಹೊಸಪೇಟೆ – ಕೊಪ್ಪಳ ಜಿಲ್ಲೆಗಳ ಜನತೆ ಬಾದಾಮಿ, ಬಾಗಲಕೋಟೆ, ಬಿಜಾಪುರ, ಸೊಲ್ಲಾಪುರಕ್ಕೆ ಹೋಗಿಬರಲು ನೇರ ರೈಲಿನ ಸೌಲಭ್ಯ ದೊರೆಯುತ್ತ್ತದೆ. ಕಾರಣ ಈ ರೈಲಿನ ಸೇವೆಯನ್ನು ಬಳ್ಳಾರಿಯವರೆಗೆ ವಿಸ್ತರಿಸಬೇಕೆಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ರೈಲ್ವೆ ಇಲಾಖೆಯನ್ನು ಒತ್ತಾಯಿಸುತ್ತದೆ. ಸೊಲ್ಲಾಪುರ – ಗದಗ್ ರೈಲಿನ ಸೇವೆಯನ್ನು ಬಳ್ಳಾರಿಯವರೆಗೆ ವಿಸ್ತರಿಸುವ ಬಗ್ಗೆ ಬಳ್ಳಾರಿಯ ಸಂಸದ ಶ್ರೀ ವೈ ದೇವೇಂದ್ರಪ್ಪ, ಕೊಪ್ಪಳ ಸಂಸದ ಕರಡಿಸಂಗಣ್ಣ, ಸೊಲ್ಲಾಪುರ ಸಂಸದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇವರನ್ನು ಹಾಗೂ ಹುಬ್ಬಳ್ಳಿ ನೈರುತ್ಯ ರೈಲ್ವೆ ಅಧಿಕಾರಿಗಳನ್ನು ಮತ್ತು ಮುಂಬೈ ಕೇಂದ್ರ ರೈಲ್ವೆ ವಲಯ ಮತ್ತು ಸೊಲ್ಲಾಪುರ ರೈಲ್ವೆ ವಿಭಾಗದ ಅಧಿಕಾರಿಗಳನ್ನು ಈ ವಾರದಲ್ಲಿ ರೈಲ್ವೆ ಕ್ರಿಯಾ ಸಮಿತಿ ನಿಯೋಗ ಬೆಟಿ ಮಾಡಿ ಮನವಿ ಅರ್ಪಿಸಿ ಸೊಲ್ಲಾಪುರ ಗದಗ್ ಎಕ್ಸಪ್ರೆಸ್ ರೈಲಿನ ಸೇವೆಯನ್ನು ಬಳ್ಳಾರಿಯವರೆಗೆ ವಿಸ್ತರಿಸಲು ಒತ್ತಾಯಿಸಲಾಯಿತು.

0 Comments