ಪೊಲೀಸರು ಅನಾವಶ್ಯಕವಾಗಿ ವಾಹನ ಸವಾರರನ್ನು ತಡೆದು ತೊಂದರೆ ನೀಡುವುದನ್ನು ಖಂಡಿಸಿ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಬರೆದಿದ್ದ ಪತ್ರಕ್ಕೆ ಪೊಲೀಸರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮೋಹನ್ ದಾಸರಿ, “ಪೃಥ್ವಿ ರೆಡ್ಡಿಯವರು ಡಿಜಿಪಿ ಹಾಗೂ ಐಜಿಪಿಯವರಿಗೆ ಪತ್ರ ಬರೆದಿದ್ದರು. ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡುಬಂದರೆ ಮಾತ್ರ ಅಡ್ಡಗಟ್ಟಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಆಗ್ರಹಿಸಲಾಗಿತ್ತು. ಇದಕ್ಕೆ ಸಂಚಾರ ವಿಭಾಗದ ಪೊಲೀಸರಿಂದ ಪೃಥ್ವಿ ರೆಡ್ಡಿಯವರಿಗೆ ಪ್ರತಿಕ್ರಿಯೆ ಬಂದಿದ್ದು, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಮಾತ್ರ ವಾಹನಗಳನ್ನು ತಡೆದು ದಾಖಲಾತಿ ಪರಿಶೀಲನೆ ಮಾಡುವುದಾಗಿ ತಿಳಿಸಿರುತ್ತಾರೆ” ಎಂದು ಹೇಳಿದರು.
“ಪೊಲೀಸರು ವಿನಾಕಾರಣ ವಾಹನಗಳನ್ನು ಅಡ್ಡಗಟ್ಟಿ, ದಾಖಲಾತಿಗಳ ಪರಿಶೀಲನೆ ಮಾಡುವುದು ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿತ್ತು. ಎಲ್ಲ ದಾಖಲಾತಿಗಳು ಸರಿಯಾಗಿದ್ದರೂ ಪೊಲೀಸರ ಬಳಿ ಕೆಲ ಸಮಯ ವ್ಯರ್ಥವಾಗುತ್ತಿತ್ತು. ಈಗ ಪೊಲೀಸರು ಲಿಖಿತ ರೂಪದಲ್ಲಿ ಕಾನೂನಿನ ಮಾಹಿತಿ ನೀಡಿರುವುದರಿಂದ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.ಇದಲ್ಲದೆ ರಾಜ್ಯದ ಜನತೆ ಸುಖಾಸುಮ್ಮನೆ ಅಡ್ಡಗಟ್ಟಿ ಹಿಡಿಯುವ ಸಂಚಾರಿ ಪೊಲೀಸರಿಗೆ ಈ ಪತ್ರವನ್ನು ತೋರಿಸಿ ಕಿವಿಮಾತು ಹೇಳಬಹುದು. ಉಲ್ಲಂಘಿಸುವ ಪೊಲೀಸರ ಮೇಲೆ ಇಲಾಖಾ ತನಿಖೆಗೂ ಸಹ ರಾಜ್ಯದ ಜನತೆ ಕೇಳಬಹುದು. ಆಮ್ ಆದ್ಮಿ ಪಾರ್ಟಿಯು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಸ್ವಭಾವವನ್ನು ಹೊಂದಿದೆ. ಪ್ರಸ್ತುತ ರಾಜಕೀಯದಲ್ಲಿ ಆಮ್ ಆದ್ಮಿ ಪಾರ್ಟಿಯೊಂದೇ ಜನಸಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ” ಎಂದು ಮೋಹನ್ ದಾಸರಿ ಹೇಳಿದರು.

0 Comments