ಬೆಂಗಳೂರು, ಜೂನ್ 13 ( ಕರ್ನಾಟಕ ವಾರ್ತೆ ) : ಬೆಂಗಳೂರಿನ ಕನಕಪುರ ರಸ್ತೆಯ ಸಮೀಪದಲ್ಲಿರುವ ವಸಂತಪುರದ ವೈಕುಂಠ ಬೆಟ್ಟದಲ್ಲಿ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ ( ಇಸ್ಕಾನ್ ) ನೂತನವಾಗಿ ನಿರ್ಮಿಸಿರುವ ರಾಜಾಧಿರಾಜ ಶ್ರೀ ಗೋವಿಂದ ದೇವಾಲಯವನ್ನು ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಜೂನ್ 14 ರಂದು ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯ ಡಿ. ಕೆ. ಸುರೇಶ್, ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಸದಸ್ಯ ಎಂ. ಕೃಷ್ಣಪ್ಪ ಅವರೂ ಸೇರಿದಂತೆ ಗಣ್ಯಾತಿಗಣ್ಯರು ಈ ವಿಶೇಷ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶಿಲಾ ಕೆತ್ತನೆಯಿಂದ ಕೂಡಿದ ದೇವಾಲಯದ ಈ ಪಾರಂಪರಿಕ ವಿಗ್ರಹವು ತಿರುಮಲದ ಶ್ರೀ ವೆಂಕಟೇಶ್ವರ ದೇವಾಲಯದ ಮೂರ್ತಿಯನ್ನು ಹೋಲುತ್ತದೆ. ಅಳತೆ, ಶಿಲಾ ಕೆತ್ತನೆ ಹಾಗೂ ಸೌಂದರ್ಯ ಎಲ್ಲವೂ ಒಂದೇ ರೀತಿಯೇ ಕಾಣುತ್ತದೆ. ಶ್ರೀ ಶ್ರೀನಿವಾಸ ಸ್ವಾಮಿಯ ಎತ್ತರವೂ ಕೂಡಾ ಒಂದೇ ಇದೆ. ಈ ಹಿನ್ನೆಲೆಯಲ್ಲಿ ಈ ದೇವರ ದೇವರನ್ನು ರಾಜಾಧಿರಾಜ ಶ್ರೀ ಗೋವಿಂದ ಎಂದು ಕರೆಯಲಾಗುತ್ತದೆ.
ಈ ದೇವಾಲಯದಲ್ಲಿ ಮಕ್ಕಳಿಗೆ, ಯುವಕರಿಗೆ ಹಾಗೂ ಕುಟುಂಬಗಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣ ಒದಗಿಸುವ ಸೌಲಭ್ಯಗಳಿವೆ. ರಾಜಾಧಿರಾಜ ಶ್ರೀ ಗೋವಿಂದ ರಾಜ ಸ್ವಾಮಿ ಮತ್ತು ಇತರೆ ದೇವರುಗಳ ಸುಗಮ ದರ್ಶನ ಪಡೆಯುವ ಸಲುವಾಗಿ ಸಾಲಾಗಿ ತೆರಳಲು ವಿಶಾಲ ನಿರೀಕ್ಷಣಾ ಭವನವಿದೆ. ಭಕ್ತಾಧಿಗಳ ಅನುಕೂಲಕ್ಕಾಗಿ ಸಾಮೂಹಿಕ ಭೋಜನ ವ್ಯವಸ್ಥೆ ಕಲ್ಪಿಸುವ ಉಚಿತ ಅನ್ನದಾನ ಸಭಾ ಗೃಹವೂ ಇದೆ. ದಾನಿಗಳು ಹಾಗೂ ಪೋಷಕರ ಉದಾರ ಕೊಡುಗೆಯಿಂದ ಈ ದೇವಾಲಯ ಸಂಕೀರ್ಣವನ್ನು ನಿರ್ಮಿಸಲಾಗಿದೆ.
ಮುಂದಿನ ವಾರಗಳಲ್ಲಿ ವೇದ ಸಂಪ್ರದಾಯಗಳಿಗೆ ಅನುಗುಣವಾಗಿ ಸವಿವರ ಪೂಜಾ ವಿಧಾನಗಳನ್ನು ಹಾಗೂ ಪವಿತ್ರ ಕಾರ್ಯಗಳನ್ನು ದೇವಾಲಯ ಪ್ರಾಧಿಕಾರ ಕೈಗೊಳ್ಳಲಿದೆ. ಆದಕಾರಣ, ಈ ದೇವಾಲಯವನ್ನು ಆಗಸ್ಟ್ 1 ರಿಂದ ಸಾರ್ವಜನಿಕರಿಗೆ ಪ್ರವೇಶಾವಕಾಶ ಒದಗಿಸಿ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ ಎಂದು ದೇವಾಲಯದಿಂದ ಲಭ್ಯವಾದ ಮಾಹಿತಿ ತಿಳಿಸಿದೆ.
**********
ಡಿ ಪಿ ಎಂ
0 Comments