Ticker

6/recent/ticker-posts

Ad Code

Responsive Advertisement

ಭಾರತವು ಕೊರೊನಾವೈರಸ್ ವಿರುದ್ಧ ಗೆಲುವು ಸಾಧಿಸುತ್ತದೆ: ಪ್ರಧಾನಿ ನರೇಂದ್ರ ಮೋದಿ


 
ದೇಶದಲ್ಲಿ ಕೋವಿಡ್ ೧೯ ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ(ಜೂನ್ 17) ಸಂಜೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ 19 ಸೋಂಕು ತಡೆಗಟ್ಟಲು ಹಂತ, ಹಂತವಾಗಿ ಲಾಕ್ ಡೌನ್ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಜಾರಿಗೊಳಿಸಿದ್ದವು.

ದೇಶದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪುವವರ ಪ್ರಮಾಣ ಕೂಡಾ ಕಡಿಮೆಯಾಗಿದ್ದು, ಸಕ್ರಿಯ ಕೋವಿಡ್ ೧೯ ಪ್ರಕರಣಗಳ ಸಂಖ್ಯೆ ಕೂಡಾ ೧೪ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದಲ್ಲಿ ತಿಳಿಸಿದೆ.

ಜೂನ್ 21ರಿಂದ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಉಚಿತ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮುಂದಿನ ಎರಡು ವಾರಗಳ ಬಳಿಕ ಕೇಂದ್ರವೇ ಲಸಿಕೆ ನೀಡಲಿದೆ.

ಶೇ.೨೫ರಷ್ಟು ಲಸಿಕೆಗಳನ್ನು ಖಾಸಗಿ ಆಸ್ಪತ್ರೆ ಖರೀಸಬಹುದು, ಹಣವಿದ್ದವರು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು. ರಾಜ್ಯ ಸರ್ಕಾರಗಳ ಲಸಿಕೆ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಲಿದೆ ಎಂದರು.

ದೇಶದಲ್ಲಿ ಹಲವು ಮಂದಿ ತಮ್ಮ ಕುಟುಂಬದವರನ್ನು ಕಳೆದುಕೊಂಡಿದ್ದಾರೆ, ಸ್ನೇಹಿತರನ್ನು ಕಳೆದುಕೊಂಡಿದ್ದಾರೆ, ಪರಿಚಯಸ್ಥರನ್ನು ಕಳೆದುಕೊಂಡಿದ್ದಾರೆ. ಕಳೆದ 100 ವರ್ಷಗಳಲ್ಲಿ ಕಾಣದ ಎಲ್ಲಕ್ಕಿಂತ ದೊಡ್ಡ ಮಹಾಮಾರಿ ಕೊರೊನಾವಾಗಿದೆ, ಈ ರೀತಿಯ ಮಹಾಮಾರಿಯನ್ನು ಆಧುನಿಕ ವಿಶ್ವ ನೋಡಿಲ್ಲ ಅದರ ಅನುಭವ ಯಾರಿಗೂ ಇರಲಿಲ್ಲ ಎಂದರು.

ಪ್ರಧಾನಿ ನರೇಂದ್ರ ಭಾಷಣದ ಮುಖ್ಯಾಂಶಗಳು

ವಿಶ್ವಾಸದಿಂದಲೇ ಸಿದ್ಧಿ ಎಂಬ ಭಾರತದ ಮೂಲಮಂತ್ರಕ್ಕೆ ಪೂರಕವಾಗಿ, 23 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಭಾರತದಂತಹಾ ವಿಶಾಲ ದೇಶದಲ್ಲಿ ಇದೊಂದು ಬಲು ದೊಡ್ಡ ಸಾಧನೆ. ಭಾರತದಲ್ಲಿ ಲಸಿಕೆ ತಯಾರಿಸುವ ಕಂಪನಿಗಳಿಗೆ ಎಲ್ಲ ರೀತಿಯಲ್ಲೂ ಸರ್ಕಾರವು ನೆರವು ನೀಡಿ, ಭುಜಕ್ಕೆ ಭುಜಕೊಟ್ಟು ಗಟ್ಟಿಯಾಗಿ ನಿಂತಿತು. ಇಂದು, ದೇಶಗಳಲ್ಲಿ ೭ ಕಂಪನಿಗಳು ವಿಭಿನ್ನ ರೀತಿಯ ಲಸಿಕೆಗಳನ್ನು ಉತ್ಪಾದಿಸಲು ಆರಂಭಿಸಿವೆ. ಬೇರೆ ದೇಶಗಳಿಂದಲೂ ಲಸಿಕೆ ಖರೀದಿ ಪ್ರಕ್ರಿಯೆಗಳಿಗೆ ವೇಗ ನೀಡಲಾಗಿದೆ.
ಇದೀಗ ಮೂರನೇ ಅಲೆಯ ಆತಂಕವಿರುವುದರಿಂದಾಗಿ, ಮಕ್ಕಳಿಗಾಗಿ ಎರಡು ಲಸಿಕೆಗಳ ಪ್ರಯೋಗವೂ ವೇಗವಾಗಿ ನಡೆಯುತ್ತಿದೆ. ಇದಲ್ಲದೆ, ನೇಸಲ್ (ಮೂಗಿನ ಮೂಲಕ) ಸಿಂಪಡಿಸಲಾಗುವ ಲಸಿಕೆಯ ಪ್ರಯೋಗವೂ ನಡೆಯುತ್ತಿದೆ. ಇದಕ್ಕೆ ಯಶಸ್ಸು ಸಿಕ್ಕಿದರೆ, ಭಾರತದ ಲಸಿಕೆ ಅಭಿಯಾನಕ್ಕೆ ಮತ್ತಷ್ಟು ವೇಗ ಸಿಗುತ್ತದೆ. ಇಷ್ಟು ಕಡಿಮೆ ಸಮಯದಲ್ಲಿ ಲಸಿಕೆ ತಯಾರಿಸುವುದು ಇಡೀ ಮಾನವ ಕುಲಕ್ಕೆ ಬಲು ದೊಡ್ಡ ಉಪಯೋಗ. ವಿಶ್ವ ಆರೋಗ್ಯ ಸಂಸ್ಥೆಯ ನೀತಿಯ ಆಧಾರದಲ್ಲಿ ಭಾರತವು ಕೂಡ ಲಸಿಕಾಕರಣದಲ್ಲಿ ತೊಡಗಿಕೊಂಡಿತು. ಸಂಸತ್ತಿನ ವಿವಿಧ ಪಕ್ಷಗಳ ಸಹಯೋಗಿಗಳ ಸಲಹೆಗಳನ್ನು ಪರಿಗಣಿಸಿ, ಯಾರಿಗೆ ಕೊರೊನಾದಿಂದ ಹೆಚ್ಚು ಅಪಾಯವಿದೆಯೋ ಅವರಿಗೆ ಆದ್ಯತೆ ನೀಡಲಾಯಿತು. ಇದರ ಪರಿಣಾಮವಾಗಿ ಆರೋಗ್ಯ ಕಾರ್ಯಕರ್ತರು ಮತ್ತಿತರ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಯಿತು. ಕೊರೊನಾದ ಎರಡೇ ಅಲೆಗಿಂತ ಮುಂಚಿತವಾಗಿ ನಮ್ಮ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡದೇ ಹೋಗಿದ್ದರೆ, ಏನಾಗುತ್ತಿತ್ತು? ಗರಿಷ್ಠ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿದ ಪರಿಣಾಮವಾಗಿಯೇ ಅವರು ಕೊರೊನಾದಿಂದ ರಕ್ಷಣೆ ಪಡೆದು, ಅಗತ್ಯವಿರುವವರಿಗೆ ಸೇವೆ ನೀಡುವುದು ಸಾಧ್ಯವಾಯಿತು. 

ಇಷ್ಟೆಲ್ಲ ಆದರೂ, ಎಲ್ಲವನ್ನೂ ಕೇಂದ್ರವೇ ಯಾಕೆ ಮಾಡಬೇಕು, ರಾಜ್ಯ ಸರ್ಕಾರಗಳಿಗೆ ಯಾಕೆ ಅನುಮತಿ ಕೊಡುವುದಿಲ್ಲ ಎಂದು ಕೇಳಲಾಯಿತು. ಭಾರತ ಸರ್ಕಾರವು ಬೃಹತ್ ಮಾರ್ಗಸೂಚಿ ತಯಾರಿಸಿ ಎಲ್ಲ ರಾಜ್ಯಗಳಿಗೆ ನೀಡಿತು. ರಾಜ್ಯವು ಕೂಡ ತನ್ನ ಅಗತ್ಯಗಳಿಗೆ ತಕ್ಕಂತೆ ಕೆಲಸ ಮಾಡಬಹುದು. ಕೊರೊನಾ ಕರ್ಫ್ಯೂ, ಮೈಕ್ರೋ ಕಂಟೇನ್ಮೆಂಟ್ ವಲಯ ಮಾಡುವುದು, ಚಿಕಿತ್ಸೆಗೆ ಸಂಬಂಧಿತ ಕೆಲಸ - ಎಲ್ಲವನ್ನೂ ಅದರಲ್ಲಿ ನೀಡಲಾಗಿತ್ತು. ಎಲ್ಲರಿಗೂ ಉಚಿತ ಲಸಿಕೆ ನೀಡುವ ನಿಟ್ಟಿನಲ್ಲಿ ದೇಶವು ಮುನ್ನಡೆಯುತ್ತಿತ್ತು. ದೇಶದ ನಾಗರಿಕರು ಕೂಡ ತಮ್ಮ ಸರದಿ ಬಂದಾಗ ಲಸಿಕೆ ಹಾಕಿಸಿಕೊಂಡರು.  

ಈ ಮಧ್ಯೆ, ಕೆಲವು ರಾಜ್ಯ ಸರ್ಕಾರಗಳು, ಲಸಿಕೆ ವಿತರಣೆಯನ್ನು ವಿಕೇಂದ್ರೀಕರಿಸಬೇಕು, ಕೇಂದ್ರವೇ ಯಾಕೆ ನಿರ್ಧರಿಸಬೇಕು? ವೃದ್ಧರಿಗೇಗೆ ಲಸಿಕೆ ಮೊದಲು ನೀಡಬೇಕು? ಎಲ್ಲ ವರ್ಗದವರಿಗೆ ಯಾಕೆ ಕೊಡುತ್ತಿಲ್ಲ ಎಂದೆಲ್ಲಾ ಪ್ರಶ್ನೆ ಕೇಳಲಾಯಿತು. ರಾಜ್ಯಗಳ ಈ ಬೇಡಿಕೆಯನ್ನು ಮನಸ್ಸಿನಲ್ಲಿರಿಸಿಕೊಂಡು, ೧೬ ಜನವರಿಯಿಂದ ಆರಂಭವಾದ ವ್ಯವಸ್ಥೆಯ ಅನುಸಾರ, ರಾಜ್ಯದ ಉತ್ಸಾಹಗಳನ್ನು ಪರಿಗಣಿಸಿ, ಶೇ.25 ಕೆಲಸವನ್ನು ಅವರಿಗೇ ನೀಡುವುದೆಂದು ತೀರ್ಮಾನಿಸಲಾಯಿತು. ಮೇ 1ರಿಂದ ಶೇ.25ರ ಕೆಲಸವನ್ನು ಎಲ್ಲ ರಾಜ್ಯಗಳಿಗೂ ನೀಡಲಾಯಿತು. ಇಷ್ಟು ದೊಡ್ಡ ಕಾರ್ಯದಲ್ಲಿ ಯಾವೆಲ್ಲ ಕಷ್ಟ ಇದೆ ಎಂಬುದು ಈ ರಾಜ್ಯಗಳಿಗೂ ತಿಳಿಯತೊಡಗಿತು. ರಾಜ್ಯಗಳಿಗೂ ಪರಿಸ್ಥಿತಿಯು ಅರಿವಿಗೆ ಬಂದಿತು. ಲಸಿಕೆಗಾಗಿ ಜನರ ಸರದಿ ಹೆಚ್ಚತೊಡಗಿತು, ಮೇ ತಿಂಗಳ ಎರಡು ವಾರಗಳಲ್ಲಿ ಸಮಸ್ಯೆಯೂ ಹೆಚ್ಚಾಗತೊಡಗಿತು. ಇದನ್ನು ನೋಡಿ, ಲಸಿಕೆಯ ಕೆಲಸವನ್ನು ರಾಜ್ಯಗಳಿಗೇ ಬಿಡಬೇಕು ಎಂದು ಹೇಳಿದವರ ಮಾತುಗಳೂ ಬದಲಾಗತೊಡಗಿದವು. ಹೀಗಾಗಿ ಹಿಂದಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂದು ರಾಜ್ಯಗಳು ಹೇಳತೊಡಗಿದವು. ರಾಜ್ಯಗಳ ಈ ಸಮಸ್ಯೆಯಿಂದಾಗಿ, ದೇಶವಾಸಿಗಳಿಗೆ ಯಾವುದೇ ಸಮಸ್ಯೆಯಾಗಬಾರದೆಂಬ ಕಾರಣಕ್ಕೆ, ಮೇ ೧ಕ್ಕಿಂತ ಹಿಂದಿನ ವ್ಯವಸ್ಥೆಯನ್ನೇ ಮರುಸ್ಥಾಪಿಸಲಾಯಿತು. 

ಲಸಿಕಾಕರಣದ ರಾಜ್ಯಗಳ ಶೇ.೨೫ ಭಾಗವನ್ನೂ ಭಾರತ ಸರ್ಕಾರವೇ ವಹಿಸಿಕೊಂಡಿತು. ಮುಂದಿನ ಎರಡು ವಾರಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿಕೊಂಡು, ಹೊಸ ಮಾರ್ಗಸೂಚಿ ಅನುಸರಿಸಬೇಕಿದೆ. ಜೂ.೨೧ರಂದು ಅಂತರರಾಷ್ಟ್ರೀಯ ಯೋಗದಿವಸ. ಆ ದಿನದಿಂದ ೧೮ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಯಾವುದೇ ರಾಜ್ಯಸರ್ಕಾರಗಳಿಗೆ ಲಸಿಕಾಕರಣಕ್ಕಾಗಿ ಯಾವುದೇ ಹಣವನ್ನು ಪಾವತಿಸಬೇಕಿಲ್ಲ. ಎಲ್ಲ ದೇಶವಾಸಿಗಳಿಗೆ ಭಾರತ ಸರ್ಕಾರವೇ ಉಚಿತ ಲಸಿಕೆಯನ್ನು ನೀಡುತ್ತದೆ. ಉಚಿತ ಲಸಿಕೆ ಬೇಡ ಎಂದುಕೊಂಡವರಿಗೆ, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಿಸಿಕೊಳ್ಳುವ ಸಾಮರ್ಥ್ಯ ಇರುವವರಿಗಾಗಿ ಅಂಥವರಿಗಾಗಿಯೇ ಖಾಸಗಿ ಆಸ್ಪತ್ರೆಗಳಿಗೂ ಶೇ.25 ಲಸಿಕೆಗಳನ್ನು ಒದಗಿಸಲಾಗುತ್ತದೆ. ಅವರು ಗರಿಷ್ಠ 150 ರೂ. ಸೇವಾ ಶುಲ್ಕ ತೆಗೆದುಕೊಂಡು, ಲಸಿಕೆಯನ್ನು ನೀಡಬಹುದು. ಕೊರೊನಾದ ಹೋರಾಟದಲ್ಲಿ 130 ಕೋಟಿ ಭಾರತೀಯರು ಪರಸ್ಪರ ಸಹಕಾರದಿಂದ, ದಿನ-ರಾತ್ರಿ ಶ್ರಮ ವಹಿಸಿಯೇ ಭಾಗವಹಿಸುತ್ತಿದ್ದಾರೆ. ಯಶಸ್ಸು ಸಿಗುವಲ್ಲಿ ಶ್ರಮಿಸುತ್ತೇವೆ, ಲಸಿಕಾಕರಣವೂ ಯಶಸ್ವಿಯಾಗುವಲ್ಲಿ ನಾವೂ ಪರಿಶ್ರಮ ವಹಿಸುತ್ತೇವೆ. ಲಸಿಕೆಯ ಪ್ರತಿಯೊಂದು ಡೋಸ್ ಕೂಡ ಅತ್ಯಂತ ಮಹತ್ವಪೂರ್ಣವಾದುದು. ಒಂದು ಡೋಸ್ ಜೊತೆಗೂ ಒಂದು ಜೀವವೇ ಸೇರಿಕೊಂಡಿದೆ. ಕೇಂದ್ರವು, ಯಾರಿಗೆ ಎಷ್ಟು ಲಸಿಕೆ ದೊರೆಯುತ್ತದೆ ಎಂಬುದನ್ನು ವಾರಗಳ ಮುಂಚೆಯೇ ತಿಳಿಸಿದೆ. ಲಸಿಕೆಯ ಉಪಲಬ್ಧತೆಯ ಅನುಸಾರ, ಎಲ್ಲ ಕಡೆ ಲಸಿಕೆ ವಿತರಣೆಯಾಗಲಿ. 

ಲಸಿಕಾಕರಣದ ಹೊರತಾಗಿ, ಇವತ್ತು ಮತ್ತೊಂದು ನಿರ್ಧಾರವನ್ನು ಘೋಷಿಸಲಾಗುತ್ತಿದೆ. ಹಿಂದಿನ ವರ್ಷ ಕೊರೊನಾ ಕಾರಣದಿಂದ ಲಾಕ್‌ಡೌನ್ ಮಾಡಲಾಗಿತ್ತು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ೮೦ ಕೋಟಿ ಮಂದಿಗೆ ಉಚಿರ ರೇಷನ್ ಒದಗಿಸಲಾಗಿತ್ತು. ಈ ವರ್ಷವೂ ಮೇ ಹಾಗೂ ಜೂನ್ ತಿಂಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಈ ಯೋಜನೆಯು ದೀಪಾವಳಿವರೆಗೂ ಮುಂದುವರಿಯಲಿದೆ. ಪ್ರತಿಯೊಬ್ಬ ಬಡ ನಾಗರಿಕರೊಂದಿಗೆ ಸರ್ಕಾರವೂ ಜೊತೆಗಿರುತ್ತದೆ. ನವೆಂಬರ್‌ವರೆಗೆ ಎಲ್ಲ 80 ಕೋಟಿ ಮಂದಿಗೆ, ಉಚಿತವಾಗಿ ಧಾನ್ಯ ವಿತರಿಸಲಾಗುತ್ತದೆ. 

ದೇಶದಲ್ಲಿ ಇಷ್ಟೆಲ್ಲ ಪ್ರಯಾಸ ನಡೆಸುತ್ತಿದ್ದರೂ, ಲಸಿಕೆಯ ಕುರಿತು ಭ್ರಮೆ, ಭಯ, ಆತಂಕ ಮೂಡಿದೆ. ಭಾರತದಲ್ಲಿ ಲಸಿಕೆ ಬಗ್ಗೆ ಕಾರ್ಯಕ್ರಮ ಆರಂಭವಾದಂದಿನಿಂದಲೇ ಕೆಲವು ಮಂದಿ ಜನ ಸಾಮಾನ್ಯರ ಮನಸ್ಸಿನಲ್ಲಿ ಶಂಕೆಯ ಬೀಜ ಬಿತ್ತುವ ಕೆಲಸ ಮಾಡಿದರು. ಭಾರತದ ಲಸಿಕೆ ಬಂದಾಗ, ಅದರ ಬಗ್ಗೆ ಶಂಕೆ ಮತ್ತಷ್ಟು ಹೆಚ್ಚುವಂತೆ ಮಾಡಲಾಯಿತು.   ಲಸಿಕೆ ಬಗ್ಗೆ ಶಂಕೆ ಹುಟ್ಟಿಸಿಹಾಕಿದವರು ಅವರು ಮುಗ್ಧ ಜನರ ಜೀವನದ ಜೊತೆ ಚೆಲ್ಲಾಟವಾಡಿದರು. ಅಂಥವರಿಂದ ದೂರವಿರಿ. ಇದನ್ನೆಲ್ಲಾ ದೇಶವೇ ನೋಡುತ್ತಿದೆ. 

ಸಮಾಜದ ಪ್ರಬುದ್ಧ, ಯುವ ಜನರಲ್ಲಿ ಮನವಿ ಏನೆಂದರೆ, ಲಸಿಕೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸಹಕಾರ ನೀಡಿ. ಕೆಲವು ಕಡೆಗಳಲ್ಲಿ ಕೊರೊನಾ ಕರ್ಫ್ಯೂ ಸಡಿಲಿಸಲಾಗುತ್ತಿದೆ. ಆದರೆ, ಕೊರೊನಾ ಓಡಿ ಹೋಗಿದೆ ಎಂದು ತಿಳಿಯಬೇಕಿಲ್ಲ. ಎಚ್ಚರಿಕೆ ವಹಿಸಲೇಬೇಕು. ನಾವೆಲ್ಲರೂ ಕೊರೊನಾ ವಿರುದ್ಧದ ಈ ಯುದ್ಧವನ್ನು ಜಯಿಸುತ್ತೇವೆ, ಭಾರತವು ಕೊರೊನಾ ವಿರುದ್ಧ ಜಯಿಸುತ್ತದೆ. ಎಲ್ಲರಿಗೂ ಶುಭವಾಗಲಿ, ಧನ್ಯವಾದ.

https://twitter.com/i/broadcasts/1LyxBdNNDmzGN

 

 

Post a Comment

0 Comments

Ad Code

Responsive Advertisement