ಸಂಪಾದನೆಯ ಸ್ವಲ್ಪ ಭಾಗವನ್ನು ಸಮಾಜಸೇವೆಗೆ ಬಳಸಿದರೆ ನಮ್ಮ ಜೀವನವನ್ನು ಸಾರ್ಥಕ ಗೊಳಿಸಬಹುದು ಎಂದು ತಹಸೀಲ್ದಾರ್ ಟಿ ಜಿ ಸುರೇಶ್ ಆಚಾರ್ ತಿಳಿಸಿದರು.
ಪಟ್ಟಣದ ಶ್ರೀ ಕನ್ಯಕಾಪರಮೇಶ್ವ
ರಿ ದೇವಾಲಯದ ಸಭಾಂಗಣದಲ್ಲಿ ಶ್ರೀ ವರದಾಯಿನಿ ಸೇವಾ ಟ್ರಸ್ಟ್, ನೇತ್ರ ಸಂಗ್ರಹಣಾ ಕೇಂದ್ರ ಹಾಗೂ ಭಜನಾ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಹೊಲಿಗೆ ಯಂತ್ರ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದಲ್ಲಿ ಎಲ್ಲರೂ ಸಮಾನರಾಗಿಲ್ಲ. ಬಡವರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದು, ದಾನಿಗಳು ನೆರವು ನೀಡಬೇಕೆಂದು ತಿಳಿಸಿದರು. ಬಡ ವಿದ್ಯಾರ್ಥಿಗಳು ಆರ್ಥಿಕ ಮುಗ್ಗಟ್ಟಿನಿಂದ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸುತ್ತಿದ್ದಾರೆ. ಅವರಿಗೆ ಸಹಾಯಧನ ನೆಡುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದ ಅವರು ಟ್ರಸ್ಟ್ ನಿರಂತರ ಸಮಾಜಸೇವಾ ಕಾರ್ಯಗಳಲ್ಲಿ ನಿರತ ವಾಗಿರಲಿ ಎಂದರು.
ಟ್ರಸ್ಟ್ ನ ಅಧ್ಯಕ್ಷೆ ಗಾಯತ್ರಿ ನಾರಾಯಣ್ ಮಾತನಾಡಿ ಇದುವರೆಗೆ 154 ಜನರ ನೇತ್ರಗಳನ್ನು ಸಂಗ್ರಹಿಸಿ ಬೆಂಗಳೂರಿನ ಡಾಕ್ಟರ್ ರಾಜಕುಮಾರ್ ನೇತ್ರದಾನ ಕೇಂದ್ರಕ್ಕೆ ಕಳುಹಿಸಲಾಗಿದೆ. ನೇತ್ರಗಳನ್ನು ಬೆಂಗಳೂರಿಗೆ ಕಳುಹಿಸಲು ಕಾರು ಬಾಡಿಗೆ ದುಬಾರಿಯಾಗಿದ್ದು, ಸರ್ಕಾರ ವಾಹನ ವ್ಯವಸ್ಥೆಕಲ್ಪಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಎಂಎಸ್ ರಘುನಾಥ್, ಸಮಾಜಸೇವಕರಾದ ಸುದರ್ಶನ್ ಬಾಬು, ಕಿಶೋರ್ ಹಾಗೂ ಪಿಹೆಚ್ಡಿ ಪದವಿ ಪಡೆದಿರುವ ಭಾರ್ಗವ ಶರ್ಮ ರವರನ್ನು ಸನ್ಮಾನಿಸಲಾಯಿತು. ಮತ್ತು ಬಡ ವಿದ್ಯಾರ್ಥಿಗಳಿಗೆ ಸಹಾಯಧನ, ಬಡ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು. ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್ ಶ್ರೀನಿವಾಸಮೂರ್ತಿ, ಗೌರವಾಧ್ಯಕ್ಷ ಡಿ ಜಿ ಶಂಕರನಾರಾಯಣ ಶೆಟ್ಟಿ, ಟ್ರಸ್ಟ್ನ ಪದಾಧಿಕಾರಿಗಳಾದ ಪ್ರತಿಮಾ, ಲತಾ, ಲಕ್ಷ್ಮಿ, ಪದ್ಮಾವತಿ, ನಿರ್ಮಲ ಕುಮಾರಿ, ಜಲಜ, ಸುಶಿಲಾದೇವಿ,ವೀಣಾ, ಮುಂತಾದವರು ಇದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ

0 Comments