Ticker

6/recent/ticker-posts

Ad Code

Responsive Advertisement

ಪೂರ್ವ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೂರ್ವ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾನ್ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿನಾಥ್ ರವರು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನೆ ನಡೆಸಿದರು.

ಪೌರಕಾರ್ಮಿಕರೊಂದಿಗೆ ಸೌಹಾರ್ದ ಭೇಟಿ:

ಮನೋರಾಯನ ಪಾಳ್ಯ ಆರ್.ಟಿ.ನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗೆ  ಮುಖ್ಯ ಆಯುಕ್ತರು ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ಸೌರ್ಹದತೆಯಿಂದ ಮಾತನಾಡಿ, ಆರೋಗ್ಯ ವಿಚಾರಣೆ ಹಾಗೂ ಮನೋಸ್ಥೈರ್ಯ ತುಂಬವ ಕೆಲಸ ಮಾಡಿದರು. ಜೊತೆಗೆ ಹಾಜರಾತಿ ಪರಿಶೀಲನೆ ನಡೆಸಿ ಗೈರು ಹಾಜರಾದ ಪೌರಕಾರ್ಮಿಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪೌರ ಕಾರ್ಮಿಕರೊಟ್ಟಿಗೆ ಚಹಾ ಸೇವಿಸಿದರು. 

ಜೆ.ಸಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಗೆ ಭೇಟಿ ನೀಡಿದಾಗ 13 ಆಟೋ ಗಳಲ್ಲಿ 12 ವಾಹನಗಳು ಮಾತ್ರ ಹಾಜರಿದ್ದವು. ಜೊತೆಗೆ ಜಿಪಿಎಸ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದನ್ನು ಗಮನಿಸಿ ಅದನ್ನು ಸರಿಪಡಿಸಿಕೊಂಡು ಪ್ರತಿ ನಿತ್ಯ ಸದರಿ ವಾಹನಗಳು ಚಲಿಸುವ ಬಗ್ಗೆ ನಿಗಾವಹಿಸಬೇಕು ಹಾಗೂ ಪ್ರತಿ ನಿತ್ಯ ವರದಿಯನ್ನು ನೀಡಲು ತಿಳಿಸಿದರು. ಜಿಪಿಎಸ್ ವ್ಯವಸ್ಥೆ ನಿರ್ವಹಣೆಯನ್ನು ಸರಿಪಡಿಸಿ ನಿಯಂತ್ರಣ ಕೊಠಡಿ ಮೂಲಕ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್ ಗಳ ಮೇಲೆ ಮೇಲ್ವಿಚಾರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 



ದೇವೇಗೌಡ ಮುಖ್ಯ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ) ಪರಿಶೀಲನೆ ನಡೆಸಿ, ದಿನನಿತ್ಯ ಕಸ ತೆಗೆಯುವುದರ ಬಗ್ಗೆ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದರು. ಜೊತೆಗೆ ಅಕ್ಕ-ಪಕ್ಕದ ನಿವಾಸಿಗಳು ಅಥವಾ ಕಛೇರಿಗಳಲ್ಲಿ ಅಳವಡಿಸಿರುವ ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪಡೆದು ರಸ್ತೆಯಲ್ಲಿ ಕಸ ಹಾಕುವವರ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮುನಿರೆಡ್ಡಿ ಪಾಳ್ಯದ ಬಿಬಿಎಂಪಿಯ ಹೆರಿಗೆ ಆಸ್ಪತ್ರೆಯ ಸುತ್ತಮುತ್ತಲಿನ ರಸ್ತೆ ಬದಿಯ ಶೋಲ್ಡರ್ ಡ್ರೈನ್‌ಗಳು ಸ್ವಚ್ಛವಾಗಿರದೇ ಇರುವುದನ್ನು ಗಮನಿಸಿ, ಕೂಡಲೆ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳನ್ನು ಸ್ವಚ್ಛಗೊಳಿಸಬೇಕು. ಜೊತೆಗೆ ರಾಜಕಾಲುವೆಗಳಲ್ಲಿ ನಿರಂತರವಾಗಿ ಹೂಳೆತ್ತಲು ವಾರ್ಷಿಕ ನಿರ್ವಹಣಾ ಗುತ್ತಿಗೆ ನೀಡಿದ್ದು, ಆ ಪ್ರಕ್ರಿಯೆಯು ಸಕ್ರಿಯವಾಗಿ ನಡೆದು ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದುಹೋಗಲು ಅನುವಾಗುವಂತೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ನಂತರ ಹೆರಿಗೆ ಆಸ್ಪತ್ರೆ ಆವರಣದಲ್ಲಿ ಪೌರ ಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಪರಿಶೀಲಿಸಿ, ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ ಇಲ್ಲದಿರುವುದನ್ನು ಕಂಡು ಕೂಡಲೆ ಆಸ್ಪತ್ರೆ ಆವರಣದಲ್ಲಿ ವಿಶ್ರಾಂತಿ ಕೊಠಡಿ(ಸುವಿಧಾ ಕ್ಯಾಬಿನ್)ಯನ್ನು 7 ದಿನದೊಳಗಾಗಿ ಸ್ಥಾಪಿಸಲು ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್‌ಗೆ ಸೂಚಿಸಿದರು. ಅಲ್ಲಿಯವರೆಗೆ ಆಸ್ಪತ್ರೆಯ ಶೌಚಾಲಯವನ್ನು ಪೌರಕಾರ್ಮಿಕರು ಉಪಯೋಗಿಸಲು ಅನುವು ಮಾಡಿಕೊಡಬೇಕೆಂದು ಆಸ್ಪತ್ರೆಯ ವೈದ್ಯಾಧಿಕಾರಿಗೆ ತಿಳಿಸಿದರು. ಇದೇ ವೇಳೆ ಪೌರಕಾರ್ಮಿಕರಿಗೆ ನೀಡುವ ಸುರಕ್ಷಾ ಸಮಾಗ್ರಿಗಳು, ಸಮವಸ್ತ್ರಗಳನ್ನು ಸರಿಯಾದ ಸಮಯಕ್ಕೆ  ನೀಡಲು ಸೂಚಿಸಿದರು.

 ಈ ವೇಳೆ ಮುಖ್ಯ ಇಂಜಿನಿಯರ್ ಬಸವರಾಜ್ ಕಬಾಡೆ ರವರು ಮಾತನಾಡಿ, ಪೌರಕಾಮಿರ್ಕರ ವಿಶ್ರಾಂತಿ ಕೊಠಡಿಗಳಿಗೆ ಸಂಬಂಧಿಸಂತೆ 225 ಮಸ್ಟರಿಂಗ್ ಪಾಯಿಂಟ್ ಗಳಲ್ಲಿ ಸುವಿಧಾ ಕ್ಯಾಬಿನ್ ಯೋಜನೆ ಜಾರಿಗೊಳಿಸುತ್ತಿದ್ದು, ಈಗಾಗಲೇ 44 ಕಡೆ ಸ್ಥಾಪಿಸಲಾಗಿದೆ. ಶೀಘ್ರ ಉಳಿದ ಕಡೆಯೂ ಸ್ಥಾಪಿಸಲಾಗುವುದು ಎಂದು ಮುಖ್ಯ ಆಯಕ್ತರಿಗೆ ಮಾಹಿತಿ ನೀಡಿದರು.

ಕೂಡಲೆ ಆಸ್ಪತ್ರೆ ಪ್ರಾರಂಭಿಸಿ:

ಮುನಿರೆಡ್ಡಿ ಪಾಳ್ಯದ ಹೆರಿಗೆ ಆಸ್ಪತ್ರೆಯನ್ನು ನೂತನವಾಗಿ ನವೀಕರಿಸಲಾಗಿದ್ದು ಕಟ್ಟಡ ಕಾಮಗಾರಿ ಪೂರ್ಣಗೊಂಡಿರುತ್ತದೆ. ಆದರೆ, ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಬೇಕಿದೆ. ಈ ಪೈಕಿ ಅವುಗಳನ್ನು ಪರಿಕ್ಷೀಸಿ ಸೇವೆಗೆ ಸಿದ್ದವಿಪಡಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದರು. ಅಲ್ಲದೆ ಹೊರ ರೋಗಿಗಳಿಗೆ ಕೂಡಲೆ ಸೇವೆ ನೀಡುವಂತೆ ಆದೇಶಿಸಿದರು.



ಗಂಗಾನಗರದಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಆ ಬಳಿಕ ಆರ್.ಟಿ.ನಗರ ಸಾಯಿಮಂದಿರದ ಬಳಿ ದ್ವಿತೀಯ ರಾಜಕಾಲುವೆಯನ್ನು ಪರಿಶೀಲಿಸಿ ಹೂಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಹೆಣ್ಣೂರು ರಸ್ತೆ ಅಭಿವೃಧ್ಧಿ ಪರಿಶೀಲನೆ:

ಸುಮಾರು 1.6 ಕಿ.ಮೀ ಉದ್ದದ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆ ದುರಸ್ಥಿ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಪಾದಚಾರಿ ಮಾರ್ಗ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಜುಲೈ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.



ಹೆಣ್ಣೂರು ಮುಖ್ಯ ರಸ್ತೆ ಬಳಿಯ ಹೆಬ್ಬಾಳ ಕಣಿವೆಯಲ್ಲಿ ಹೂಳೆತ್ತುವ ಕಾರ್ಯವನ್ನು ಪರಿಶೀಲನೆ ನಡೆಸಿ ಕಾಲ-ಕಾಲಕ್ಕೆ ಹೂಳೆತ್ತುವ ಪ್ರಕ್ರಿಯೆ ಸಕ್ರಿಯವಾಗಿ ನಡೆಯಬೇಕು. ಕಣಿವೆ ಬಳಿ ರೈಲ್ವೆ ಸೇತುವೆ ಕಿರಿದಾಗಿದ್ದು, ಅದನ್ನು ಅಗಲ ಮಾಡಲು ರೈಲ್ವೆ ಇಲಾಖೆ ಜೊತೆ ಸಮನ್ವಯ ಸಾಧಿಸಿ ಸೇತುವೆಯನ್ನು ಅಗಲಮಾಡಲು ಅಧಿಕಾರಿಗಳಿಗೆ ಸೂಚನೆ ನಿಡಿದರು. ಇದೇ ವೇಳೆ ಪಾಲಿಕೆಯ ಒಣ ತ್ಯಾಜ್ಸ ವಿಂಗ್ರಹಣಾ ಘಟಕ ಪರಿಶೀಲನೆ ನಡೆಸಿದರು.

ಹೆಚ್.ಬಿ.ಆರ್ ಲೇಔಟ್ ಮೊದಲನೇ ಹಂತ, 8ನೇ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ನೀರು ಹೊರಬಾರದಂತೆ ತಡೆಗೋಡೆಯನ್ನು ಎತ್ತರಿಸಿ ಶಿಘ್ರ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಪರಿಶೀಲನೆ:

ಹೆಚ್.ಬಿ.ಆರ್ ಲೇಔಟ್ ನಲ್ಲಿ 17 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಸದರಿ ಕಟ್ಟಡದ(ಜಿ + 4 ಅಂತಸ್ತಿನ ಕಟ್ಟಡ) ಕಾಮಗಾರಿಯು ಶೇ. 65 ರಷ್ಟು ಪೂರ್ಣಗೊಂಡಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್, ಲ್ಯಾಬ್ಸ್, ಕನ್ಸಲ್ಟೇಷನ್ ಸೇರಿದಂತೆ ಇನ್ನಿತರೆ ಸೌಲಭ್ಯಗಳು ಇರಲಿವೆ. ಈ ಸಂಬಂಧ ಮುಂದಿನ 6 ತಿಂಗಳಲ್ಲಿ ಆಸ್ಪತ್ರೆಯನ್ನು ಕಾರ್ಯಾರಂಭಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 




ನಂತರ, ಪುಲಕೇಶಿ ನಗರ ಕೋಮಲ ಜಂಕ್ಷನ್ ಬಳಿ ಬಡವರ್ಗದ ಜನರಿಗಾಗಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಲ್ಯಾಣ ಮಂಟಪ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಸದ್ಯ ಶೇ. 30 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ 12 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಕೋಮಲ ಜಂಕ್ಷನ್ ರಸ್ತೆ ಬದಿ ಆಟೋ ಟಿಪ್ಪರ್ ಗಳಿಂದ ಕಾಂಪ್ಯಾಕ್ಟರ್(ಟ್ರಾನ್ಸ್ಫರ್ ಪಾಯಿಂಟ್)ಗೆ ಕಸ ವರ್ಗಾಯಿಸುವುದರಿಂದ ಆ ಭಾಗದಲ್ಲಿ ಹೋಗುವ ಸಾರ್ವಜನಿಕರಿಗೆ ಕಿರಿ-ಕಿರಿಯುಂಟಾಗುತ್ತದೆ. ಈ ಸಂಬಂಧ ಕಸ ವರ್ಗಾಯಿಸುವುದು ಸಾರ್ವಜನಿಕರಿಗೆ ಕಾಣಿಸದಂತೆ ತಾತ್ಕಾಲಿಕವಾಗಿ ಶೀಟ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪರಿಶೀಲನೆ ವೇಳೆ ವಲಯ ಆಯುಕ್ತ  ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ಮುಖ್ಯ ಇಂಜಿನಿಯರ್ ಗಳಾದ ಮೋಹನ್ ಕೃಷ್ಣಾ, ಸುಗುಣಾ, ಪ್ರಹ್ಲಾದ್, ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್,  ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement