ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಸಿಡೇದಹಳ್ಳಿ, ಸಿದ್ದೇಶ್ವರಲೇಔಟ್ 2ನೇ ಮುಖ್ಯರಸ್ತೆ ವಾಸವಿರುವ ಪಿರ್ಯಾದುದಾರರು ದಿನಾಂಕ 03-05-2022 ರಂದು ಬೆಳಗ್ಗೆ 11-00 ಗಂಟೆಯಲ್ಲಿ ಕೆಲಸದ ನಿಮಿತ್ತ ಸಂಸಾರ ಸಮೇತವಾಗಿ ಮನೆಗೆ ಬೀಗ ಹಾಕಿಕೊಂಡು ದೆಹಲಿಗೆ ಹೋಗಿದ್ದು, ದಿನಾಂಕ 09-05-2022 ರಂದು ತಮ್ಮ ಮನೆ ಕಳವಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದು ನೋಡಲಾಗಿ, ಮನೆಯ ಬಾಲ್ಕನಿಯ ಬಾಗಿಲಿಗೆ ಹಾಕಿದ್ದ ಗ್ರೀಲ್ ಡೋರ್ಅನ್ನು ಹೊಡೆದು ಮನೆಯೊಳಗೆ ಪ್ರವೇಶಿಸಿ ಬೆಡ್ ರೂಮಿನ ವಾರ್ಡ್ ರೂಬ್ನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಸದರಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಹಗಲು ಮತ್ತು ರಾತ್ರಿ ಕನ್ನಾ ಕಳವು ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 20 ಲಕ್ಷ ರೂ. ಬೆಲೆ ಬಾಳುವ 390 ಗ್ರಾಂ ಚಿನ್ನಾಭರಣಗಳನ್ನು ಮತ್ತು 1-ಆಟೋ ರಿಕ್ಷಾವನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಆರೋಪಿಗಳನ್ನು ಹೆವಿಚಾರಣೆಗೊಳಪಡಿಸಿದಾಗ ಆರೋಪಿ ಮೂಲತಃ ಪಶ್ಚಿಮ ಬಂಗಾಳ ಮತ್ತು ದೆಹಲಿಯವನಾಗಿದ್ದು, ಇಬ್ಬರು ಆರೋಪಿಗಳು ಬಾಗಲಗುಂಟೆ ಪ್ರದೇಶಗಳಲ್ಲಿ ಚಿಂದಿಯನ್ನು ಸಂಗ್ರಹಿಸಿ ಚಿಕ್ಕಬಾಣಾವರದಲ್ಲಿರುವ ಗುಜರಿ ಅಂಗಡಿಗಳಿಗೆ ನೀಡಿ ಅದರಿಂದ ಬರುವ ಹಣದಿಂದ ಜೀವನ ಮಾಡಿಕೊಂಡಿರುತ್ತಾರೆ. ಚಿಂದಿ ಸಂಗ್ರಹಿಸುವ ಸಮಯದಲ್ಲಿ ಬೀಗ ಹಾಕಿರುವ ಮನೆಯನ್ನು ಗುರುತಿಸಿಕೊಂಡು ರಾತ್ರಿ ವೇಳೆಯಲ್ಲಿ ಹೋಗಿ ಕಳವು ಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿಗಳ ಬಂಧನದಿಂದ ಬಾಗಲಗುಂಟೆ ಪೊಲೀಸ್ ಠಾಣೆ-1 ಹಗಲು & ರಾತ್ರಿ ಕನ್ನಾ ಕಳವು ಮತ್ತು 1- ಆಟೋ ರಿಕ್ಷಾ ಕಳವು ಪ್ರಕರಣ ಸೇರಿದಂತೆ ಒಟ್ಟು 2 ಪ್ರಕರಣಗಳು ಪತ್ತೆಯಾಗಿರುತ್ತವೆ.

0 Comments