ಶಿವಮೊಗ್ಗ, ಏಪ್ರಿಲ್.13: "ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬ0ಧಪಟ್ಟ0ತೆ ನ್ಯಾಯಯುತವಾದ ತನಿಖೆ ನಡೆಸಬೇಕು. ಆದರೆ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡುವುದಿಲ್ಲ," ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು. ನನ್ನ ಮೇಲೆ ಕೇವಲ ಆರೋಪ ಇದೆ ಅಷ್ಟೇ. ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪ, ತಾವು ನೂರಕ್ಕೆ ನೂರು ರಾಜೀನಾಮೆ ನೀಡುವುದಿಲ್ಲ ಎಂದು ತಿಳಿಸಿದರು. ರಾಜನಾಮೆ ನೀಡುವ ಪ್ರಮಯವೇ ಇಲ್ಲ.
"ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಡೆತ್ನೋಟ್ ಹಿಡಿದುಕೊಂಡು ಬಿಜೆಪಿಯವರು ಪ್ರತಿಭಟನೆ ನಡೆಸಿದ್ದರು. ಗೃಹ ಸಚಿವರಾಗಿದ್ದ ಕೆ.ಜೆ. ಜಾರ್ಜ್ ರಾಜೀನಾಮೆ ಪಡೆದರು ಎಂದು ಕಾಂಗ್ರೆಸ್ ಪಕ್ಷ ಆರೋಪಿಸುತ್ತಿದೆ. ಡಿವೈಎಸ್ಪಿ ಗಣಪತಿ ಅವರು ಡೆತ್ನೋಟ್ ಬರೆದಿಟ್ಟು ಸಹಿ ಹಾಕಿದ್ದರು. ಆದರೆ ಸಂತೋಷ್ ಪಾಟೀಲ್ ಪ್ರಕರಣ ಹಾಗಲ್ಲ," ಎಂದರು.
"ವಾಟ್ಸಪ್ನಲ್ಲಿ ಡೆತ್ನೋಟ್ ಟೈಪ್ ಮಾಡಿದ್ದಾರೆ. ಆದರೆ ಅದನ್ನು ಟೈಪ್ ಮಾಡಿದ್ದು ಅವರೋ ಅಥವಾ ಬೇರೆಯವರೊ ಎಂಬುದು ಗೊತ್ತಾಗಬೇಕಲ್ಲ. ಅದು ತನಿಖೆಯಿಂದ ಮಾತ್ರ ಹೊರಬರಬೇಕು. ಆದರೆ ಸಂತೋಷ್ ಪಾಟೀಲ್ ಅವರು ಡೆತ್ನೋಟ್ ಬರೆದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ರಾಜೀನಾಮೆ ಕೇಳುತ್ತಿದ್ದಾರೆ," ಇದರೆ ಕಾಂಗ್ರೆಸ್ನವರ ಕೈವಾಡ ಇರಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
"ನಮ್ಮ ಇಲಾಖೆಯಲ್ಲಿ ಯಾವುದೇ ಕಾಮಗಾರಿ ನಡೆಸುವಾಗ ಆಡಳಿತಾತ್ಮಕ ಮತ್ತು ತಾಂತ್ರಿಕವಾಗಿ ಒಪ್ಪಿಗೆ ಪಡೆಯಬೇಕು. ಆ ನಂತರ ವರ್ಕ್ ಆರ್ಡರ್ ಕೊಡಬೇಕು. ಸರ್ಕಾರಿ ಇಲಾಖೆ ಮೇಲ್ವಿಚಾರಣೆ ನಡೆಸಬೇಕು. ಆ ನಂತರ ಬಿಲ್ ಪಾವತಿ ಆಗಲಿದೆ. ಆದರೆ ಸಂತೋಷ್ ಪಾಟೀಲ್ ಅವರು ನಡೆಸಿದ್ದಾರೆ ಎನ್ನಲಾದ ಕಾಮಗಾರಿಗಳು ಕಾನೂನು ಬಾಹಿರವಾಗಿದೆ," ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಸರ್ಕಾರ ನಡೆಸಿದ್ದಾರೆ. ಅವರು ಸರ್ಕಾರ ನಡೆಸುತ್ತಿದ್ದಾಗ ಹೀಗೆ ನಿಯಮ ಬಾಹಿರವಾಗಿ ಕಾಮಗಾರಿಗಳನ್ನು ನಡೆಸಿದ್ದಾರೆಯೇ ಎಂದು ಸ್ಪಷ್ಟಪಡಿಸಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ 80 ಬಾರಿ ನಮ್ಮ ಮನೆ ಬಳಿ ಬಂದು ಹೋಗಿದ್ದೇನೆ ಎಂದಿದ್ದಾರೆ. ದೆಹಲಿಗೆ ಹೋಗಿ ನಮ್ಮ ಪಕ್ಷದ ಮುಖಂಡರನ್ನು ಭೇಟಿಯಾಗಿ ಪತ್ರ ಕೊಟ್ಟು ಬಂದಿದ್ದಾರೆ. 4 ಕೋಟಿ ರೂ. ಕೆಲಸ ಮಾಡಿದ್ದೇನೆ. ಸಚಿವ ಈಶ್ವರಪ್ಪ ಅವರ ಕಡೆಯವರು ಕಮಿಷನ್ ಕೇಳಿದ್ದಾರೆ ಎಂದು ಆರೋಪಿಸಿದ್ದರು. ಹಣ ಖರ್ಚಾಗಿದ್ದು ತಾವು ಬಡತನದಲ್ಲಿದ್ದೇನೆ ಎಂದಿದ್ದರು. ಇಂತಹ ಪರಿಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ದೆಹಲಿಗೆ ಹೋಗಲು ಹಣ ಕೊಟ್ಟವರು ಯಾರು ಅನ್ನುವುದು ಈಗ ಗೊತ್ತಾಗಬೇಕಿದೆ ಎಂದು ಈಶ್ವರಪ್ಪ ತಿಳಿಸಿದರು.
ಘಟನೆ ಸಂಬ0ಧ ಕೇಂದ್ರದ ನಾಯಕರು ಈತನಕ ಕರೆ ಮಾಡಿಲ್ಲ. ನಾಳೆ ಆಥವಾ ನಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮಾಹಿತಿ ನೀಡುತ್ತೇನೆ. ನಮ್ಮ ಇಲಾಖೆ ಮುಖ್ಯ ಕಾರ್ಯದರ್ಶಿ ಅತಿಕ್ ಅಹಮದ್ ಅವರು ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಂತೋಷ್ ಪಾಟೀಲ್ ನಡೆಸಿದ ಕಾಮಗಾರಿಗಳ ವಿವರ ನೀಡುವಂತೆ ಕೇಳಿದ್ದಾರೆ. ಅದು ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕರೆ ಮಾಡಿ ಮಾತನಾಡಿದರು. ನಿಮ್ಮ ಪಕ್ಷದವರೇ ಅಥವಾ ಬೇರೆಯವರಾರೋ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿಸಿದರು. ಷಡ್ಯಂತ್ರ ಎಂದು ಕುಮಾರಸ್ವಾಮಿ ಅವರು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ ತಿಳಿಸಿದ್ದೇನೆ ಎಂದು ಹೇಳಿದರು.
ನನ್ನ ರಾಜೀನಾಮೆ ಪಡೆಯಲು ಕಾಂಗ್ರೆಸ್ ಮುಖಂಡರು ಅರ್ಜೆಂಟ್ನಲ್ಲಿದ್ದಾರೆ. ಬಹಳ ಬೇಗ ಮುಖ್ಯಮಂತ್ರಿಯಾಗಬೇಕು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಸ್ಪರ್ಧೆಗೆ ಬಿದ್ದಿದ್ದಾರೆ. ಅದರೆ ಈ ಜನ್ಮದಲ್ಲಿ ಅವರು ಸಿಎಂ ಆಗುವುದಿಲ್ಲ ಎಂದು ಈಶ್ವರಪ್ಪ ಟೀಕಿಸಿದರು.
ವಿಧಾನ ಪರಿಷತ್ ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಹಲವು ಪ್ರಮುಖರು ಸುದ್ದಿಗೋಷ್ಠಿಯಲ್ಲಿದ್ದರು.
Varthajala daily, Bengaluru

0 Comments