ಬೆಂಗಳೂರು, ಏ.6- ವಿದ್ಯುತ್, ಅಡುಗೆ ಅನಿಲ, ಪೆಟ್ರೋಲ್-ಡೀಸೆಲ್, ಖಾದ್ಯ ತೈಲ ಬೆಲೆ ಏರಿಕೆಯಿಂದ ಶ್ರೀಸಾಮಾನ್ಯ ತತ್ತರಿಸಿರುವಾಗಲೇ ಹಾಲಿನ ದರ ಏರಿಕೆಯ ಬಿಸಿ ಸದ್ಯದಲ್ಲಿ ನಾಡಿನ ಜನರಿಗೆ ತಟ್ಟಲಿದ್ದು, ಸದ್ಯದಲ್ಲೇ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.
ವಿದ್ಯುತ್ ದರ ಏರಿಕೆಯಾದ ಬೆನ್ನಲ್ಲೆ ಹಾಲಿನ ದರವೂ ಏರಿಕೆಯಾಗುವ ಸಾಧ್ಯತೆಗಳಿದ್ದು, ಪ್ರತಿ ಲೀಟರ್ ಹಾಲಿನ ದರವನ್ನು 5 ರೂ. ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ. ಆದರೆ, ಸರ್ಕಾರ 5 ರೂ. ದರ ಏರಿಕೆಗೆ ಒಪ್ಪುವ ಸಾಧ್ಯತೆಗಳು ಕಡಿಮೆ ಇದ್ದು, ಹಾಲಿನ ಬೆಲೆ ಲೀಟರ್ಗೆ ಕನಿಷ್ಠ 2 ರೂ. ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ. ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ದರ ಏರಿಕೆ ಬಗ್ಗೆ ಕಳೆದ 3-4 ತಿಂಗಳಿAದ ಕೆಎಂಎಫ್ ಸರ್ಕಾರದ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸಿತ್ತಾದರೂ ಸರ್ಕಾರ ದರ ಏರಿಕೆಗೆ ಒಪ್ಪಿರಲಿಲ್ಲ. ಆದರೆ, ವಿದ್ಯುತ್ ದರ ಏರಿಕೆಯಾದ ಬೆನ್ನಲ್ಲೆ ಹಾಲಿನ ದರವನ್ನೂ ಏರಿಕೆ ಮಾಡಬೇಕೆಂದು ರಾಜ್ಯದ 14 ಹಾಲು ಒಕ್ಕೂಟಗಳು ಕರ್ನಾಟಕ ಹಾಲು ಮಹಾ ಮಂಡಳದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮತ್ತೆ ಮನವಿ ಮಾಡಿವೆ. ಹಾಲು ಒಕ್ಕೂಟಗಳ ಮನವಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ಭೇಟಿ ಮಾಡಲು ಹಾಲು ಮಹಾಮಂಡಳಿಯ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಂದಾಗಿದ್ದು, ಇನ್ನು 3-4 ದಿನಗಳಲ್ಲಿ ಎಲ್ಲ ಹಾಲು ಒಕ್ಕೂಟಗಳ ಅಧ್ಯಕ್ಷರ ನಿಯೋಗದೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಹಾಲು ದರ ಏರಿಕೆಯ ಪ್ರಸ್ತಾವವನ್ನು ಸಲ್ಲಿಸಲು ಕೆಎಂಎಫ್ ಅಧ್ಯಕ್ಷರು ತೀರ್ಮಾನಿಸಿದ್ದಾರೆ. ಎಲ್ಲ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ 5ರೂ. ಏರಿಕೆ ಮಾಡುವಂತೆ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅವರಿಗೆ ಪ್ರಸ್ತಾವನೆ ಸಲ್ಲಿಸಿ ಈ ಬಗ್ಗೆ ಹಾಲು ಒಕ್ಕೂಟಗಳ ಅಧ್ಯಕ್ಷರುಗಳು ಚರ್ಚೆ ಸಹ ನಡೆಸಿದ್ದಾರೆ.
Varthajala Daily, Bengaluru

0 Comments