Ticker

6/recent/ticker-posts

Ad Code

Responsive Advertisement

ಕಷ್ಟದಲ್ಲಿರುವ ಜನರಿಗೆ ಸರ್ಕಾರದಿಂದ ಕರೆಂಟ್‌ ಶಾಕ್: ಪೃಥ್ವಿ ರೆಡ್ಡಿ

ಬೆಲೆ ಏರಿಕೆ, ಉದ್ಯೋಗ ನಷ್ಟ ಹಾಗೂ ಲಾಕ್‌ಡೌನ್‌ ಸಂಕಷ್ಟದಿಂದ ತತ್ತರಿಸಿರುವ ಜನರಿಗೆ ವಿದ್ಯುತ್‌ ದರ ಏರಿಕೆ ಮೂಲಕ ರಾಜ್ಯ ಸರ್ಕಾರವು ಕರೆಂಟ್‌ ಶಾಕ್‌ ನೀಡುತ್ತಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, “ಕಳೆದ ಒಂದೂವರೆ ವರ್ಷದಲ್ಲಿ ವಿದ್ಯುತ್‌ ದರವನ್ನು ಮೂರನೇ ಸಲ ಏರಿಕೆ ಮಾಡಲಾಗುತ್ತಿದೆ. ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಅತಿಹೆಚ್ಚು ವಿದ್ಯುತ್‌ ಉತ್ಪಾದನೆ ಮಾಡುತ್ತಿದೆ. ಆದರೂ ಇಲ್ಲಿ ಪದೇಪದೆ ಬೆಲೆ ಏರಿಕೆ ಮಾಡಿ ಜನಾಸಮಾನ್ಯರನ್ನು ಹೈರಾಣಾಗಿಸಲಾಗುತ್ತಿದೆ. ಅತೀ ಕಡಿಮೆ ವಿದ್ಯುತ್‌ ಉತ್ಪಾದನೆ ಮಾಡುವ, ಆಮ್‌ ಆದ್ಮಿ ಪಾರ್ಟಿ ಆಡಳಿತವಿರುವ ದೆಹಲಿಯಲ್ಲಿ ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ ತನಕ ಉಚಿತ ವಿದ್ಯುತ್‌ ನೀಡಲು ಸಾಧ್ಯವಾಗಿದೆ. ನಮ್ಮ ರಾಜ್ಯದಲ್ಲಿ ದರ ಏರಿಕೆಗೆ ಕಡಿವಾಣ ಹಾಕಲೂ ಕೂಡ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.

“ಕೋವಿಡ್‌ನಿಂದಾಗಿ 2 ವರ್ಷಗಳ ಕಾಲ ಶೇ. 40ಕ್ಕಿಂತಲೂ ಹೆಚ್ಚಿನ ಕೈಗಾರಿಕೆಗಳು ಸ್ಥಗಿತಗೊಂಡಿದ್ದವು. ಅವು ವಿದ್ಯುತ್ ಬಳಸದಿದ್ದರೂ ಕನಿಷ್ಠ ವಿದ್ಯುತ್‌ ದರವನ್ನು ಪಾವತಿಸಿದ್ದವು. ಇದರಿಂದಾಗಿ 2 ವರ್ಷಗಳ ಕಾಲ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಉಚಿತವಾಗಿ ಹಣ ಲಭಿಸಿದೆ. ವಿದ್ಯುತ್‌ ಪೂರೈಕೆಯಲ್ಲಿ ಅನಗತ್ಯ ವೆಚ್ಚಗಳ ಏರಿಕೆ, ಸರಬರಾಜು ನಿರ್ವಹಣೆಯಲ್ಲಿ ನಿರ್ಲಕ್ಷ್ಯ, ಸರ್ಕಾರಿ ಸಂಸ್ಥೆಗಳಿಂದ ಬರಬೇಕಾದ 511 ಕೋಟಿ ರೂ. ಶುಲ್ಕ ವಸೂಲಿಯಲ್ಲಿ ವಿಫಲ ಸೇರಿದಂತೆ ಅನೇಕ ಕಾರಣಗಳಿಂದ ವಿದ್ಯುತ್‌ ಸರಬರಾಜು ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಸರ್ಕಾರದ ತಪ್ಪಿನಿಂದಾಗುತ್ತಿರುವ ಈ ನಷ್ಟವನ್ನು ಗ್ರಾಹಕರ ಮೇಲೆ ಹೊರಿಸುವುದು ಸರಿಯಲ್ಲ” ಎಂದು ಪೃಥ್ವಿ ರೆಡ್ಡಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿ ಮುಖಂಡರಾದ ಪ್ರಕಾಶ್‌ ನೆಡುಂಗಡಿ ಮಾತನಾಡಿ, “ರಾಜ್ಯದ ಜನರಿಂದ ದುಬಾರಿ ಶುಲ್ಕ ಪಡೆಯುವ ರಾಜ್ಯ ಸರ್ಕಾರವು ಹೊರರಾಜ್ಯಗಳಿಗೆ ಮಾತ್ರ ಅಗ್ಗದ ದರದಲ್ಲಿ ವಿದ್ಯುತ್‌ ಪೂರೈಸುತ್ತಿದೆ. ಯೂನಿಟ್‌ಗೆ ಕೇವಲ 2.38 ರೂಪಾಯಿಯಂತೆ ಬೇರೆ ರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡಲಾಗುತ್ತಿದೆ. ಜೊತೆಗೆ, ಕೇಂದ್ರ ಸರ್ಕಾರದ ವಿದ್ಯುತ್‌ ಉತ್ಪಾದನಾ ಘಟಕಗಳಿಂದ ರಾಜ್ಯವು ವಿದ್ಯುತ್‌ ಖರೀದಿಸದಿದ್ದರೂ ನಿರ್ದಿಷ್ಟ ಶುಲ್ಕವನ್ನು ಪಾವತಿಸಬೇಕಾಗಿದೆ. ಇದರಿಂದಾಗಿ ಗ್ರಾಹಕರು ಹೆಚ್ಚು ದರ ಪಾವತಿಸಬೇಕಾಗಿದೆ. ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರವಾಗುತ್ತಿದ್ದು, ಅದಾನಿ ಪವರ್‌ ಲಿಮಿಟೆಡ್‌ ಭಾಗವಾಗಿರುವ ಉಡುಪಿ ಪವರ್‌ ಲಿಮಿಟೆಡ್‌ಗೆ 2021-22ರಲ್ಲಿ ಶೇ. 40ರಷ್ಟು ಅಧಿಕ, ಅಂದರೆ ಯೂನಿಟ್‌ 6.80 ರೂಪಾಯಿಯನ್ನು ಸರ್ಕಾರ ನೀಡಿದೆ” ಎಂದು ಆರೋಪಿಸಿದರು.

Post a Comment

0 Comments

Ad Code

Responsive Advertisement