ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದಿನಾಂಕ 06-04-2022 ರಂದು ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 2022ನೆಯ ಸಾಲಿನ “ಡಾ. ರಾಜಕುಮಾರ್ ಸಂಸ್ಕøತಿ ದತ್ತಿ ಪ್ರಶಸ್ತಿ”ಗೆ ಚರ್ತುಭಾಷಾ ತಾರೆ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯ ಮೊತ್ತ ರೂ. 25,000 (ಇಪ್ಪತ್ತೈದು ಸಾವಿರ ಮಾತ್ರ) ನಗದು. ಇದರ ಜೊತೆಗೆ ಸ್ಮರಣಿಕೆÉ ಹಾಗೂ ಫಲ ತಾಂಬೂಲಗಳನ್ನೂ ಒಳಗೊಂಡಿರುತ್ತದೆ.
ಡಾ.ಬಿ.ಸರೋಜಾದೇವಿರವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಇವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು. ಬಿ.ಸರೋಜಾದೇವಿ ಅಂದರೆ ಕನ್ನಡಿಗರಿಗೆ ನೆನಪಾಗುವುದು ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ. ನ್ಯಾಯವೇ ದೇವರು ಚಿತ್ರದ ಆಕಾಶವೇ ಬೀಳಲಿ ಮೇಲೆ.... ಹಾಡು ಎಲ್ಲರ ಮನೆ ಮನಗಳಲ್ಲಿಯೂ ಇಂದಿಗೂ ಗುನುಗುತ್ತಿದೆ. ಭಾಗ್ಯವಂತರು ಚಿತ್ರದಲ್ಲಿನ ಪಾರ್ವತಿಯ ಪಾತ್ರದ ಅಭಿನಯ ಎಂದಿಗೂ ಜೀವಂತವಾದದ್ದು, ಅರವತ್ತರ ದಶಕದಲ್ಲಿ, ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು ಇಂದಿಗೂ ಪುಳಕ ಹುಟ್ಟಿಸುತ್ತವೆ. ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ ಅವರ ಮಹಾಕವಿ ಕಾಳಿದಾಸ ಚಿತ್ರದ ಮೂಲಕ 1955ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಿ. ಸರೋಜಾದೇವಿ ಅವರ ಮಲ್ಲಮ್ಮನ ಪವಾಡ, ಬಬ್ರುವಾಹನ ಚಿತ್ರದಲ್ಲಿನ ಚಿತ್ರಾಂಗಧೆಯ ಪಾತ್ರ, ಶ್ರೀನಿವಾಸ ಕಲ್ಯಾಣ ಇನ್ನು ಮುಂತಾದ ಚಿತ್ರಗಳ ಅಮೋಘ ಅಭಿನಯ ಕೌಶಲದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು.
ಡಾ. ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮೀಕಪೂರ್, ಸುನೀಲ್ ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಆಯ್ಕೆ ಸಮಿತಿಯ ಸಭೆಯಲ್ಲಿ ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಲಾಯಿತು. ಚಲನಚಿತ್ರ ನಿರ್ಮಾಪಕರಾದ ಶ್ರೀ ಎಸ್.ಎ. ಚಿನ್ನೇಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ಪಾಂಡು ಅವರುಗಳು ಉಪಸ್ಥಿತರಿದ್ದರು.
ಬಿ. ಸರೋಜಾದೇವಿ ಅವರಿಗೆ ಸಂದ ಪ್ರಶಸ್ತಿಗಳು :
1992ರಲ್ಲಿ ಕೇಂದ್ರ ಸರಕಾರದ 'ಪದ್ಮಭೂಷಣ ಪ್ರಶಸ್ತಿ', 1969ರಲ್ಲಿ ಕೇಂದ್ರ ಸರಕಾರದ ಪದ್ಮಶ್ರೀ ಪಡೆದಿದ್ದಾರೆ., 1969ರಲ್ಲಿ ರಷ್ಯ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾದಲ್ಲಿ ನಡೆದ `4ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಭಾಗವಹಿಸಿದ್ದರು. 2006ನೇ ಸಾಲಿನ 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ'ದಲ್ಲಿ 'ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್' ರಿಂದ 'ಜೀವಿತಾವಧಿ ಸಾಧನೆ ಪ್ರಶಸ್ತಿ'ಯನ್ನು ಪಡೆದಿದ್ದಾರೆ.

0 Comments