Ticker

6/recent/ticker-posts

Ad Code

Responsive Advertisement

Flash News: ಹೆಣ್ಣು ಮಕ್ಕಳ ಶಿಕ್ಷಣದ ಕುರಿತ ಹೇಳಿಕೆ ತಿರುಚಲಾಗಿದೆ: ಹೆಚ್‌ಡಿಕೆ ಬೇಸರ

ಹಾಸನ, ಮಾ.18: ಹಿಜಾಬ್ ಬಗ್ಗೆ ನನ್ನ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ತಿರುಚಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾಸರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಟಿ.ಮಾಯಗೌಡನಹಳ್ಳಿ ಗ್ರಾಮದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳು; “ನಾನು ಹೇಳಿದ್ದು, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪಿಗೆ ನಾವೆಲ್ಲಾ ತಲೆಬಾಗಿ ಸ್ವೀಕರಿಸಬೇಕು ಎಂದು. ಆದರೆ, ಈ ನನ್ನ ಹೇಳಿಕೆಯನ್ನು ಗೊಂದಲ ಮೂಡಿಸುವಂತೆ ತಿರುಚಲಾಗಿದೆ” ಎಂದರು.

ಸರಕಾರಿ ಶಾಲೆಗಳಲ್ಲಿ ಪಿಯುಸಿವರೆಗೆ ಸಮವಸ್ತ್ರ ಇದೆ. ಈ ವಿಷಯದಲ್ಲಿ ಗೊಂದಲ ನಿವಾರಣೆಗೆ ಪ್ರಯತ್ನ ಮಾಡಬೇಕು. ಹಿಂದೆ ಮಹಿಳೆಯರ ವಿಚಾರದಲ್ಲಿ ಸಾಕಷ್ಟು ಮೌಢ್ಯತೆ ಇತ್ತು. ಶಿಕ್ಷಣ ಪಡೆದಿದ್ದರಿಂದಲೇ ಅಂತಹ ಮೌಢ್ಯಗಳು ನಿವಾರಣೆಯಾದವು. ಈಗ ರಾಜ್ಯದಲ್ಲಿ ಹಿಜಾಬ್ ವಿಚಾರ ಇಟ್ಟುಕೊಂಡು ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿ, ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡುವ ಬಗ್ಗೆ ಆಲೋಚನೆ ಮಾಡಿ, ಶಾಲಾ ಮಕ್ಕಳು ಹಾಲಿನಂಥ ಪರಿಶುದ್ಧ ಮನಸ್ಸಿನವರು, ಅದನ್ನ ಕಲುಷಿತ ಮಾಡಬೇಡಿ ಎಂದಷ್ಟೇ ಹೇಳಿದ್ದೆ ಎಂದು ಅವರು ತಿಳಿಸಿದರು. 

ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ. ಸರಕಾರ ಆರೂವರೆ ಕೋಟಿ ಜನರಿಗಾಗಿ ಇದೆ. ಹಾಗಾಗಿ ಅವರೆಲ್ಲರ ರಕ್ಷಣೆ ಸರಕಾರದ್ದೇ. ಸರಕಾರವೇ ಕೊಟ್ಟ ಸಮವಸ್ತ್ರದ ದುಪ್ಪಟ್ಟವನ್ನು ಹೆಣ್ಣು ಮಕ್ಕಳು ತಲೆ ಮೇಲೆ‌ ಹಾಕಿಕೊಳ್ಳಲಿ ಬಿಡಿ. ಅದನ್ನು ಅವರು ನೆರಳಿಗಾಗಿಯೋ ಅಥವಾ ಧೂಳಿನಿಂದ ರಕ್ಷಣೆ ಪಡೆಯಲು ಹಾಕೊಳ್ಳುತ್ತಾರೋ ಏನೋ ಗೊತ್ತಿಲ್ಲ. ಆದರೆ, ಅದರಲ್ಲಿ ಕೊಂಚ ರಿಯಾಯಿತಿಯನ್ನು ಸರಕಾರ ಕೊಟ್ಟರೆ ಒಳ್ಳೆಯದು ಎಂದರು ಅವರು.

ಮಹಾತ್ಮ ಗಾಂಧೀಜಿ ಅವರ ಧರ್ಮಪತ್ನಿ ಕಸ್ತೂರಿ ಬಾ ಅವರು, ರೋಗಿಗಳ ಪಾಲಿನ ದೇವತೆಯಾಗಿದ್ದ ಮದರ್ ತೆರೆಸಾ ಅವರೂ ತಲೆಯ ಮೇಲೆ ಸೆರಗು ಹಾಕುತ್ತಿರಲಿಲ್ಲವೇ? ಅದು ಮೊದಲಿಂದಲೂ ಬೆಳೆದುಕೊಂಡು ಬಂದಿದೆ. ಅದನ್ನೇ ಯಾಕೆ ಈಗ ದೊಡ್ಡದು ಮಾಡ್ತೀರಾ? ಸರಕಾರವೇ ಈ ಬಗ್ಗೆ ರಾಜಿ ಮಾಡಲು ಮುಂದಾಗಲಿ ಎಂದು ಅವರು ಸಲಹೆ ಮಾಡಿದರು.

ಇದರ ಹಿಂದೆ ಕಾಣದ ಕೈಗಳಿವೆ ಎಂದು ಹೈಕೋರ್ಟ್ ಹೇಳಿದೆ. ಆ ಕಾಣದ ಕೈಗಳು ಯಾವು? ಸರಕಾರ ಮೊದಲು ಅವುಗಳನ್ನು ಪತ್ತೆ ಹಚ್ಚಿ ಜನರ ಮುಂದೆ ನಿಲ್ಲಿಸಬೇಕು ಎಂದು ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಸರಕಾರವನ್ನು ಒತ್ತಾಯ ಮಾಡಿವೆ.

ಹತ್ಯಾಕಾಂಡಗಳು ಮಹಾಭಾರತ ಕಾಲದಿಂದಲೂ ನಡೆದುಕೊಂಡು ಬಂದಿವೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ದೇಶ ವಿಭಜನೆ ಆದ ಸಂದರ್ಭದಲ್ಲಿ 20 ಲಕ್ಷ ಕುಟುಂಬಗಳ ಬಲಿದಾನ ಆಗಿದೆ. ದೇಶದ ಹಿಂದಿನ ಚರಿತ್ರೆ ನೋಡಿದಾಗ ಮತ್ತೆ ಇಂತಹ ರಕ್ತಪಾತವೇ ಮುಂದುವರಿದುಕೊಂಡು ಬರಬೇಕಾ? ಎಂದು ಅವರು ಪ್ರಶ್ನೆ ಮಾಡಿದರು.

ʼಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು; ನಿರ್ದೇಶಕರು ಕಾಶ್ಮೀರಿ ಪಂಡಿತರ ನೋವುಗಳ ಬಗ್ಗೆ ಸಿನಿಮಾ ಮಾಡಿದ್ದಾರೆ. ಆದರೆ, ಅದು ಎಷ್ಟರಮಟ್ಟಿಗೆ ನಡೆದಿದೆ ನಾನು ಹೋಗಿ ನೋಡಿಲ್ಲ. ಆ ಸಿನಿಮಾವನ್ನು ಭಾವನಾತ್ಮಕವಾಗಿ ಸಕ್ಸಸ್ ಆಗುವುದಕ್ಕೆ ಜನರ ಹೃದಯಕ್ಕೆ ಹತ್ತಿರ ಆಗುವಂತೆ ಮಾಡುತ್ತಾರೆ ಎಂದರಲ್ಲದೆ; ಗೋದ್ರಾದಲ್ಲಿ ಗರ್ಭಿಣಿ ಹೆಣ್ಣು ಮಕ್ಕಳ ಹೊಟ್ಟೆಗೆ ತ್ರಿಶೂಲದಲ್ಲಿ ಚುಚ್ಚಿ ಮಗುವನ್ನು ಹೊರತೆಗೆದ ಕೃತ್ಯ ಕೂಡ ನಡೆದು ಹೋಗಿದೆ. ಇಂತವನ್ನೆಲ್ಲ ಮತ್ತೆ ಮುಂದುವರಿಸಿಕೊಂಡು ಹೋಗಬೇಕಾ? ಇದು ಆಗಬಾರದು ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ನಾವೇನಾದರೂ ನಿಜ ಹೇಳಲು ಹೋದರೆ ಅದನ್ನು ತಿರುಚುತ್ತಾರೆ. ಏನು ಮಾಡೋದು? ಈಗ ಜನರ ಅಭಿವೃದ್ಧಿ ಕೆಲಸದ ಮೇಲೆ ಯಾರು ಮತ ಕೇಳುತ್ತಿಲ್ಲ. ಅವರವರದೇ ಅದ ಅಜೆಂಡಾ ಇಟ್ಟುಕೊಂಡಿದ್ದಾರೆ. ಭಾವನಾತ್ಮಕ ವಿಚರಗಳ ಮೇಲೆ ಮತ ಕೇಳಲು ಹೊರಟಿದ್ದಾರೆ. ಕೊನೆಗೆ ಇದರಿಂದ ಕಷ್ಟಕ್ಕೆ ಸಿಲುಕುವುದು ಅಮಾಯಕ ಜನರು. 

ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಂಥ ಯಾವ ವಂಶ ಕೂಡ ಉಳಿದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಜನರು ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾರ್ಮಿಕವಾಗಿ ಹೇಳಿದರು.

Varthajala, Daily, Bengaluru

Post a Comment

0 Comments

Ad Code

Responsive Advertisement