ರಾಜ್ಯದ ಅಭಿವೃದ್ಧಿಗೆ ಪೂರಕವಾಗದಿರುವ ಹಾಗೂ ಸಾಮಾನ್ಯ ಜನರಿಗೆ ಹೆಚ್ಚು ಲಾಭವಾಗದಂತಹ , ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜನತೆಗೆ ಮಣ್ಣೆರಚುವ ಆಯವ್ಯಯವನ್ನು ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿ, “ದೆಹಲಿ ಸಿಎಂ ಕೇಜ್ರಿವಾಲ್ ಸರ್ಕಾರದ “ಮೊಹಲ್ಲಾ ಕ್ಲಿನಿಕ್” ಮಾದರಿಯಲ್ಲಿ ಬೆಂಗಳೂರಿನಲ್ಲಿ ಕೂಡ “ನಮ್ಮ ಕ್ಲಿನಿಕ್” ತೆರೆಯುವುದಾಗಿ ಬಜೆಟ್ನಲ್ಲಿ ಘೋಷಿಸಿರುವುದು ಸ್ವಾಗತಾರ್ಹ. ಆದರೆ 40% ಕಮಿಷನ್ ಕಳಂಕವನ್ನು ಹೊತ್ತಿರುವ ಸರ್ಕಾರ ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರುತ್ತದೆ ಎಂಬುದು ಪ್ರಶ್ನಾರ್ಹ. ಅದನ್ನು ಬಿಟ್ಟರೆ, ಬಜೆಟ್ನಲ್ಲಿ ಹೊಸತನವಿಲ್ಲ. ಈಗಿನ ಕಾಲದ ಅಗತ್ಯತೆಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸಿಎಂ ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಆಸ್ಪತ್ರೆಗಳು ಹಾಗೂ ಶಾಲೆಗಳ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಆದ್ಯತೆಯನ್ನೇ ನೀಡಿಲ್ಲ. ಹಿಂದಿನ ಸರ್ಕಾರಗಳ ಹಳಸಲು ಬಜೆಟ್ಗಳನ್ನೇ ಕೆಲವು ತಿದ್ದುಪಡಿಗಳೊಂದಿಗೆ ಮಂಡಿಸಿದಂತಿದೆ" ಎಂದು ಅಭಿಪ್ರಾಯಪಟ್ಟರು.
“2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಈ ಬಜೆಟ್ನಲ್ಲಿ ರೈತರ ಆದಾಯಕ್ಕೆ ಸಂಬಂಧಿಸಿ ʻದ್ವಿಗುಣʼ ಪದದ ಬದಲು ʻಹೆಚ್ಚಳʼ ಪದವನ್ನು ಬಳಸಿದ್ದಾರೆ. ಬಿಜೆಪಿಯ ಘೋಷಣೆಗಳೆಲ್ಲ ಕೇವಲ ಚುನಾವಣೆ ಗೆಲ್ಲಲು ಸೀಮಿತ ಹಾಗೂ ಅದನ್ನು ಕಾರ್ಯರೂಪಕ್ಕೆ ತರಲು ಅವರೇ ಬದ್ಧರಾಗಿರುವುದಿಲ್ಲ ಎಂಬುದು ಇದರಿಂದಲೇ ತಿಳಿಯುತ್ತದೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ದೆಹಲಿ ಸರ್ಕಾರದ ಮೊಹಲ್ಲಾ ಕ್ಲಿನಿಕ್ ಯೋಜನೆಯನ್ನು ಮಾತ್ರ ರಾಜ್ಯ ಸರ್ಕಾರ ಕಾಪಿ ಪೇಸ್ಟ್ ಮಾಡಿದೆ. ಶಾಲೆಗಳ ಅಭಿವೃದ್ಧಿ, ಮಹಿಳೆಯರಿಗೆ ಬಸ್ನಲ್ಲಿ ಉಚಿತ ಪ್ರಯಾಣ, 200 ಯೂನಿಟ್ವರೆಗೆ ಉಚಿತ ವಿದ್ಯುತ್, ಉಚಿತ ಕುಡಿಯುವ ನೀರು ಮುಂತಾದ ಎಲ್ಲ ಯೋಜನೆಗಳನ್ನು ಬೊಮ್ಮಾಯಿಯವರು ಕಾಪಿ ಮಾಡಬೇಕಿತ್ತು. ಹಿಂದಿನ ಬಜೆಟ್ನಲ್ಲಿ ಘೋಷಿಸಿದ ಹಲವು ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಬಿಜೆಪಿ ವಿಫಲವಾಗಿರುವಾಗ, ಈಗಿನ ಆಯವ್ಯಯವನ್ನು ನಂಬುವುದಾದರೂ ಹೇಗೆ?” ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದರು.
0 Comments