ಬೆಂಗಳೂರು,ಮಾ.22- ಗುಜರಿಬಾಬು ಒತ್ತುವರಿ ಮಾಡಿದ್ದ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಮೀಸಲಿರಿಸಲಾಗಿದ್ದ 35 ಕೋಟಿ ಮೌಲ್ಯದ 2.21 ಎಕರೆ ಜಮೀನನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬಿಬಿಎಂಪಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ವಿಧಾನಪರಿಷತ್ ಚುನಾವಣೆಗೆ ಸ್ರ್ಪಧಿಸಿದ್ದ ಯೂಸಫ್ ಷರೀಫ್ ಅಲಿಯಾಸ್ ಗುಜರಿ ಬಾಬು ಎಂಬಾತ ಯಲಹಂಕದ ಶ್ರೀನಿವಾಸಪುರದ ಸರ್ವೆ ನಂ.22ರಲ್ಲಿ ಇರುವಂತಹ ಸುಮಾರು 35 ಕೋಟಿ ಮೌಲ್ಯದ 2.21 ಎಕರೆ ಜಮೀನನ್ನು ಕಬಳಿಕೆ ಮಾಡಿದ್ದಾನೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಅವರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಗುಜರಿ ಬಾಬು ಅತಿಕ್ರಮಣ ಮಾಡಿಕೊಂಡಿರುವ ಜಮೀನಿನಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲು ಮೀಸಲಿರಿಸಲಾಗಿತ್ತು. ಆದರೆ ಗುಜರಿ ಬಾಬು ನಕಲಿ ದಾಖಲೆ ಸೃಷ್ಟಿಸಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಎನ್.ಆರ್. ರಮೇಶ್ ದಾಖಲೆಗಳನ್ನು ನೀಡಿದ್ದರು.
ಅವರ ದೂರಿನ ಮೇರೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಯಲಹಂಕ ಜಂಟಿ ಆಯುಕ್ತ, ತಹಸೀಲ್ದಾರ್ ಹಾಗೂ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತರಿಗೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದರು.
ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗುಜರಿ ಬಾಬು ವಶದಲ್ಲಿದ್ದ 35 ಕೋಟಿ ಮೌಲ್ಯದ ಜಮೀನು ಸರ್ಕಾರಿ ಜಮೀನು ಎಂಬುದು ದೃಢಪಟ್ಟಿದೆ. ಹೀಗಾಗಿ ಗುಜರಿ ಬಾಬು ವಶದಲ್ಲಿದ್ದ 2.21 ಎಕರೆ ಜಮೀನನ್ನು ಬಿಬಿಎಂಪಿ ಅಧಿಕಾರಿಗಳು ವಶಕ್ಕೆ ಪಡೆದು ಬೇಲಿ ಹಾಕಿದ್ದಾರೆ.
0 Comments