Ticker

6/recent/ticker-posts

Ad Code

Responsive Advertisement

ಮಾಜಿ ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರದ ಸರ್ಕಾರಿ ಶಾಲೆಗಳ ಗತಿ ಕೇಳುವವರಿಲ್ಲ

ಬಾಗಲಕೋಟೆ: ಅದು ಹೇಳಿ ಕೇಳಿ ಮಾಜಿ ಸಿಎಂ ಅವರೊಬ್ಬರ ಸ್ವಕ್ಷೇತ್ರದ ಸರ್ಕಾರಿ ಶಾಲೆ, ಈ ಶಾಲೆಯಲ್ಲಿ 100ಕ್ಕೂ ಅಧಿಕ ಮಕ್ಕಳು ಓದುತ್ತಿದ್ದಾರೆ, ದುರಾದೃಷ್ಟ ಅಂದ್ರೆ ಈ ಮಕ್ಕಳು ಪಾಠ ಕೇಳಬೇಕು ಅಂದ್ರೆ ತಗಡಿನ ಶೆಡ್​ಗಳೇ ಗತಿಯಾಗಿವೆ.

ಕಂಗೆಡುವ ಬಿಸಿಲಿರಲಿ, ಗುಡುಗು ಸಹಿತ ಮಳೆ ಇರಲಿ, ಎಲ್ಲವನ್ನ ಸಹಿಸಿ ಮಕ್ಕಳು ತಗಡಿನ ಶೆಡ್​ಗಳಲ್ಲಿಯೇ ಓದಬೇಕು. ಇದ್ರಿಂದ ಗ್ರಾಮಸ್ಥರು ಮತ್ತು ಮಕ್ಕಳು ತೀವ್ರ ಬೇಸತ್ತು ಹೋಗಿದ್ದು, ಸಮಸ್ಯೆ ಬಗೆಹರಿಸುವಂತೆ ಗೋಗರೆಯುತ್ತಿದ್ದಾರೆ.

ಹೌದು, ಬಾಗಲಕೋಟೆ (Bagalkote) ಜಿಲ್ಲೆಯ ಬಾದಾಮಿ ತಾಲೂಕಿನ (badami taluk ) ತಳಕವಾಡ ಗ್ರಾಮದ (Talakavada village) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಗೋಳಿನ ಕಥೆ ಇದು. ಮಾಜಿ ಸಿಎಂ ಸಿದ್ದರಾಮಯ್ಯನವರ (siddaramaiah) ಸ್ವಕ್ಷೇತ್ರವಾಗಿರೋ ತಳಕವಾಡ ಗ್ರಾಮದಲ್ಲಿ 1 ರಿಂದ 8ನೇ ತರಗತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಬರೋಬ್ಬರಿ 114 ಮಕ್ಕಳು ನಿತ್ಯ ಕಲಿಕೆಯಲ್ಲಿ ತೊಡುಗಿತ್ತಾರೆ. ಆದರೆ ಈ ಶಾಲೆಯ ಬಹುತೇಕ ಕಟ್ಟಡಗಳು ಶಿಥಿಲಗೊಂಡಿದ್ದು, ಎಲ್ಲೆಂದರಲ್ಲಿ ತರಗತಿಯ ಗೋಡೆಗಳು ಸೇರಿದಂತೆ ಮೇಲ್ಚಾವಣಿ ಬಿದ್ದು ಹೋಗಿವೆ.

ಇನ್ನು ತಳಕವಾಡ ಗ್ರಾಮ 2009 ಮತ್ತು 2019ರಲ್ಲಿ ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ ಶಾಲೆಯೂ ಸಹ ಸಂಪೂರ್ಣ ಜಲಾವೃತವಾಗಿತ್ತು. ಈ ವೇಳೆ ನೀರು ನಿಂತ ಮೇಲೆ ಗೋಡೆಗಳೆಲ್ಲಾ ಬಿದ್ದು ಹೋಗಿದ್ದರಿಂದ ನಂತರದಲ್ಲಿ ಶಾಲಾ ಆವರಣದಲ್ಲಿಯೇ ಶೆಡ್​ ನಿರ್ಮಿಸಿ ಕೊಡಲಾಗಿದೆ. ಹೀಗಾಗಿ ಕಳೆದ ಮೂರು ವರ್ಷದಿಂದ ಬಿರು ಬೇಸಿಗೆ ಮತ್ತು ಬಿರುಗಾಳಿ ಮಳೆ ಬಂದ್ರೂ ಮಕ್ಕಳು ಮಾತ್ರ ಶೆಡ್​​ನಲ್ಲಿ ದಯನೀಯ ಸ್ಥಿತಿಯಲ್ಲಿ ಪಾಠ ಕೇಳುವಂತಾಗಿದ್ದು, ಕೂಡಲೇ ನಮ್ಮೂರಿನ ಶಾಲೆ ಬಗೆಹರಿಸಿ ಎಂದು

ಸಮಸ್ಯೆ ಬಗೆಹರಿಸಿಕೊಡಿ ಅಂತ ವಿದ್ಯಾರ್ಥಿಗಳು ಅಂಗಲಾಚುತ್ತಿದ್ದಾರೆ.

ಇನ್ನು ತಳಕವಾಡ ಶಾಲೆಯು 1942ರಲ್ಲಿ ನಿರ್ಮಾಣವಾದಂತಹ ಶಾಲಾ ಕಟ್ಟಡವಾಗಿದ್ದು, ಈಗೆಲ್ಲಾ ಸಂಪೂರ್ಣ ಶಿಥಿಲಗೊಂಡಿದೆ. ಈ ಮಧ್ಯೆ 2019ರಲ್ಲಿ ಮಲಪ್ರಭಾ ನದಿಗೆ ಸಂಪೂರ್ಣ ಪ್ರವಾಹ ಬಂದಾಗ ಅನೇಕ ಸಂಸ್ಥೆಗಳು ನೆರವಿಗೆ ಬಂದ ಬೆನ್ನಲ್ಲೆ ತಳಕವಾಡ ಗ್ರಾಮದ ಶಾಲೆಯನ್ನು ಸಹ ಕಟ್ಟಿಸಿಕೊಡೋ ಭರವಸೆಯನ್ನ ಖಾಸಗಿ ಸಂಸ್ಥೆಯೊಂದು ನೀಡಿತ್ತು. ಆದರೆ ಅವರು ಸಹ ಈಗ ಕೈಬಿಟ್ಟಿದ್ದು, ಇದರಿಂದ ಗ್ರಾಮಸ್ಥರೆಲ್ಲಾ ಸೇರಿ ತಮ್ಮ ಸ್ವಕ್ಷೇತ್ರದ ಶಾಸಕ , ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ , ಡಿಡಿಪಿಐ, ಇಬಿಓ ಅವರಿಗೆ ಸೇರಿದಂತೆ ಎಲ್ಲರಿಗೂ ಮನವಿ ನೀಡಿ ಸೋತು ಹೋಗಿದ್ದಾರೆ. ಯಾರೂ ಸಹ ಇವರ ಮನವಿಗೆ ಸ್ಪಂದನೆ ನೀಡುತ್ತಿಲ್ಲವಂತೆ. ಈ ಮಧ್ಯೆ ಮಕ್ಕಳು ಬೇಸಿಗೆಯಲ್ಲಿ ಶೆಡ್​ಗಳಲ್ಲಿ ಪಾಠ ಕಲಿಯೋದು ದುಸ್ತರವಾಗಿದ್ದು, ಅತಿಯಾದ ಶೆಕೆಯಿಂದ ಬಳಲುವಂತಾಗಿದೆ. ಹೀಗಾಗಿ ಆದಷ್ಟು ಬೇಗ ನಮ್ಮೂರಿನ ಶಾಲೆಗೆ ಕಟ್ಟಡ ಕಟ್ಟಿಸಿಕೊಡಿ ಅಂತಾ ಗ್ರಾಮದ ವೀರಯ್ಯ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಸ್ವಕ್ಷೇತ್ರಕ್ಕೆ ಕೋಟಿ ಕೋಟಿ ಅನುದಾನ ತರುವ ಮಾಜಿ ಸಿಎಂ ಸಿದ್ದರಾಮಯ್ಯನವರು ತಮ್ಮ ಸ್ವಕ್ಷೇತ್ರದ ತಳಕವಾಡ ಶಾಲೆಯ ಮಕ್ಕಳ ಸ್ಥಿತಿಯನ್ನೊಮ್ಮೆ ನೋಡಿ ಅವರಿಗೆ ಶಾಲಾ ಕಟ್ಟಡ ವ್ಯವಸ್ಥೆ ಮಾಡಿಕೊಡಲಿ ಅನ್ನೋದೆ ನಮ್ಮಯ ಆಶಯ.

Post a Comment

0 Comments

Ad Code

Responsive Advertisement