ಮಧುಗಿರಿ : ತಾಲೂಕಿನ ಪುರವರ ಹೋಬಳಿ ಕೋಡ್ಲಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಗೋವಿಂದನಹಳ್ಳಿ ಗ್ರಾಮದ ಅಂಧ ರವಿಕುಮಾರ್ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಅಕ್ಕಿ ವಿತರಣೆಯಾಗಿಲ್ಲ ಎಂಬ ದೂರಿಗೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸಿದ ಮಧುಗಿರಿ ತಾಲೂಕು ತಹಶೀಲ್ದಾರ್, ಆಹಾರ ಶಿರಸ್ತೇದಾರ್ ಹಾಗೂ ಆಹಾರ ನಿರೀಕ್ಷಕರು ಸೋಮವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ದೂರಿನ ಬಗ್ಗೆ ಪರಿಶೀಲಿಸಿದ್ದಾರೆ.
ಈ ವೇಳೆ ತಹಶೀಲ್ದಾರ್ ಸುರೇಶ್ ಆಚಾರ್ ರವರು ಕೇಳಿದ ಪ್ರಶ್ನೆಗೆ ಅಂಧ ರವಿಕುಮಾರ್ ಮಾತನಾಡುತ್ತಾ ಅಕ್ಕಿಯನ್ನು ಸರಿಯಾಗಿ ವಿತರಣೆ ಮಾಡಿದ್ದು, ಯಾವುದೇ ತೊಂದರೆಯಾಗಿರುವುದಿಲ್ಲ. ಇತ್ತೀಚೆಗೆ ಪಾನ್ ಕಾರ್ಡ್ ಕೆಲಸದ ನಿಮಿತ್ತ ನಾನು ಪುರವರ ಕಂಪ್ಯೂಟರ್ ಸೆಂಟರಿಗೆ ತೆರಳಿದಾಗ ಅಲ್ಲಿದ್ದ ಒಬ್ಬ ವ್ಯಕ್ತಿ ನನ್ನಿಂದ ವಿಡಿಯೋ ಮಾಡಿಸಿ ವಾಟ್ಸಪ್ ನಲ್ಲಿ ಬಿಟ್ಟಿದ್ದಾನೆ. ನಮಗೆ ಯಾವುದೇ ಮೋಸವಾಗಿರುವುದಿಲ್ಲ. ನನ್ನ ತಂದೆ ಅಕ್ಕಿ ತರಲು ಪ್ರತೀ ತಿಂಗಳು ಹೋಗುತ್ತಿದ್ದು, ನಮ್ಮ ಕುಟುಂಬದ ಅಂತ್ಯೋದಯ ಪಡಿತರ ಚೀಟಿಗೆ ಪ್ರತಿ ತಿಂಗಳು 50ಕೆಜಿ ಅಕ್ಕಿಯನ್ನು ನ್ಯಾಯಬೆಲೆ ಅಂಗಡಿಯ ಮಾಲೀಕರು ನೀಡಿರುತ್ತಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ಶಿರಸ್ತೇದಾರ್ ಹೆಚ್.ಆರ್.ಗಣೇಶ್, ಆಹಾರ ನಿರೀಕ್ಷಕ ಹರೀಶ್ ಕುಮಾರ್, ಊರಿನ ಗ್ರಾಮಸ್ಥರು ಹಾಜರಿದ್ದರು.

0 Comments