ಮಧುರೈ, ಮಾರ್ಚ್ 19: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆ ತಮಿಳುನಾಡಿನ ತೌಹೀದ್ ಜಮಾನ್ ಸಂಘಟನೆಯ ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ ಹೈಕೋರ್ಟ್ ನೀಡಿರುವ ಹಿಜಾಬ್ ತೀರ್ಪಿಗೆ ಸಂಬಂಧಿಸಿದಂತೆ ತೌಹೀದ್ ಜಮಾನ್ ಮಧುರೈನ ಕೋರಿಪಾಳ್ಯಂ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿತು.
ಈ ವೇಳೆ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮೂವರು ಪದಾಧಿಕಾರಿಗಳ ಮೇಲೆ ಕೇಸ್ ದಾಖಲಿಸಲಾಗಿದೆ.
ಜಾರ್ಖಂಡ್ ಹೈಕೋರ್ಟ್ ನ್ಯಾಯಾಧೀಶರ ಸಾವಿನ ಉದಾಹರಣೆ ಉಲ್ಲೇಖಿಸಿದ ಪದಾಧಿಕಾರಿಯೊಬ್ಬ ಹಿಜಾಬ್ ತೀರ್ಪಿನ ಮೇಲೆ ನ್ಯಾಯಾಧೀಶರು ಈಗ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ:
ಮಧುರೈನ ಕೋರಿಪಾಳ್ಯಂ ಪ್ರದೇಶದಲ್ಲಿ ತೌಹೀದ್ ಜಮಾನ್ ನಡೆಸಿದ ಕಾರ್ಯಕ್ರಮದ ನಂತರದಲ್ಲೂ ಕರ್ನಾಟಕ ಹೈಕೋರ್ಟ್ ಆದೇಶದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಲಾಗಿತ್ತು. ಅಲ್ಲದೇ ನ್ಯಾಯಾಧೀಶರಿಗೆ ಜೀವ ಬೆದರಿಕೆ ಹಾಕಲಾಗಿತ್ತು ಎಂದು ಆರೋಪಿಸಿ ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸಲಾಗಿದೆ.
ಬಿಜೆಪಿಯ ನಾಯಕಿ ವನತಿ ಶ್ರೀನಿವಾಸನ್ ಟ್ವೀಟ್:
ಬಿಜೆಪಿಯ ಹಿರಿಯ ನಾಯಕಿ ವನತಿ ಶ್ರೀನಿವಾಸನ್ ಟ್ವಿಟರ್ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ದೂರಿನ ಮೇರೆಗೆ ಮಧುರೈ ಪೊಲೀಸರು ಮೂವರು ಟಿಎನ್ಟಿಜೆ ಪದಾಧಿಕಾರಿಗಳ ವಿರುದ್ಧ ಐಪಿಸಿಯ 153(ಎ),505(1)(ಸಿ),505(2),506(1) ಆರ್/ಡಬ್ಲ್ಯು 109 ಐಪಿಸಿ ಸೇರಿದಂತೆ ಐದು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳ ಪತ್ತೆಗೆ ಮಧುರೈ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
0 Comments