ಬೆಂಗಳೂರು, ಫೆ 17: ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಹಾಗೂ ಕಲಾಪವನ್ನು ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಿ ಎಂಬುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಗ್ರಹ. ಕಲಾಪವನ್ನು ನಡೆಸುವ ಶಕ್ತಿ ಸರಕಾರಕ್ಕೆ ಇಲ್ಲದಿದ್ದರೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಕುಮಾರಸ್ವಾಮಿಯವರು ಸರಕಾರದ ವಿರುಧ್ದವು ಕೂಡ ಗುಡುಗಿದರು. ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸರಕಾರಕ್ಕೆ ಮಾಡಿದ ಒತ್ತಾಯವಿದು.
ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಲಾಪವನ್ನು ಹಾಳು ಮಾಡುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಕೇಸರಿ ಬಾವುಟದ ವಿಷಯ ಇಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳು ಮಾಡಿದರು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಗುಡುಗಿದರು.
ಹತ್ತು ನಿಮಿಷ ಧರಣಿ ಮಾಡುವುದು, ಆಮೇಲೆ ಸದನವನ್ನು ಮುಂದಕ್ಕೆ ಹಾಕುವುದು, ಕಲಾಪ ನಡೆಸುವ ರೀತಿ ಇದಲ್ಲ. ಯಾವ ಪುರುಷಾರ್ಥಕ್ಕೆ ಅಧಿವೇಶನವನ್ನು ಕರೆದಿದ್ದೀರಿ. ಸರಕಾರಕ್ಕೆ ಸದನವನ್ನು ಸಕ್ರಮವಾಗಿ ನಡೆಸುವ ಶಕ್ತಿ ಮತ್ತು ಬದ್ಧತೆ ಇಲ್ಲದಿದ್ದರೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ. ಸುಖಾ ಸುಮ್ಮನೆ ದಿನಕ್ಕೆ 1.5ಯಿಂದ 2 ಕೋಟಿ ರೂಪಾಯಿಯಷ್ಟು ಜನರ ತೆರಿಗೆಯನ್ನು ಯಾಕೆ ಪೋಲು ಮಾಡುತ್ತೀರಿ. ಕೇವಲ ಟಿಎ, ಡಿಎ ಪಡೆಯಲು ಕಲಾಪ ನಡೆಸಬೇಡಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷದ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ವೆಂಕಟರಾವ್ ನಾಡಗೌಡ ಅವರು ಹಾಜರಿದ್ದರು.
Varthajala daily, Bengaluru
0 Comments