ಉಡುಪಿ, ಫೆ ೦9: ಕೇಸರಿ ಶಾಲು ಹಾಗೂ ಹಿಜಾಬ್ ಸಂಘರ್ಷ ವಿಚಾರದಲ್ಲಿ ಪ್ರಮೋದ್ ಮುತಾಲಿಕ್, ಸಂಸದ ಪ್ರತಾಪ್ ಸಿಂಹ, ಬಿಜೆಪಿ ಶಾಸಕರು ಹಾಗೂ ಸಚಿವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದು ಅವರ ವಿರುದ್ಧ ಸೂಕ್ತ ತನಿಖೆ ನಡೆಯಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಘಟಕದ ಅಧ್ಯಕ್ಷ ಅತಾವುಲ್ಲಾ ಪುಂಜಾಲ್ಕಟ್ಟೆ ಒತ್ತಾಯಿಸಿದರು.
ಇಂದು, ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಪ್ರಕರಣ ನ್ಯಾಯಾಲಯದಲ್ಲಿದ್ದು, ನ್ಯಾಯ ಸಿಗುವ ವಿಶ್ವಾಸವಿದೆ. ಸಿಎಫ್ಐ ಹೋರಾಟ ನ್ಯಾಯಾಲಯದ ತೀರ್ಪಿನ ವಿರುದ್ಧವಲ್ಲ, ಬದಲಾಗಿ ಸರ್ಕಾರದ ಧೋರಣೆಯ ವಿರುದ್ಧ ಎಂದರು.
ಉಡುಪಿ ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದಿನಿ0ದಲೂ ಹಿಜಾಬ್ ಧರಿಸುತ್ತಿರಲಿಲ್ಲ ಎಂದು ಶಾಸಕರು ಜನರಿಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಆದರೆ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಂದಿನಿ0ದಲೂ ಸ್ಕಾರ್ಫ್ ಧರಿಸುತ್ತಿದ್ದ ಬಗ್ಗೆ ಫೋಟೊ ದಾಖಲೆಗಳಿವೆ ಎಂದು ಅತಾವುಲ್ಲ ಹೇಳಿದರು.
ವಿದ್ಯಾರ್ಥಿನಿಯರು ಪ್ರತ್ಯೇಕವಾಗಿ ಹಿಜಾಬ್ ಧರಿಸಬೇಕು ಎಂಬ ಬೇಡಿಕೆ ಇರಿಸಿಲ್ಲ. ಯೂನಿಫಾರಂ ಜತೆಯಲ್ಲಿ ಬಂದಿರುವ ವೇಲನ್ನು ಸ್ಕಾರ್ಫ್ ಆಗಿ ಬಳಸಲಷ್ಟೆ ಒತ್ತಾಯಿಸುತ್ತಿದ್ದಾರೆ. ಅದಕ್ಕೂ ಸರ್ಖಾರ ಅವಕಾಶ ನಿರಾಕರಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಮು0ದಿನ ಸರಣಿ ಚುನಾವಣೆಗಳ ಹಿನ್ನೆಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷವನ್ನು ಮುನ್ನಲೆಗೆ ತಂದು ಕೋಮು ಧ್ರವೀಕರಣಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿಂದೂ ಹಾಗೂ ಮುಸ್ಲಿಂ ವಿದ್ಯಾರ್ಥಿಗಳ ನಡುವಿನ ಸ್ನೇಹ ಸಂಬ0ಧದ ಮಧ್ಯೆ ಬಿರುಕು ಮೂಡಿಸಲಾಗುತ್ತಿದೆ ಎಂದರು. ಇದೆಲ್ಲ ಬಿಜೆಪಿಯ ಕುತಂತ್ರ ಎಂದು ಗುಡುಗಿದರು.
ಹಿಜಾಬ್ ವಿಚಾರವನ್ನು ಮುಂದಿಟ್ಟುಕೊ0ಡು ಶಾಸಕ ರಘುಪತಿ ಭಟ್ ಹಾಗು ಇತರೆ ಬಿಜೆಪಿ ನಾಯಕರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮರ್ಯಾದೆ ತೆಗೆಯಲು ಹೊರಟಿದ್ದಾರೆ. ಸುಖಾಸುಮ್ಮನೆ ಕ್ಯಾಂಪಸ್ ಫ್ರಂಟ್ ಹೆಸರನ್ನು ವಿವಾದದಲ್ಲಿ ಥಳಕು ಹಾಕುತ್ತಿದ್ದಾರೆ ಎಂದು ಬಿಜೆಪಿಯ ಪಕ್ಷದವರಿಗೆ ತಿರುಗೇಟು ನೀಡಿದರು.
ಹಿಜಾಬ್ ಧರಿಸಿ ಹೋಗುವಂತೆ, ಪ್ರತಿಭಟನೆ ನಡೆಸುವಂತೆ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ಫ್ರಂಟ್ ಪ್ರಚೋದನೆ ನೀಡಿಲ್ಲ. ಆದರೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ವಿದ್ಯಾರ್ಥಿನಿಯರು ನಡೆಸುತ್ತಿರುವ ಪ್ರತಿಭಟನೆಗೆ ಸಹಾಯ ನೀಡುತ್ತಿದೆ. ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರ ಪರವಾಗಿ ನಿಂತಿದೆ ಎಂದು ಅತಾವುಲ್ಲ ಸ್ಪಷ್ಟನೆ ನೀಡಿದರು.
Varthajala Daily, Bengaluru
0 Comments