ಎಸಿಬಿ ಪತ್ತೆ ಮಾಡಿರುವ ಬಿಬಿಎಂಪಿಯ ಅಕ್ರಮಗಳಲ್ಲಿ ಪ್ರಭಾವಿ ಸಚಿವರು ಹಾಗೂ ಬೆಂಗಳೂರಿನ ಶಾಸಕರುಗಳ ಪಾತ್ರ ಮಹತ್ವದ್ದಾಗಿದ್ದು, ಕೇವಲ ಅಧಿಕಾರಿಗಳನ್ನು ಬಲಿಪಶು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಟಿ.ನಾಗಣ್ಣ, “ಎಸಿಬಿ ಅಧಿಕಾರಿಗಳು ಏಕಕಾಲದಲ್ಲಿ 27 ಕಚೇರಿಗಳ ಮೇಲೆ ದಾಳಿ ಮಾಡಿ, ಸುಮಾರು 300 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೊತ್ತದ ಹಲವು ಅಕ್ರಮಗಳನ್ನು ಬಯಲು ಮಾಡಿರುವುದು ಶ್ಲಾಘನೀಯ. ಆದರೆ ಈ ಎಲ್ಲ ಅಕ್ರಮಗಳು ಬೆಂಗಳೂರಿನ ಶಾಸಕರು ಹಾಗೂ ಸಚಿವರ ಅಣತಿಯ ಮೇರೆಗೆ ನಡೆಯುತ್ತಿದೆ. ಎಸಿಬಿಯು ಕಾಟಾಚಾರಕ್ಕೆಂಬಂತೆ ಕೇವಲ ಅಧಿಕಾರಿಗಳನ್ನು ಹೊಣೆ ಮಾಡಿ, ಶಾಸಕರು ಹಾಗೂ ಸಚಿವರನ್ನು ಪಾರು ಮಾಡುತ್ತಿದೆ. ಭ್ರಷ್ಟ ಅಧಿಕಾರಿಗಳ ಜೊತೆ ಶಾಮೀಲಾಗಿ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಕ್ರಮಕ್ಕೆ ಕಾರಣರಾದ ಜನಪ್ರತಿನಿಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು” ಎಂದು ಆಗ್ರಹಿಸಿದರು.
“ಬೆಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳಿಗೆ ಕಾನೂನುಬಾಹಿರವಾಗಿ ಅನುಮತಿ ನೀಡುವುದು ಸಾಮಾನ್ಯವಾಗಿದೆ. ಕಾಮಗಾರಿಗಳಿಗೆ ಸಂಬಂಧಿಸಿ ಒಂದೇ ಕೆಲಸಕ್ಕೆ ಎರಡೆರಡು ಬಿಲ್ ಮಾಡಿ ಸರ್ಕಾರದ ಬೊಕ್ಕಸವನ್ನು ಲೂಟಿ ಮಾಡಲಾಗುತ್ತಿದೆ. ಕಮರ್ಷಿಯಲ್ ಕಟ್ಟಡಗಳನ್ನು ರೆಸಿಡೆನ್ಸಿಯಲ್ ಕಟ್ಟಡವೆಂದು ತೋರಿಸಿ ತೆರಿಗೆ ವಂಚನೆ ಮಾಡಲು ಬಿಬಿಎಂಪಿಯ ಭ್ರಷ್ಟ ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ಇವೆಲ್ಲದರಲ್ಲಿ ಶಾಸಕರು ಹಾಗೂ ಸಚಿವರಿಗೆ ಕಮಿಷನ್ ಹೋಗುತ್ತಿದ್ದು, ಅವರ ವಿರುದ್ಧವೂ ತನಿಖೆ ನಡೆದರೆ ಸತ್ಯ ಹೊರಬರಲಿದೆ” ಎಂದು ಬಿ.ಟಿ.ನಾಗಣ್ಣ ಹೇಳಿದರು.
“ಬೆಂಗಳೂರಿನ ಅದೂರು, ರಾಂಪುರ, ಸೀಗೆಹಳ್ಳಿ, ವೈಟ್ಫೀಲ್ಡ್ ಮುಂತಾದ ಕಡೆಗಳಲ್ಲಿ ಟಿಡಿಆರ್ಗೆ ಸಂಬಂಧಿಸಿ ತಮ್ಮ ಸಂಬಂಧಿಕರು ಹಾಗೂ ಪ್ರಭಾವಿಗಳ ಜೊತೆ ಕೈಜೋಡಿಸಿ ಬಿಬಿಎಂಪಿ ಅಧಿಕಾರಿಗಳು ಭಾರೀ ಅಕ್ರಮ ಎಸಗಿದ್ದಾರೆ. ಜಾಹೀರಾತು ಪ್ರದರ್ಶನವು ದೊಡ್ಡ ದಂಧೆಯಾಗಿದ್ದು, ಸಚಿವರು ಹಾಗೂ ಶಾಸಕರ ಒತ್ತಡಕ್ಕೆ ಮಣಿದು ಪ್ರಭಾವಿಗಳಿಂದ ಶುಲ್ಕ ಪಡೆಯದೇ ಜಾಹೀರಾತು ಪ್ರದರ್ಶಿಸಲಾಗುತ್ತಿದೆ. ಇವೆಲ್ಲದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ಕೇವಲ ದಾಳಿ ನಡೆಸಿ ಸುಮ್ಮನಾಗುವ ಎಸಿಬಿ ಅಧಿಕಾರಿಗಳ ನಡೆಯು ಅಕ್ರಮ ಎಸಗುವವರಿಗೆ ವರವಾಗಿದೆ” ಎಂದು ಬಿ.ಟಿ.ನಾಗಣ್ಣ ಹೇಳಿದರು.
0 Comments