ಯಲಹಂಕ ವಿಧಾನಸಭಾ ಕ್ಷೇತ್ರದ ದೊಡ್ಡಬೆಟ್ಟಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಮುಚ್ಚಲ್ಪಟ್ಟಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಪುನರಾರಂಭಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ಪ್ರತಿಭಟನೆ ನಡೆಸಿತು. ಬೆಳಗ್ಗೆಯಿಂದ ಆರಂಭವಾಗಿ ಅಹೋರಾತ್ರಿ ನಡೆಯಬೇಕಿದ್ದ ಪ್ರತಿಭಟನೆಯು ಸಂಜೆ ವೇಳೆ ಬಿಬಿಎಂಪಿಯ ಜಂಟಿ ಆಯುಕ್ತರಾದ ಪೂರ್ಣಿಮಾರವರು ಸ್ಥಳಕ್ಕೆ ಆಗಮಿಸಿ ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ಥಳದಲ್ಲಿಯೇ ಬೀಗವನ್ನು ಒಡೆಸಿ ಆರೋಗ್ಯ ಕೇಂದ್ರದ ಪರಿವೀಕ್ಷಣೆ ಮಾಡಲಾಯಿತು. ಮುಖ್ಯ ಆಯುಕ್ತರ ಅನುಮೋದನೆಯ ನಂತರ ಹತ್ತು ದಿನದೊಳಗೆ ಆರೋಗ್ಯ ಕೇಂದ್ರ ತೆರೆಯುವುದಾಗಿ ಭರವಸೆ ನೀಡಿದ್ದರಿಂದ ಅಂತ್ಯಗೊಂಡಿತು.
ಆರೋಗ್ಯ ಕೇಂದ್ರದ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಎಚ್.ಡಿ.ಬಸವರಾಜು, ವೈಯಕ್ತಿಕ ಹಿತಾಸಕ್ತಿ ಹಾಗೂ ಅನ್ಯ ಉದ್ದೇಶಕ್ಕೆ ವಾರ್ಡಿನ ಬಡಜನತೆಯ ಆರೋಗ್ಯಕ್ಕೆ ಸಂಬಂಧಿಸಿ ರಾಜಕೀಯ ಮಾಡುತ್ತಿರುವ ಶಾಸಕ ಎಸ್.ಆರ್.ವಿಶ್ವನಾಥ್ ಧೋರಣೆ ಸರಿಯಲ್ಲ. ಸುಮಾರು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆರೋಗ್ಯ ಕೇಂದ್ರದಿಂದ ಜನರಿಗೆ ಯಾವುದೇ ಲಾಭ ಸಿಗದಂತೆ ಮಾಡಿದ್ದಾರೆ. ಸಣ್ಣಪುಟ್ಟ ಕಾಯಿಲೆ ಬಂದರೂ ಇಲ್ಲಿನ ಜನರು ಸಾವಿರಾರು ರೂಪಾಯಿಗೂ ಹೆಚ್ಚು ಖರ್ಚು ಮಾಡಿಕೊಂಡು ದೂರದ ಏರಿಯಾಗಳಿಗೆ ಹೋಗಬೇಕಾಗಿದೆ” ಎಂದು ಹೇಳಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸುಹಾಸಿನಿ ಫಣಿರಾಜ್ ಮಾತನಾಡಿ, “ಮೂರು ವರ್ಷಗಳಿಂದ ಪಾಳು ಬಿದ್ದಿದ್ದ ಕಟ್ಟಡವನ್ನು ಆಮ್ ಆದ್ಮಿ ಪಾರ್ಟಿಯು ಸ್ವಚ್ಛಗೊಳಿಸಿ ಕೊಟ್ಟಿದೆ. ಆರೋಗ್ಯ ಕೇಂದ್ರವನ್ನು ಪುನರಾರಂಭ ಮಾಡಬೇಕು ಎಂದು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಶಾಸಕರ ಪಿತೂರಿಯಿಂದಾಗಿ ಅಧಿಕಾರಿಗಳು ಆರೋಗ್ಯ ಕೇಂದ್ರ ತೆರೆಯಲು ಮುಂದಾಗುತ್ತಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಬೇಕಾದ ಶಾಸಕರೇ ಇಲ್ಲಿ ದೊಡ್ಡ ಸಮಸ್ಯೆಯಾಗಿರುವುದು ದುರಂತ” ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಬಿ.ಟಿ. ನಾಗಣ್ಣ , ಚೆನ್ನಪ್ಪಗೌಡ, ನಂಜಪ್ಪ ಕಾಳೇಗೌಡ, ಜಗದೀಶ್ ವಿ ಸದಂ, ಸುರೇಶ್ ರಾಥೋಡ್, ಕುಶಲಸ್ವಾಮಿ, ನಿತಿನ್ ರೆಡ್ಡಿ, ಅಶೋಕ್ ಮೃತ್ಯುಂಜಯ, ಡಾ. ಸತೀಶ್ ಕುಮಾರ್, ಮಂಜುನಾಥ ಸ್ವಾಮಿ ಫಣಿರಾಜ್ ಹಾಗೂ ಇನ್ನಿತರ ಮುಖಂಡರು, ಕಾರ್ಯಕರ್ತರು ಮತ್ತು ನೂರಾರು ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
0 Comments