Ticker

6/recent/ticker-posts

Ad Code

Responsive Advertisement

ನೂತನ ಡಿಜೆಪಿ ನೇಮಕ ಮಾಡಿದ ಪಂಜಾಬ್ ಸರ್ಕಾರ!


ಪಂಜಾಬ್, ಜ 08: ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ, ಪಂಜಾಬ್ ಸರ್ಕಾರಕ್ಕೆ ತೀವ್ರ ಹಿನ್ನಡೆ. ಭದ್ರತಾ ಲೋಪದಿಂದ ಹೆಚ್ಚಾದ ಟೀಕೆ, ಲೋಪದ ಹಿಂದೆ ಪಂಜಾಬ್ ಸರ್ಕಾರ ಹಾಗೂ ಪೊಲೀಸರ ಪಿತೂರಿ ಆರೋಪ. ಸತತ ಟೀಕೆ, ಆರೋಪದ ಬೆನ್ನಲ್ಲೇ ನೂತನ ಡಿಜಿಪಿ ನೇಮಕ ಮಾಡಿದ ಸರ್ಕಾರ.

ಪ್ರಧಾನಿ ನರೇಂದ್ರ ಮೋದಿ ಭೇಟಿ ವೇಳೆ ನಡೆದ ಭದ್ರತಾ ಲೋಪ ಪಂಜಾಬ್ ಕಾಂಗ್ರೆಸ್ ಸರ್ಕಾರ ಹಾಗೂ ಪೊಲೀಸರ ಉದ್ದೇಶಪೂರ್ವಕ ಕೃತ್ಯ ಅನ್ನೋ ಆರೋಪಗಳು ಬಲವಾಗಿ ಕೇಳಿಬರುತ್ತಿದೆ. ಪಂಜಾಬ್ ಪೊಲೀಸರೇ ಪ್ರತಿಭಟನಾಕಾರರನ್ನು ಕರೆತಂದಿದ್ದರು ಅನ್ನೋ ಆರೋಪವೂ ಇದೆ. ಭದ್ರತಾ ಲೋಪಕ್ಕೆ ನೇರ ಕಾರಣವಾಗಿರುವ ಪಂಜಾಬ್ ಪೊಲೀಸ್ ಡಿಜಿಪಿ ಅಮಾನತು, ಸಿಎಂ ಚರಣಜಿತ್ ಸಿಂಗ್ ಚನಿ ರಾಜೀನಾಮೆ ಆಗ್ರಹಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಪಂಜಾಬ್ ಸರ್ಕಾರ ನೂತನ ಡಿಜಿಪಿಯನ್ನು ನೇಮಕ ಮಾಡಿದೆ. ನೂತನ ಪೊಲೀಸ್ ಡಿಜಿಪಿಯಾಗಿ ವೀರೇಶ್ ಕುಮಾರ್ ಭವ್ರಾ ಅವರನ್ನು ಪಂಜಾಬ್ ಸರ್ಕಾರ ನೇಮಕ ಮಾಡಿದೆ.

ಕಳೆದ ಮೂರು ತಿಂಗಳಲ್ಲಿ ಪಂಜಾಬ್ ಸರ್ಕಾರ ೩ನೇ ಡಿಜಿಪಿ ನೇಮಕ ಮಾಡಿದೆ. ಎರಡು ವರ್ಷಗಳ ಅವಧಿಗೆ ಹೊಸ ಡಿಜಿಪಿಯನ್ನು ಪಂಜಾಬ್ ಸರ್ಕಾರ ನೇಮಕ ಮಾಡಿದೆ. ೧೯೮೭ನೇ ಬ್ಯಾಚ್ ಐಪಿಎಸ್ ಅಧಿಕಾರಿ, ಪ್ರಸಕ್ತ ಪಂಜಾಬ್ ಇಂಟೆಲಿಜೆನ್ಸ್ ಬ್ಯೂರೋನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಂಜಾಬ್ ಸರ್ಕಾರ ಮೂವರು ಅಧಿಕಾರಿಗಳ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ವಿರೇಶ್ ಕುಮಾರ್ ಭವ್ರಾ, ಮಾಜಿ ರಾಜ್ಯ ಪೊಲೀಸ್ ಮುಖ್ಯಸ್ಥ ದಿನ್ಕರ್ ಗುಪ್ತಾ ಹಾಗೂ ಐಪಿಎಎಸ್ ಅಧಿಕಾರಿ ಪ್ರಬೋಧ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಇದರಲ್ಲಿ ರಾಜ್ಯಪಾಲರು ವೀರೇಶ್ ಕುಮಾರ್ ಭವ್ರಾ ಹೆಸರನ್ನು ಅಂತಿಮಗೊಳಿಸಿದ್ದಾರೆ. ಸದ್ಯ ಪಂಜಾಬ್ ಡಿಜಿಪಿಯಾಗಿರುವ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಸ್ಥಾನಕ್ಕೆ ಇದೀಗ ವೀರೇಶ್ ಕುಮಾರ್ ಭವ್ರಾ ಅವರನ್ನು ಆಯ್ಕೆ ಮಾಡಲಾಗಿದೆ. 

ಪಂಜಾಬ್ ವಿಧಾನಸಭಾ ಚುನಾವಣೆ ೨೦೨೨ ದಿನಾಂಕ ಘೋಷಣೆಗೂ ಮುನ್ನ ಪಂಜಾಬ್ ಸರ್ಕಾರ ನೂತನ ಡಿಜೆಪಿ ನೇಮಕ ಘೋಷಣೆ ಮಾಡಿದೆ. ಹೊಸ ಡಿಜಿಪಿ ನೇಮಕ ಹಿಂದೆ ಪ್ರಧಾನಿ ಭದ್ರತಾ ಲೋಪ ಕಾರಣ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹಾಲಿ ಡಿಜಿಪಿ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಮೇಲೆ ಇದೀಗ ಭದ್ರತಾ ಲೋಪ ತೂಗುಗತ್ತಿ ನೇತಾಡುತ್ತಿದೆ. ಪಂಜಾಬ್ ಸರ್ಕಾರ ನೇಮಿಸಿದ ತನಿಖಾ ಸಮಿತಿ ಮುಂದೆ ಸಿರ್ಧಾರ್ಥ್ ಚಟ್ಟೋಪಾಧ್ಯಾಯ ಹಾಜರಾಗಿದ್ದಾರೆ. ಸರ್ಕಾರಕ್ಕೆ ಭದ್ರತಾ ಲೋಪದ ಕುಣಿಕೆ ಬಿಗಿಯಾಗುತ್ತಿದೆ. ಇದರ ನಡುವೆ ಈ ಬೆಳವಣಿಗೆ ಇದೀಗ ಬಿಜೆಪಿ ಸೇರಿ ವಿಪಕ್ಷಗಳಿಗೆ ಆಹಾರವಾಗಿದೆ. ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಸೇರಿದಂತೆ ೧೩ ಪೊಲೀಸರ ಮೇಲೆ ಪ್ರಕರಣ ದಾಖಲಾಗಿದೆ. ಸರ್ಕಾರ ಈಗಾಗಲೇ ೩ ಸದಸ್ಯರ ಸಮಿತಿ ನೇಮಕ ಮಾಡಿದ್ದು, ತನಿಖೆ ಪ್ರಗತಿಯಲ್ಲಿದೆ. 

ಜನವರಿ ೫ ರಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಿಲನ್ಯಾಸ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಹವಾಮಾನ ವೈಪ್ಯರಿತ್ಯದಿಂದ ಹೆಲಿಕಾಪ್ಟರ್ ಪ್ರಯಾಣ ಮೊಟಕು ಗೊಳಿಸಿದ ಮೋದಿ, ರಸ್ತೆ ಮಾರ್ಗದ ಮೂಲಕ ಫಿರೋಜ್ಪುರ್ ತೆರಳಿದ್ದಾರೆ. ಆದರೆ ಮೋದಿ ಮಾರ್ಗದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದ್ದಾರೆ. ಇದರಿಂದ ಮೋದಿ ಫ್ಲೈವರ್ ಮೇಲೆ ೧೫ರಿಂದ ೨೦ ನಿಮಿಷಗಳ ಕಾಲ ಪ್ರತಿಭಟನಾಕಾರರ ನಡುವೆ ಸಿಲುಕಿದ್ದರು. ದೇಶದ ಇತಿಹಾಸದಲ್ಲಿ ನಡೆದ ಅತೀ ದೊಡ್ಡ ಭದ್ರತಾ ಲೋಪ ಇದಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

ಪ್ರಧಾನಿ ಮೋದಿ ಭದ್ರತಾ ಲೋಪದ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ಕಳವಳ ವ್ಯಕ್ತಪಡಿಸಿದ್ದರು. ಇತ್ತ ಬಿಜೆಪಿ ಹಾಗೂ ಭಾರತದ ಮಾಜಿ ಡಿಜಿಪಿಗಳು ಭದ್ರತಾ ಲೋಪವೆಸಗಿದ ಪಂಜಾಬ್ ಸರ್ಕಾರ ಹಾಗೂ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Varthajala Daily, Bengaluru

Post a Comment

0 Comments

Ad Code

Responsive Advertisement