Ticker

6/recent/ticker-posts

Ad Code

Responsive Advertisement

ರಸ್ತೆ ಗುಂಡಿಗಳಿಗೆ ರಂಗೋಲಿ ಬಿಡಿಸಿ ಆಮ್‌ ಆದ್ಮಿ ಪಾರ್ಟಿ ಆಕ್ರೋಶ*

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚದಿರುವುದು ಹಾಗೂ ರಸ್ತೆ ಕಾಮಗಾರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ಆಮ್‌ ಆದ್ಮಿ ಪಾರ್ಟಿಯು ರಸ್ತೆ ಗುಂಡಿಗಳ ಸುತ್ತ ರಂಗೋಲಿ ಬಿಡಿಸುವ ಮೂಲಕ ಶನಿವಾರದಂದು ವಿನೂತನ ಪ್ರತಿಭಟನೆ ನಡೆಸಿತು.

ಮಾಧ್ಯಮಗಳೊಂದಿಗೆ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು, “ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ 20,000 ಕೋಟಿ ಖರ್ಚು ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಈಗ ಬಿಬಿಎಂಪಿ ಚುನಾವಣೆ ಸಮೀಪದಲ್ಲಿ ಇರುವಾಗ, ಮತ್ತೆ 6,500 ಕೋಟಿ ಖರ್ಚು ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಗುಣಮಟ್ಟದ ತೇಪೆ ಹಾಕಿ ಗುಂಡಿಗಳನ್ನು ತುಂಬಿಸುವ ಬದಲು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಗುಂಡಿಗಳಿಗೆ ಸಂಬಂಧಿಸಿ ತಪ್ಪು ಮಾಹಿತಿ ನೀಡಿ ಹೈಕೋರ್ಟ್‌ನಿಂದ ಬಿಬಿಎಂಪಿಯು ಛೀಮಾರಿ ಹಾಕಿಸಿಕೊಂಡಿದೆ. ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಸುಳ್ಳು ಹೇಳುತ್ತಿರುವ ಸರ್ಕಾರಕ್ಕೆ ಕಾರಣಬೇಕೆಂದೇ ರಂಗೋಲಿ ಹಾಕಿ ಅಲಂಕಾರ ಮಾಡಲಾಗುತ್ತಿದೆ” ಎಂದು ಹೇಳಿದರು.


ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷರಾದ ಮೋಹನ್‌ ದಾಸರಿ ಮಾತನಾಡಿ, “ಕಳೆದ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಜನರು ರಸ್ತೆ ಗುಂಡಿಗಳಿಗೆ ಬಲಿಯಾಗಿದ್ದಾರೆ. ಲೆಕ್ಕವಿಲ್ಲದಷ್ಟು ಅಪಘಾತಗಳು ಸಂಭವಿಸಿವೆ. ಆದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ, ದುರಸ್ತಿಪಡಿಸಲಾದ ರಸ್ತೆಗಳಲ್ಲೂ ಮತ್ತೆ ಗುಂಡಿಗಳಾಗಿವೆ. ಹಾಕಲಾಗಿದ್ದ ತೇಪೆಯು ಒಂದೇ ಮಳೆಗೆ ಕಿತ್ತುಹೋಗಿದೆ. ಒಂದೆಡೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರೆ, ಮತ್ತೊಂದೆಡೆ ರಸ್ತೆ ಕಾಮಗಾರಿ ಹೆಸರಿನಲ್ಲಿ ಸಾವಿರಾರು ಕೋಟಿ ತೆರಿಗೆ ಹಣವು ಜನಪ್ರತಿನಿಧಿಗಳ ಜೇಬು ಸೇರಿದೆ. ಇವೆರಡನ್ನೂ ನೋಡಿ ಎಎಪಿಯು ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ಹೇಳಿದರು.

ಕಾಟನ್‌ಪೇಟೆಯ ತವಕ್ಕಲ್‌ ಮಸ್ತಾನ್‌ ದರ್ಗಾ






, ಬಸವೇಶ್ವರ ನಗರ ಪೊಲೀಸ್‌ ಸ್ಟೇಷನ್‌, ವಸಂತ ನಗರದ ಚಂದ್ರಿಕಾ ಹೋಟೆಲ್‌, ಮಲ್ಲೇಶ್ವರಂನ ದತ್ತಾತ್ರೇಯ ದೇವಸ್ಥಾನ ಹಾಗೂ ಬಳೇಪೇಟೆ ಸಮೀಪ ವಿವಿಧ ರಸ್ತೆಗಳಲ್ಲಿರುವ ಗುಂಡಿಗಳ ಸುತ್ತ ರಂಗೋಲಿ ಬಿಡಿಸಿದ ಎಎಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪಕ್ಷದ ಮುಖಂಡರಾದ ಬಿ.ಟಿ.ನಾಗಣ್ಣ, ಜಗದೀಶ್‌ ವಿ ಸದಂ, ರಾಜಶೇಖರ್‌ ದೊಡ್ಡಣ್ಣ, ಉಷಾ ಮೋಹನ್‌, ಜಗದೀಶ್‌ ಚಂದ್ರ, ಗೋಪಿನಾಥ್, ಗುರುಮೂರ್ತಿ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

Post a Comment

0 Comments

Ad Code

Responsive Advertisement